
ಪ್ರಗತಿವಾಹಿನಿ ಸುದ್ದಿ: ಪತಿಯ ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ ನೇಣಿಗೆ ಕೊರಳೊಡ್ಡಿರುವ ಘಟನೆ ಬೆಂಗಳೂರು ಹೊರವಲಯದ ಟಿ. ದಾಸರಹಳ್ಳಿಯಲ್ಲಿ ನಡೆದಿದೆ.
28 ವರ್ಷದ ಪೂಜಶ್ರೀ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಮನೆಯವರೇ ನೋಡಿ ನಂದೀಶ್ ಜೊತೆ ಪೂಜಶ್ರೀ ವಿವಾಹ ಮಾಡಿದ್ದರು. ದಂಪತಿಗೆ ಓರ್ವ ಮಗಳಿದ್ದಾಳೆ. ದಂಪತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂದೀಶ್ ಪರಸ್ತ್ರೀ ಸಹವಾಸ ಮಾಡಿ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ಪೂಜಶ್ರೀ ಹಿಂಸಿಸುತ್ತಿದ್ದನು. ಅಲ್ಲದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಎರಡು ಮೂರು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ಆಗಿದೆ.
ಆದರು ನಂದೀಶ್ ವರದಕ್ಷಿಣೆ ತರುವಂತೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ತವರಿಗೆ ಹೋಗಿದ್ದ ಪತ್ನಿಯನ್ನು ಪ್ಲಾನ್ ಮಾಡಿ ಕಥೆ ಕಟ್ಟಿ ಮತ್ತೆ ಮನೆಗೆ ಕರೆದೊಯ್ದಿದ್ದಾನೆ. ಆದರೆ ನಿರಂತರ ಹಿಂಸೆಯಿಂದ ಈಗ ಪೂಜಶ್ರೀ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.