ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:
ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ಇಬ್ಬರನ್ನು ಕೊಲೆ ಮಾಡಿದ್ದ ಧಾರವಾಡ ಜಿಲ್ಲೆಯ ಕಲ್ಲಾಪೂರ ಗ್ರಾಮದ ಆರೋಪಿ ಭೀಮಪ್ಪ ಮಲ್ಲಪ್ಪ ತೀರ್ಥಪ್ಪನವರ್ (24) ಕೊಲೆ ಮಾಡಿ ತಾನು ಕದ್ದಿದ್ದ ಮೊಬೈಲ್ ಗೆ ಬೇರೆ ಸಿಮ್ ಹಾಕಿ ಬಳಸಿ ಸಿಕ್ಕಿ ಬಿದ್ದಿದ್ದಾನೆ.
ಮೇ 15 ರಂದು ಕಿತ್ತೂರು ಸಮೀಪದ ಶಿವಾ ಪೇಟ್ರೋಲ್ ಬಂಕ್ ನಲ್ಲಿ ಬೆಳಗಿನ ಜಾವ 3ರ ಸುಮಾರಿಗೆ ಕೆಲಸ ಮಾಡಿ ನಿದ್ರೆಗೆ ಜಾರಿದ್ದ ಕಿತ್ತೂರು ತಾಲೂಕಿನ ಲಿಂಗದಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೆಟ್ಟಿ, ಹಾಗೂ ತಿಗಡೊಳ್ಳಿ ಗ್ರಾಮದ ಮುಸ್ತಾಕಹ್ಮದ ಬೀಡಿ ಎನ್ನುವವರನ್ನು ಕೊಚ್ಚಿ ಕೊಲೆ ಮಾಡಿ ಬಂಕ್ ನಲ್ಲಿರುವ ರೂ.42 ಸಾವಿರ ನಗದು ಹಾಗೂ ಮಂಜುನಾಥನ ಮೊಬೈಲ್ ದೋಚಿಕೊಂಡು ತಲೆ ಮರೆಸಿಕೊಂಡಿದ್ದ.
ಕೊಲೆ ಮಾಡುವ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು, ಹಂತಕ ಕದ್ದಿರುವ ಮೊಬೈಲ್ ಐಎಂಇಐ ನಂಬರ್ ಮಲೇಯೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಕೊಲೆಯಾದ 10 ದಿನಗಳ ನಂತರ ಕೊಲೆಗಾರನು ಮಂಜುನಾಥನಿಂದ ಕದ್ಧಿದ್ದ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ಕಿತ್ತು ಹಾಕಿ ಬೇರೆ ಸಿಮ್ ಕಾರ್ಡ್ ಹಾಕಿ ಮೊಬೈಲ್ ಉಪಯೋಗಿಸಲು ಆರಂಭಿಸಿದ. ಇದರ ಜಾಡು ಹಿಡಿದು ಪೊಲೀಸರು ತೆರಳಿದಾಗ ಆರೋಪಿಯು ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ವಲಯದಲ್ಲಿನ ಆರ್.ಎಸ್.ಬಿ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿತು. ನಂತರ ಕಂಪನಿಗೆ ದೌಡಾಯಿಸಿದ ಪೊಲೀಸರು ಇವನ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ಕಲ್ಲಾಪೂರಕ್ಕೆ ತೆರಳಿ ಅವನ ಮನೆಯಲ್ಲಿಯೇ ಅವನನ್ನು ಬಂಧಿಸಿದ್ದಾರೆ.
ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ ಉತ್ತರ ವಲಯ ಐಜಿಪಿ ಸುಹಾಸ ರಾಘವೇಂದ್ರ ಅವರು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ ರೆಡ್ಡಿ ನೇತೃತ್ವದಲ್ಲಿ ನೂರು ಜನರಿರುವ ಪೊಲೀಸರ ತಂಡವನ್ನು ರಚಿಸಿ ವಿಶೇಷ ತನಿಖೆಯ ಮೂಲಕ ಈ ಪ್ರಕರಣವನ್ನು ಭೇದಿಸಿದ್ದಾರೆ.
ಕಿತ್ತೂರು ಪೆಟ್ರೋಲ್ ಪಂಪ್ ನಲ್ಲಿ ಕೊಲೆ: ಧಾರವಾಡ ಯುವಕನ ಬಂಧನ
ಕಿತ್ತೂರು ಕೊಲೆಗಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಪೆಟ್ರೋಲ್ ಜೊತೆ ಡೀಸೆಲ್ ಮಿಕ್ಸ್?; ಸಿಡಿದೆದ್ದ ಗ್ರಾಹಕರು