*ಕಲಿಕೆಯ ಜೊತೆ ಸಾಮಾಜಿಕ ಮತ್ತು ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯ; ಇಂದಿನ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಕೊಳ್ಳಬೇಕು: ಕಮಿಷನರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿ ಟಿ ಯು ನ ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ ಎಸ್. ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿ ಟಿ ಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬೆಳಗಾವಿ ನಗರದ ಪೋಲಿಸ್ ಕಮಿಷನರ್ ಐಡಾ ಮಾರ್ಟಿನ್ ಮಾರ್ಬಾನಿಯಾಂಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು ಸಾಧನೆಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಅವಕಾಶಗಳು ಇವೆ. ಅವುಗಳನ್ನು ತಮ್ಮ ಕೌಶಲ್ಯ ಮತ್ತು ಜ್ಞಾನದಿಂದ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಲಿಕೆ ನಿರಂತರವಾಗಿದ್ದು ಪ್ರತಿ ಕ್ಷಣ ನಾವು ಕಲಿಯುತ್ತೇವೆ ತರಗತಿಯ ಪಾಠ ಎಷ್ಟು ಮುಖ್ಯವೋ ಸಾಮಾಜಿಕ ಮತ್ತು ಸಾಮಾನ್ಯ ಜ್ಞಾನವು ಅಷ್ಟೇ ಮುಖ್ಯ ಎಂದು ಹೇಳಿದರು. ತಮ್ಮ ಜ್ಞಾನ ಮತ್ತು ಆಸಕ್ತಿಯನುಸಾರ ಅವಕಾಶಗಳನ್ನು ಮತ್ತು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬದುಕಿನಲ್ಲಿ ಸಾಧಿಸಬಹುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್, ಬದುಕಿನಲ್ಲಿ ಯಶಸ್ಸು ಪಡೆಯಬೇಕೆಂದರೆ ಕೇವಲ ಅಂಕಗಳು ಮುಖ್ಯವಾಗುವುದಿಲ್ಲ ಅದರ ಜೊತೆಗೆ ಇವತ್ತಿನ ಅವಶ್ಯಕೆತೆಗೆ ಅನುಸಾರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಆರಂಭದಲ್ಲಿ ವಿ ಟಿ ಯು ಕುಲಸಚಿವರಾದ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ ಎನ್ ಶ್ರೀನಿವಾಸ ವಂದಿಸಿದರು. ಈ ಸಮಯದಲ್ಲಿ ವೇದಿಕೆ ಮೇಲೆ ವಿ ಟಿ ಯು ಹಣಕಾಸು ಅಧಿಕಾರಿ ಡಾ ಪ್ರಶಾಂತ್ ನಾಯಕ್ ಜಿ, ವಿದ್ಯಾರ್ಥಿ ಕಲ್ಯಾಣ ಹಾಗೂ ಎಸ್ಸಿ/ ಎಸ್ಟಿ ವಿಭಾಗದ ಲೈಸನ್ ಅಧಿಕಾರಿ ಪ್ರೊ ಪ್ರಲ್ಹಾದ ರಾಥೋಡ್ ಹಾಜರಿದ್ದರು. ಇದೆ ವೇಳೆಯಲ್ಲಿ ಈ ವರ್ಷ ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು ಮತ್ತು ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ವಿ ಟಿ ಯು ಸಿಬ್ಬಂದಿ ಕ್ರೀಡಾಕೂಟದಲ್ಲಿ ವಿಜೇತರಾದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ