Latest

ಹಿಲಾಲು ಬೆಳಕಿನ ಯಕ್ಷಗಾನ; ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಶಿರಸಿ:

ದಶಮಾನೋತ್ಸವದ ಸಂಭ್ರಮದಲ್ಲಿ ಇರುವ ಕುಮಟಾದ ಯಕ್ಷಗಾನ ಸಂಶೋಧನಾ‌ ಕೇಂದ್ರದ ವತಿಯಿಂದ ಶಿರಸಿಯ ನೆಮ್ಮದಿಯಲ್ಲಿ ಹಿಲಾಲ ಬೆಳಕಿನ ಯಕ್ಷಗಾನ ಪ್ರದರ್ಶನ, ಸನ್ಮಾನ ನಡೆಯಿತು.


ಹಿಲಾಲು ಬೆಳಕು ದೀಪ ಬೆಳಗಿಸಿದ ಹಿರಿಯ ಬರಹಗಾರ‌ ಶಿವಾನಂದ‌ ಕಳವೆ, ಹನ್ನೆರಡನೇ ಶತಮಾನದಿಂದ‌ ಶುರುವಾದ ಯಕ್ಷಗಾನ, ಅರವತ್ತು ವರ್ಷದ ಹಿಂದಿನ ತನಕವೂ ಹಿಲಾಲಿನ ಮೂಲಕ ಜನಕ್ಕೆ ಕಲೆಯನ್ನು ತಲುಪಿಸುತ್ತಿತ್ತು ಎಂದರು.
ಸಂಮ್ಮಾನ ಸ್ವೀಕರಿಸಿದ ಯಕ್ಷಗಾನ ಸಂಶೋಧಕ ಡಾ. ಎಸ್.ಡಿ.ಹೆಗಡೆ, ಯಕ್ಷಗಾನ, ವೈದಿಕದ ಚಿತ್ತಾರ ಕೂಡ ಹೆಣ್ಣಿನಿಂದ ಬಂದಿದೆ. ಸಮೃದ್ದಿ ಅಭಿವೃದ್ದಿಗಾಗಿ ಆಟ‌ ಮಾಡುತ್ತಾರೆ. ಯಕ್ಷಗಾನ ಮೂಲ ಹೆಣ್ಮಕ್ಕಳ ಮೂಲ.‌ ನಿಸರ್ಗ ಸಂಸ್ಕೃತಿ, ಪ್ರತಿ‌ಸಂಸ್ಕೃತಿಗಾಗಿ ಯಕ್ಷಗಾನ ಹುಟ್ಟಿದೆ ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರು‌ ಮಾತನಾಡಿ, ಯಕ್ಷಗಾನ ಕಲೆ ಮನೆ ಮನೆಗಳಲ್ಲಿ ಆಗಬೇಕು. ನಮ್ಮ ಜಿಲ್ಲೆಯಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಪ್ರೋತ್ಸಾಹ ಕಡಿಮೆ ಏನಿಲ್ಲ. ಒಂದೊಂದು ಕಲಾ ಗ್ರಾಮವೇ ಇದೆ. ಯಕ್ಷಗಾನ ಇರುವ ತನಕ ಕನ್ನಡ ಉಳಿಯುತ್ತದೆ. ಯಕ್ಷಗಾನ ಪ್ರದರ್ಶನ ಹೆಚ್ಚಳ ಆದರೆ‌ ಕನ್ನಡ ಉಳಿಯುತ್ತದೆ. ಅಕಾಡೆಮಿ‌ ಕೂಡ ಉಳಿಯುತ್ತದೆ. ಯಕ್ಷಗಾನ ಸಂಶೋಧಕ ಎಸ್.ಡಿ. ಹೆಗಡೆ ಅವರ‌ನ್ನು ಅಭಿ‌ನಂದಿಸುತ್ತಿರುವುದು ಖುಷಿಯ ಸಂಗತಿ ಎಂದರು.

Home add -Advt

ಅಭಿನಂದನಾ‌ ನುಡಿಯನ್ನು ಯಕ್ಷರಂಗದ ಸಂಪಾದಕ ಗೋಪಾಲಕೃಷ್ಣ ಭಾಗವತ ಆಡಿದರು.
ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಹುಕ್ಲಮಕ್ಕಿಯ‌ ಗೋಪಾಲಕೃಷ್ಣ ಹೆಗಡೆ, ಹಿರಿಯ ಪತ್ರಕರ್ತ ಅಶೋಕ‌ ಹಾಸ್ಯಗಾರ ಇತರರು ಇದ್ದರು.

ಸತೀಶ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು‌. ಮಯೂರಿ ಉಪಾಧ್ಯಾಯ ಸನ್ಮಾನ‌ಪತ್ರ ವಾಚಿಸಿದರು. ಕಾರ್ಯದರ್ಶಿ ವಸಂತ ಭಟ್ಟ ವಂದಿಸಿದರು.
ಬಳಿಕ ಹಿಡಿಂಬಾ ವಿವಾಹ ಯಕ್ಷಗಾನ ಹಿಲಾಲು ಬೆಳಕಿನಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ನರಸಿಂಹ ಭಟ್ ಹಂಡ್ರಮನೆ, ವಿಘ್ನೇಶ್ವರ ಕೆಸರಕೊಪ್ಪ ಭಾಗವಹಿಸಿದರು. ಮುಮ್ಮೇಳದಲ್ಲಿ ಸುಬ್ರಹ್ಮಣ್ಯ‌ ಮೂರೂರು, ಗಣಪತಿ ಭಟ್ಟ‌ ಮುದ್ದಿನಪಾಲು, ನಾಗರಾಜ್ ಜೋಶಿ ಸೋಂದಾ, ನಿರಂಜನ‌ ಜಾಗನಳ್ಳಿ, ಸಂತೋಷ ಕಡಕಿನಬಯಲು, ವೆಂಕಟ್ರಮಣ ಕಡಬಾಳ ಹಾಗೂ ಸಹ ಕಲಾವಿದರು ಭಾಗವಹಿಸಿದರು. ಯಕ್ಷಗಾನ ಸಂಯೋಜನೆಯನ್ನು ನಾಗರಾಜ ಜೋಶಿ ಸೋಂದಾ ಮಾಡಿದರು.

Related Articles

Back to top button