Latest

ಗಮನ ಸೆಳೆದ ವೀರನಮನ ಬೀದಿ ನಾಟಕ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಉತ್ತರ ಕನ್ನಡದ ಕುಮಟಾ ಮೂಲದ ಹೆರವಟ್ಟದ ಪ್ರಮೋದ ಮೋಹನ ಹೆಗಡೆ ಅವರ ನೇತೃತ್ವದ ತಂಡದಿಂದ ಬೆಂಗಳೂರಿನ ಹಲವಡೆ “ವೀರನಮನ” ಎಂಬ ಬೀದಿ ನಾಟಕ ಆಯೋಜಿಸಲಾಗಿತ್ತು.

ಯುವಕ ಯುವತಿಯರು ಸೇರಿಕೊಂಡು ರಾಜಧಾನಿಯ ಬೀದಿಗಳಲ್ಲಿ ಕನ್ನಡದ ನೆಲದ ವೀರರ ಗಾಥೆ ಪ್ರಸ್ತುತಗೊಳಿಸಿದ್ದು ವಿಶೇಷವಾಗಿತ್ತು. ಅವರುಗಳೇ ಸ್ಥಾಪಿಸಿದ ಪರಹಿತಮ್ ಫೌಂಡೇಶನ್ ವತಿಯಿಂದ ಮಲ್ಲೇಶ್ವರ ಸ್ಯಾಂಕಿ ಕೆರೆ, ಗಾಂಧಿ ಬಜಾರ್, ಜಯನಗರ 4ನೇ ಬ್ಲಾಕ್, ಮತ್ತು ವಿಜಯನಗರ ತಿಂಡಿ ಬೀದಿ ಕಡೆಗಳಲ್ಲಿ ಕರ್ನಾಟಕದ ಪ್ರಚಲಿತದಲ್ಲಿ ಇಲ್ಲದ ವೀರರಾದ ಗೇರುಸೊಪ್ಪೆಯ ರಾಣಿ ಚನ್ನಭೈರಾದೇವಿ, ಬನವಾಸಿಯ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪ, ನೆಲಕ್ಕಾಗಿ, ಭಾಷೆಗಾಗಿ ಹೋರಾಡಿದ ಆರ್.ಎಸ್. ಹುಕ್ಕೇರಿಕರ್, ಉಮಾಬಾಯಿ ಕುಂದಾಪುರ ಹಾಗೂ ಕನ್ನಡದ ಕವಿ ಆಲೂರು ವೆಂಕಟರಾವ್ ಅವರ ಕುರಿತು ಮಾಹಿತಿ ನೀಡುವ 15 ನಿಮಿಷಗಳ ಸಣ್ಣ ನಾಟಕವನ್ನು ರಚಿಸಿ ಜನರ ಮುಂದೆ ಪ್ರಸ್ತುತ ಪಡಿಸಿದರು. ಇತಿಹಾಸ, ಸ್ಪಂದನೆಯ ಗುಣದಿಂದ ದೂರ ಸರಿಯುವ ಯುವ‌ಕ ಯುವತಿಯರ ನಡುವೆ ಈ ತಂಡದ ಕಲಾವಿದರು ‌ಅಚ್ಚರಿ‌ ಮೂಡಿಸಿದರು.

ಹದಿನೈದು ಜನರ ಈ ತಂಡ ದಲ್ಲಿ ಹಲವರು ಕಾಲೇಜು ವಿದ್ಯಾರ್ಥಿಗಳು. ನಾಟಕ ಕ್ಷೇತ್ರಕ್ಕೆ ಹೊಸಬರಾದ ಎಲ್ಲರೂ ಒಂದೇ ದಿನದಲ್ಲಿ ಅಭ್ಯಾಸ ಮಾಡಿ ಧೈರ್ಯದಿಂದ ಜನರ ಮುಂದೆ ನಿಂತಿದ್ದರು. ಅವರುಗಳೇ ಬರೆದು, ನಿರ್ದೇಶಿಸಿದ, ಅಭಿನಯಿಸಿದ ಅವರೆಲ್ಲರ ಶ್ರಮಕ್ಕೆ ನಾಟಕ ವೀಕ್ಷಿಸಿದ ಪ್ರತಿಯೊಬ್ಬರಿಂದ ಉತ್ತಮ ಪ್ರದರ್ಶನ ಇದು ಎಂಬ ಪ್ರತಿಕ್ರಿಯೆ ನೀಡಿದರು‌. ಚನ್ನಾಭೈರಾದೇವಿ ಕಾದಂಬರಿ ಕರ್ತೃ ಡಾ. ಗಜಾನನ ಶರ್ಮ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಾಶಿವ ನಗರದ ಹಿರಿಯರೊಬ್ಬರು ವೀಕ್ಷಿಸಿ, ಸದಾಶಿವ ನಗರ ಕ್ಲಬ್ ಗೆ ಅಭಿನಯಿಸಲು ಆಹ್ವಾನಿಸಿ ಗೌರವಿಸಿದರು.

ತಂಡದಲ್ಲಿ ಪ್ರಮೋದ ಹೆಗಡೆ, ಗಣೇಶ, ರಕ್ಷಿತ್, ಸೌಭಾಗ್ಯ, ರಶ್ಮಿತ್, ಶ್ರೀನಿಧಿ, ಕಾರ್ತಿಕ್, ಮಹೇಶ್ವರಿ, ರಚನಾ, ಹರ್ಷಿತಾ, ಐಶ್ವರ್ಯಾ, ಸುನಿತಾ, ರಂಜನಾ ರೇಷ್ಮಾ ಇತರರು ಇದ್ದರು.

ಇಂಥದೊಂದು ಜನಜಾಗೃತಿ ರಾಜ್ಯದ ಎಲ್ಲಡೆ‌ ನಡೆಯಬೇಕು ಎಂಬ ಅಭಿಪ್ರಾಯ‌ ಕೂಡ ಕೇಳಿ ಬಂತು.

ನನ್ನ ಸಹೋದರನನ್ನೇ ಕಳೆದುಕೊಂಡಷ್ಟು ನೋವಾಗಿದೆ; ಕುಂಬನಿ ಮಿಡಿದ ನಟ ರಾಮ್ ಚರಣ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button