ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಜಿಲ್ಲೆಯ ಹುಕ್ಕೇರಿ, ಖಾನಾಪುರ ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಎಚ್.ಬಿ. ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಫೆ.೧೮ ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಹುಕ್ಕೇರಿ, ಖಾನಾಪುರ ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ವಿವಿಪ್ಯಾಟ್ ಮತ್ತು ಇವಿಎಂ ಯಂತ್ರಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಗದಿತ ಅವಧಿಯೊಳಗಾಗಿ ಎಲ್ಲಾ ಗ್ರಾಮಗಳಲ್ಲಿ ಜನರಿಗೆ ಇವಿಎಂ, ವಿವಿಪ್ಯಾಟ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಬೇಕು. ಅಲ್ಲದೆ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಅಸೆಂಬ್ಲಿ ಲೇವಲ್ ಚುನಾವಣಾ ಮಾಸ್ಟರ್ ತರಬೇತುದಾರ ರವಿ ಭಜಂತ್ರಿ ಸೆಕ್ಟರ್ ಅಧಿಕಾರಿಗಳಿಗೆ ಬ್ಯಾಲೆಟ್ ಪೇಪರ್, ಕಂಟ್ರೋಲ್ ಯುನಿಟ್, ವಿವಿಪ್ಯಾಟ್ ಹಾಗೂ ಇವಿಎಂ ಯಂತ್ರಗಳ ಜೋಡಿಸುವಿಕೆ, ಕಾರ್ಯವಿಧಾನ, ಯಂತ್ರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ, ಎಸಿ ಕವಿತಾ ಯೋಗಪ್ಪನವರ, ಹುಕ್ಕೇರಿ, ಖಾನಾಪುರ ಮತ್ತು ಬೆಳಗಾವಿ ಮತಕ್ಷೇತ್ರದ ಎಲ್ಲ ಸೆಕ್ಟರ್ ಅಧಿಕಾರಿಗಳು, ತಹಶೀಲ್ದಾರಗಳಾದ ರೇಷ್ಮಾ ತಾಳಿಕೋಟಿ, ಶಿವಾನಂದ ಉಳ್ಳಾಗಡ್ಡಿ ಮತ್ತು ಮಂಜುಳಾ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.