
ಪ್ರಗತಿವಾಹಿನಿ ಸುದ್ದಿ : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಹಾಗಾಗಿ ನಾಳೆ ವಿಜಯನಗರ ಜಿಲ್ಲೆಯ ಹೋಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಮಾಡುತ್ತಿದೆ. ಈ ಸಮಾವೇಶ ಯಾವ ಪುರುಷಾರ್ಥಕ್ಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಶಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಸಾಧನಾ ಸಮಾವೇಶದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿರಂತರವಾಗಿ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ಮಾಡುತ್ತಾ ಸರ್ಕಾರ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಗುಡುಗಿದರು.
ಬೆಲೆ ಏರಿಕೆಯಾಗುತ್ತಿದೆ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿರುವಾಗ ಏನು ಸಾಧನೆ ಮಾಡಿದ್ದಾರೆ ಅಂತಾ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಈ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರಿಗೆ ಒಂದು ಒಳ್ಳೆಯ ಹೊಸ ಯೋಜನೆ ನೀಡಲು ಆಗಲಿಲ್ಲ. ಮಹಿಳಾ ಅಭಿವೃದ್ಧಿಗಾಗಿ ಯಾವ ಕಾರ್ಯಕ್ರಮಗಳನ್ನು ಸರ್ಕಾರ ಮಾಡಿಲ್ಲ. ಯುವಜನಕ್ಕೆ ಉದ್ಯೋಗ ಸೃಷ್ಟಿಸಿಲ್ಲ. ಇದರ ನಡುವೆ ಗ್ರೇಟರ್ ಬೆಂಗಳೂರು ಮಾಡಿದ್ದೀರಿ. ಇದು ವಾಟರ್ ಬೆಂಗಳೂರು ಆಗಿದೆ. ಸ್ವಲ್ಪ ಮಳೆಯಾದರೂ ಸಹ ಬೆಂಗಳೂರು ಮಹಾನಗರ ಮಳೆ ನೀರಲ್ಲಿ ಮುಳುಗಿ ಹೋಗುತ್ತಿರುವ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ ಎಂದರು.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೊಡ್ಡ-ದೊಡ್ಡ ಪ್ರಾಜೆಕ್ಟ್ಗಳ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿನಿಂದ ತುಮಕೂರಿನವರೆಗೂ ಮೆಟ್ರೋ ಮಾರ್ಗ ಮಾಡುತ್ತೇವೆ ಎನ್ನುತ್ತಾರೆ. ಇವರಿಗೆ ಮೆಟ್ರೋ ಅಂದರೇನು ಅಂತಾ ಗೊತ್ತಿಲ್ಲ. ಬೆಂಗಳೂರಿನಲ್ಲೇ ಮೆಟ್ರೋ ಕಾಮಗಾರಿಯನ್ನ ವೇಗಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಳಿಗೆ ಅನುದಾನವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಭಿವೃದ್ಧಿ ಎನ್ನುವುದು ಈ ಸರ್ಕಾರದಲ್ಲಿ ಇಲ್ಲದಂತಾಗಿದೆ. ಹೀಗಿರುವಾಗ ಯಾವ ಕಾರಣಕ್ಕೆ ಇವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದರು.