
ಪ್ರಗತಿವಾಹಿನಿ ಸುದ್ದಿ: ಹರಿಹರ ಪಂಚಮಸಾಲಿ ಗುರುಪೀಠದ ವಚನಾಂದ ಶ್ರೀ (ಶ್ವಾಸ ಗುರು) ಅವರನ್ನು ಉಚ್ಛಾಟನೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಭಕ್ತರು ಇಂದು ನಡೆಸಿದ್ದ ಲೆಕ್ಕ ಕೊಡಿ ಅಭಿಯಾನದ ಬಳಿಕ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಲಾಗಿದೆ.
ಲೆಕ್ಕ ಕೊಡಿ ಅಭಿಯಾನದ ಬಳಿಕ ನಡೆದ ಧರ್ಮದರ್ಶಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ 12 ಸದಸ್ಯರು ಈ ನಿರ್ಧಾರವನ್ನು ಸಮ್ಮತಿಸಿದ್ದು, ಸಂಸ್ಥಾಪಕ ಟ್ರಸ್ಟಿ ಬಸವರಾಜ್ ವಿರೋಧಿಸಿದ್ದರು. ಈ ನಡುವೆ ನಿಯಮ ಉಲ್ಲಂಘಿಸಿ ನೋಟಿಸ್ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಘಟನೆ ಪೀಠದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.
ಧರ್ಮದರ್ಶಿ ಸಮಿತಿಯ ನಿರ್ಧಾರದ ಬಗ್ಗೆ ಸಂಸ್ಥಾಪಕ ಟ್ರಸ್ಟಿ ಎಚ್. ಪಿ. ಬಸವರಾಜ್ ಕಿಡಿ ಕಾರಿದ್ದಾರೆ. ಸಭೆಯಲ್ಲಿ ವಚನಾನಂದ ಸ್ವಾಮೀಜಿಗಳನ್ನ ಮಠದ ಗುರು ಪೀಠದ ಉಚ್ಛಾಟನೆಗೆ ಸಮಿತಿ ಮುಂದಾದ ಕಾರಣ ಸಭೆಯಿಂದ ನಾನು ಹೊರಬಂದಿದ್ದೇನೆ. ಸಮಿತಿಯ ಈ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಭೆ ಕರೆಯುವ ಏಳು ದಿನ ಮೊದಲು ಧರ್ಮದರ್ಶಿ ಸಮಿತಿ ಸದಸ್ಯರಿಗೆ ನೋಟಿಸ್ ಕೊಡಬೇಕು. ಆದ್ರೆ ತಡ ರಾತ್ರಿ ಬಂದು ಸ್ವಾಮೀಜಿಗಳು ಇರುವ ಮಠದ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಜೊತೆಗೆ ಸ್ವಾಮೀಜಿ ವಿರುದ್ಧ ಇರುವ ಆರೋಪ ಪಟ್ಟಿ ಕೊಡಬೇಕು. ಇದ್ಯಾವುದನ್ನೂ ಮಾಡದೆ ಧರ್ಮದರ್ಶಿ ಸಮಿತಿ ಸಭೆ ನಡೆಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಇಂದು ಬೆಳಿಗ್ಗೆಯಿಂದಲೇ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿತ್ತು. ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದರು.




