Kannada NewsKarnataka NewsLatest

ಬೆಳಗಾವಿಯಿಂದ ಗೋವಾ- ಮಂಗಳೂರು, ಮೈಸೂರು ರೈಲು ಆರಂಭಿಸಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕುಂದಾನಗರಿ ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರ ಈ ಮೂರು ನಗರಗಳಿಗೆ ರೈಲು ಓಡಾಟ ಶೀಘ್ರ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ ಗೊಯಲ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಮಂಗಳವಾರ (ಫೆ.೨) ದಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯಲ್ ಅವರ ನವದೆಹಲಿ ಕಛೇರಿಗೆ ಭೇಟಿ ನೀಡಿದ ಅವರು, ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರವನ್ನು ಮೈಸೂರವರೆಗೆ ವಿಸ್ತರಿಸಬೇಕು, ಮಂಗಳೂರ ರೈಲು ಓಡಾಟದಿಂದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಹಾಗೂ ಗೋವಾ ರೈಲು ಓಡಾಟ ಪ್ರಾರಂಭಿಸುವುದರಿಂದ ಈ ಭಾಗದ ರೈತರ ತರಕಾರಿ, ಹಾಲು ಉತ್ಪಾದಕರಿಗೆ ಬಹಳ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ಮಾರ್ಗದಲ್ಲಿ ಈ ಹಿಂದೆ ಮೀಟರ್ ಗೆಜ್ ಮಾರ್ಗದಲ್ಲಿ ರೈಲು ಓಡಾಡುತ್ತಿದ್ದವು ಈಗ ಬ್ರಾಡ್ ಗೆಜ್ ಮಾರ್ಗ ನಿರ್ಮಾಣವಾಗಿದ್ದರೂ ಕೆಲವು ರೈಲುಗಳ ಓಡಾಟ ನಿಲ್ಲಿಸಲಾಗಿದ್ದು, ಅವುಗಳನ್ನು ಮರಳಿ ಪ್ರಾರಂಭಿಸುವ ಮೂಲಕ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸ್ಪಂದಿಸಬೇಕೆಂದರು.
ಹುಬ್ಬಳ್ಳಿ-ಮೀರಜ್ ರೈಲ್ವೆ ಮಾರ್ಗದ ದ್ವಿಪಥ ಕಾಮಗಾರಿಯನ್ನು ತ್ವರಿತಗೊಳಿಸುವ ಮೂಲಕ ಹೆಚ್ಚಿನ ರೈಲುಗಳ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಈ ಮಾರ್ಗದಲ್ಲಿರುವ ಎಲ್ಲಾ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕೆಂದು ತಿಳಿಸಿದರು. ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದ ಭೌಗೊಳಿಕ ವ್ಯಾಪ್ತಿಯ ವಿಜಯನಗರದವರೆಗೆ ಮಾತ್ರ ಇದ್ದು, ಅದನ್ನು ಮಿರಜ್‌ವರೆಗೆ ವಿಸ್ತರಿಸಿ ಹುಬ್ಬಳ್ಳಿ ಮಿರಜ್ ಪಾಂಸೆಂಜರ್ ರೈಲು ಓಡಾಟ ಆರಂಭಿಸಬೇಕು. ಮಹಾನಗರ ಬೆಂಗಳೂರು ಬಿಟ್ಟು, ಅತಿ ಹೆಚ್ಚು ಜನರ ಸಂಪರ್ಕ ಸೇತುವೆಯಂತಿದ್ದ ಬೆಳಗಾವಿಗೆ ರೈಲ್ವೆ ಸೌಲಭ್ಯಕ್ಕೆ ವಿಶೇಷ ಗಮನ ನೀಡಬೇಕೆಂದು ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button