*ಮರಳಿ ಬಿಜೆಪಿ ಸೇರಲು ಒಂದು ಷರತ್ತು ಹಾಕಿದ ಯತ್ನಾಳ್* *ಪ್ರಧಾನಿ ಮೋದಿಗೂ ಸವಾಲ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸದ್ಯ ಹೊಸ ಪಕ್ಷ ಕಟ್ಟುವ ಯೋಚನೆಯಿಂದ ಹಿಂದೆ ಸರಿದ್ದಾರೆ.
ಆದರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟದಿಂದ ಮಾತ್ರ ಹಿಂದೆ ಸರಿದಿಲ್ಲ. ಇಂದು ನನ್ನನ್ನು ಉಚ್ಛಾಟನೆ ಮಾಡಿರಬಹುದು. ಇನ್ನು ಕೆಲವೇ ದಿನಗಳಲ್ಲಿ ಅವರನ್ನು ಉಚ್ಛಾಟನೆ ಮಾಡುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಈ ಕುಟುಂಬ ರಾಜಕಾರಣದಿಂದ ಹೊರಬರುವವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬೆಳಗಾವಿಯಿಂದಲೇ ನಮ್ಮ ಮುಂದಿನ ಹೋರಾಟ ಆರಂಭವಾಗಲಿದೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮರಂತಹ ಎಲ್ಲಾ ಕ್ರಾಂತಿವೀರರ ಪುಣ್ಯಭೂಮಿ ಬೆಳಗಾವಿ. ಹಾಗಾಗಿ ಇಲ್ಲಿಂದಲೇ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆಯೂ ಇಲ್ಲಿಂದಲೇ ಹೋರಾಟ ನಡೆಸಿ ಯಶಸ್ಸು ಸಾಧಿಸಿದ್ದೆವು ಎಂದರು.
ನನ್ನನ್ನು ಉಚ್ಚಾಟನೆ ಮಾಡಿರಬಹುದು. ಆದರೆ ಸ್ವಲ್ಪ ದಿನದಲ್ಲಿ ಅವರನ್ನೂ ಉಚ್ಛಾಟನೆ ಮಾಡಲಿದ್ದಾರೆ. ಹೈಕಮಂಡ್ ಅವರನ್ನು ತಲೆ ಮೇಲೆ ಕೂರಿಸಿಕೊಂಡಿರಬಹುದು. ಆದರೆ ರಾಜ್ಯದ ಜನತೆ ತಲೆಮೇಲೆ ಕೂರಿಸಿಕೊಳ್ಳಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಗೆ ಮರಳಿ ಹೋಗುವ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಬಿಜೆಪಿ ಈ ಕುಟುಂಬ ರಾಜಕಾರಣದಿಂದ ಹೊರಬರುವವರೆಗೂ ನಾನು ಬಿಜೆಪಿಗೆ ಹೋಗಲ್ಲ. ಯಾಕೆ ಹೋಗಬೇಕು? ಅಲ್ಲಿ ನಮಗೇನು ಕೆಲಸ? ವಿಜಯೆಂದ್ರನನ್ನು ಸಿಎಂ ಮಾಡಲು ನಾವು ಮತ್ತೆ ಹೋಗಬೇಕಾ? ಅಥವಾ ವಿಜಯೇಂದ್ರ ಮಗನನ್ನು, ಬಿ.ವೈ. ರಾಘವೇಂದ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಹೋಗಬೇಕಾ? ವಂಶಪಾರಂಪರ್ಯ, ಭ್ರಷ್ಟಾಚಾರ ರಾಜಕಾರಣ ಬಿಜೆಪಿಯಲ್ಲಿ ನಡೆಯಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಅದನ್ನು ಮೊದಲು ಕರ್ನಾಟಕದಲ್ಲಿ ಮಾಡಿ ತೋರಿಸಲಿ ಎಂದು ಟಾಂಗ್ ನೀಡಿದರು.