*ಪಾಲಕರ ಕನಸನ್ನು ನನಸಾಗಿಸುವುದೇ ಮಕ್ಕಳ ಗುರಿಯಾಗಿರಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಸುಜ್ಞಾನ ಸಭಾಂಗಣ ಉದ್ಘಾಟಿಸಿ, ಮಕ್ಕಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಗಳು ಕೇವಲ ಪಠ್ಯಗಳಿಗೆ ಮೀಸಲಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ತಂದೆ ತಾಯಿ ಕಂಡ ಕನಸನ್ನು ನನಸಾಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಕರೆ ನೀಡಿದರು.
ಉಡುಪಿಯ ಅಂಚೆ ಪರ್ಕಳದಲ್ಲಿರುವ ಶೆಟ್ಟಿಬೆಟ್ಟು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸುಜ್ಞಾನ ಸಭಾಂಗಣವನ್ನು’ ಉದ್ಘಾಟಿಸಿ, ಬಳಿಕ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದ ಸಚಿವರು, ಶೈಕ್ಷಣಿಕ ಮೂಲಸೌಕರ್ಯ ಬೆಳೆಸುವುದು ಇಂದಿನ ಅತ್ಯಗತ್ಯ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ಹಿರಿಯರನ್ನು ಆದರ್ಶ ವಾಗಿ ಇಟ್ಟುಕೊಳ್ಳಬೇಕು. ಮಕ್ಕಳೇ ಆಗಲಿ, ಹಿರಿಯರೇ ಆಗಲಿ ಕಲಿಕೆ ಎಂಬುದು ಮುಖ್ಯವಾಗಬೇಕು. ನಾನು 22 ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದೆ. ಕಳೆದ 25 ವರ್ಷಗಳಲ್ಲಿ ವಿವಿಧ ಹಂತಕ್ಕೇರಿ ಇಂದು ರಾಜ್ಯದ ಸಚಿವೆಯಾಗಿರುವೆ ಎಂದು ಹೇಳಿದರು .

ಸಭಾಂಗಣಕ್ಕೆ ಸುಜ್ಞಾನ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುತ್ತದೆ ಉಡುಪಿ ಜನ ಬುದ್ದಿವಂತರು ಅಂತ. ಜ್ಞಾನವೆಂದರೆ ಬೆಳಕು, ಸುಜ್ಞಾನವೆಂದರೆ ಬೆಳಕಿನ ಪ್ರಕರತೆ ದಟ್ಟವಾದ ಪ್ರಖರವಾದ ಬೆಳಕಿನೆಡೆಗೆ ಇಲ್ಲಿಯ ಕುಡಿಗಳು ಮುನ್ನಡೆದರೆ ಕರ್ನಾಟಕದ ಹೆಮ್ಮೆಯ ಶಿಕ್ಷಣ ಭವನ ಸುಜ್ಞಾನ ಭವನ ಆಗುತ್ತದೆ, ಹಾಗಾಗಲಿ ಎಂದು ಕೃಷ್ಣನಲ್ಲಿ ಬೇಡಿಕೊಳ್ಳುತ್ತೇನೆ ಎಂದರು.
ಇವತ್ತಿನ ದಿನಗಳಲ್ಲಿ ಮೊಬೈಲ್ ಎಂಬ ಹೂವಿನೊಳಗೆ ಮಕ್ಕಳು ಮಕರಂದವನ್ನು ಹೀರುತ್ತಿದ್ದಾರೆ. ನಾಳೆ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಕಳೆದುಹೋಗುತ್ತದೆ. ಪುನಃ ಮರಳಿ ಬರುವುದಿಲ್ಲ. ಹಾಗಾಗಿ ಮಕ್ಕಳು, ಪಾಲಕರು, ಶಿಕ್ಷಕರು ಸೇರಿದಂತೆ ನಾವೆಲ್ಲ ಬಹಳಷ್ಟು ಯೋಚಿಸಬೇಕಾದ ಸಂದರ್ಭದಲ್ಲಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ನ ಸಿಇಒ ಪ್ರತೀಕ್ ಬಾಯಲ್, ಡಿಡಿಪಿಐ ಲೋಕೇಶ್, ಬಿಇಒ ಶಬಾನಾ ಅಂಜುಂ, ಅಶ್ವಿನಿ ಪೂಜಾರಿ, ಸುಕೇಶ್ ಕುಂದರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.




