ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ನ ಖಾರ್ಕೀವ್ ನಗರದಲ್ಲಿ ರಷ್ಯಾ ಸೇನೆ ಅಟ್ಟಹಾಸಕ್ಕೆ ಭಾರತೀಯರು ಕಂಗಲಾಗಿದ್ದು, ಈ ನಡುವೆ ಭಾರ್ತೀಯ ರಾಯಭಾರ ಕಚೇರಿ ತಕ್ಷಣ ಖಾರ್ಕೀವ್ ನಗರ ತೊರೆಯುವಂತೆ ಸೂಚನೆ ನೀಡಿದೆ.
ರಾಯಭಾರ ಕಚೇರಿಯಿಂದ ಸೂಚನೆ ಬರುತ್ತಿದ್ದಂತೆ ಇನ್ನಷ್ಟು ಸಂಕಷ್ಟಕ್ಕೀಡಾಗಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಗಡಿಯತ್ತ ಬರಲು ಪರದಾಡುತ್ತಿದ್ದಾರೆ. ಒಂದೆಡೆ ರಷ್ಯಾ ನಿರಂತರ ಬಾಂಬ್, ಕ್ಷಿಪಣಿ ದಾಳಿ, ಮತ್ತೊಂದೆಡೆ ಸೈನಿಕರ ಅಟ್ಟಹಾಸ, ಇನ್ನೊಂದೆಡೆ ಗಡಿಯತ್ತ ಬರಲು ಯಾವುದೇ ವಾಹನ ವ್ಯವಸ್ಥೆಗಳು ಸಿಗುತ್ತಿಲ್ಲ. ಆದರೆ ರಾಯಭಾರ ಕಚೇರಿ ಮಾತ್ರ ಖಾರ್ಕಿವ್ ನಗರದಿದ ತಕ್ಷಣ ಹೊರಬರಲು ಸೂಚನೆ ನೀಡಿರುವುದು ವಿದ್ಯಾರ್ಥಿಗಳನ್ನು ಕಂಗೆಡಿಸಿದೆ.
ಬೇರೆದಾರಿಯಿಲ್ಲದೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಖಾರ್ಕೀವ್ ನಗರ ತೊರೆಯುತ್ತಿದ್ದು, ನಡೆದುಕೊಂಡು ಅಕ್ಕಪಕ್ಕದ ಹಳ್ಳಿಗಳತ್ತ ಸಾಗಿದ್ದಾರೆ. 20ಕ್ಕೂ ಹೆಚ್ಚು ಕಿ.ಮೀ ನಡೆದ ವಿದ್ಯಾರ್ಥಿಗಳು ರೈಲು ಮೂಲಕ ಗಡಿಗೆ ಬರಲು ಮುಂದಾಗಿದ್ದಾರೆ. ಆದರೆ ರೈಲು ನಿಲ್ದಾಣದಲ್ಲಿ ಉಕ್ರೇನಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವುದರಿಂದ ಅಲ್ಲಿಯೂ ಸಂಕಷ್ಟಕ್ಕೀಡಾಗಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ರೈಲು ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಭಾರತೀಯ ರಾಯಭಾರ ಕಚೇರಿ ವಿದ್ಯಾರ್ಥಿಗಳಿಗೆ ರೈಲಿನಲ್ಲಿ ಗಡಿಗೆ ಬರಲು ಅವಕಾಶ ನೀಡಲು ಉಕ್ರೇನ್ ಅಧಿಕಾರಿಗಳಿಗೆ ಮನವಿ ಮಾಡಿದೆ.
ಪ್ರಸ್ತುತ ಭಾರತೀಯ ವಿದ್ಯಾರ್ಥಿಗಳಿಗೆ ರೈಲು ಹತ್ತಲು ಅವಕಾಶ ನೀಡಲಾಗಿದೆ ಎಂದು ರಾಜ್ಯದ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿ ಕಿರಣ್ ಮಾಹಿತಿ ನೀಡಿದ್ದಾರೆ.
ಭಾರತೀಯರನ್ನು ಒತ್ತೆಯಾಳಾಗಿರಿಸಿಕೊಂಡ ಉಕ್ರೇನ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ