
ರಾಜೇಶ್ವರಿ ಎಸ್ ಹೆಗಡೆ
ಒಂದು ದಟ್ಟವಾದ ಕಾಡು ಆ ಕಾಡಿನಲ್ಲಿ ಒಂದು ದೊಡ್ಡ ಆಲದ ಮರ. ಆ ಆಲದ ಮರದ ಮೇಲೆ ಯುವರಾಜ ಮತ್ತು ಯುವರಾಣಿ ದಂಪತಿಗಳಿಬ್ಬರೂ ವಾಸಿಸುತ್ತಿದ್ದರು. ಆ ದಂಪತಿ ಕಾಗೆಗಳು ಒಬ್ಬರನ್ನೊಬ್ಬರು ಬಿಟ್ಟರದೇ, ಒಟ್ಟಿಗೆ, ಊಟ, ವಾಸ, ಪ್ರಯಾಣಗಳನ್ನು ಪ್ರತಿ ದಿನವೂ ಊಪಾಯ ಮಾಡಿ ನಡೆಸುತ್ತಿದ್ದರು.
ಒಂದು ದಿವಸ ಆ ದಂಪತಿ ಕಾಗೆಗಳ ಪ್ರಯಾಣವು ಕಾಶ್ಮೀರದ ರಾಜಾ ಬೀರೇಂದ್ರ ಸಿಂಗ್ ಅಗರವಾಲಾ ಇವರ ಮನೆಯ ಮೇಲಿಂದ ಸಾಗಿತು. ರಾಜ ಬೀರೇಂದ್ರಸಿಂಗ್ ಅಗರವಾಲಾ, ಇವರ ಮನೆಯಲ್ಲಿ ಪ್ರತಿ ದಿನವು ರಾಜ ಭೋಜನ ನಡೆಯುತ್ತಿತ್ತು. ಆ ರಾಜ ರಾಣಿ ದಂಪತಿಗಳು ಪ್ರಯಾಣ ನಡೆಸುತ್ತಿದ್ದಾಗ ಕಾಶ್ಮೀರದ ರಾಜ ಬೀರೇಂದ್ರ ಸಿಂಗ್ ಅಗರವಾಲಾ ಇವರ ಮನೆಯಲ್ಲಿ ಗಮ್ಮತ್ತಿನ ಊಟದ ಸಿದ್ದತೆ, ನಡೆಯುತ್ತಿರುವ ವಾಸನೆ ಬಡಿಯಿತು. ಆ ಗಮ್ಮತ್ತಿನ ಊಟವನ್ನು ಸವಿಯುವ ಆಸೆ ರಾಣಿ ಕಾಗೆಗೆ ತುಂಬಾ ಆಯಿತು.

ಆಗ ಅದು ರಾಜ ಕಾಗೆಗೆ ಆ ಮನೆಯಲ್ಲಿಯ ಊಟವನ್ನು ಉಂಡು ಹೋಗೋಣರಿ, ನನಗೆ ಊಟ ಮಾಡುವ ಆಸೆ ತುಂಬಾ ಆಗಿದೆ. ಎಂದು ಹೇಳಿತು. ಅದಕ್ಕೆ ರಾಜ ಕಾಗೆಯು ನನ್ನ ಚಿನ್ನು , ನಿನಗೆ ಊಟ ಮಾಡಿಸುವ ಆಸೆ ನನಗೂ ಇತ್ತು ಕಣೆ, ಆದರೆ ನಮ್ಮನ್ನು ಯಾರು ಊಟಕ್ಕೆ ಕರೆಯುತ್ತಾರೆ? ಈ ಮಾನವ ದೇವರುಗಳಿಗೆ ನಮ್ಮ ನೆನಪು ಬರುತ್ತದೆ ಎಂದರೆ, ಅದು ತಿಥಿ, ಶ್ರಾದ್ದವನ್ನು, ಮಾಡಿದ ದಿವಸಗಳಲ್ಲಿ ಮಾತ್ರ ಇಹಲೋಕ ತ್ಯಜಿಸಿದವರು ಆ ದಿವಸಗಳಲ್ಲಿ ಕಾಗೆ ರೂಪದಲ್ಲಿ ಬಂದು ತಿಂದು ಹೋಗುತ್ತಾರೆ ಎಂಬ ನಂಬಿಕೆಯಿಂದ ಆ ದಿವಸಗಳಲ್ಲಿ ಮನೆಯ ಯಜಮಾನನಿಗಿಂತ ಮೊದಲು ನಮಗೆ ಊಟವನ್ನು ಹಾಕುತ್ತಾರೆ. ಆದರೆ ಈ ದಿವಸ ಈ ರಾಜನ ಮನೆಯಲ್ಲಿ ಮುದಿ ರಾಜನ 60 ವರ್ಷದ ಷಷ್ಟಬ್ದಿ , ಸಮಾರಂಭ ಇದೆ, ಇಂದು ನಾವೇ ಆ ಊಟವನ್ನು ಕಾದು ತಂದು ಉಪಾಯ ಮಾಡಿ ಊಟ ಮಾಡಬೇಕು ಎಂದು ರಾಜ ಕಾಗೆಯು ರಾಣಿ ಕಾಗೆಗೆ ಹೇಳಿತು.
ಆಗ ಆ ರಾಣಿ ಕಾಗೆಯು ಏನು ಉಪಾಯವನ್ನು ಮಾಡುತ್ತೀರಾ? ಎಂದು ಕೇಳಿತು. ಯೋಚಿಸುವೆ ಸ್ವಲ್ಪ ತಾಳುತ್ತೀಯಾ, ಎಂದು ರಾಜ ಕಾಗೆಯು ರಾಣಿ ಕಾಗೆಗೆ ಹೇಳಿತು. ಯೋಚಿಸುತ್ತಾ ಸಮಯ ಹಾಳು ಮಾಡಬೆಡೀರಿ. ಅಲ್ಲಿ ನೋಡಿ, ಎಂಥ ಗಮ್ಮತ್ತಿನ ಕೋಳಿಸಾರು, ಹಂದಿ ಮಟನ್ ಹೇಗೆ ಸಿದ್ದವಾಗಿದೆ. ನಿಮ್ಮ ಯೋಚನೆ ತಡವಾದ್ರೆ, ಅಡಿಗೆ ಪಾತ್ರೆ ಎಲ್ಲಾ ಖಾಲಿ, ಖಾಲಿ, ಆಗುತ್ತೆ, ಈಗಲೇ ಅದನ್ನು ತಿಂದ್ರೆ ನನಗೆ ಬರುತ್ತೆ ಮಜಾ, ಎಂದು ರಾಣಿ ಕಾಗೆ ಹೇಳಿತು. ಅದರೆ ರಾಜ ಕಾಗೆಗೆ ಕಾದು ಕಾದು ಸುಸ್ತಾದರೂ ಯಾವುದೇ ಉಪಾಯ ಹೊಳೆಯಲೇ ಇಲ್ಲ. ಚಿನ್ನು, ನಮಗೆ ಸಿಗದಿರುವ ಊಟಕ್ಕೆ ಯಾಕೆ ನಾವು ಆಸೆ ಪಡಬೇಕು? ಮುಂದಿನ ಜನ್ಮದಲ್ಲಿ ನಾವಿಬ್ಬರೂ ಆ ಮನೆಯಲ್ಲಿ ಹುಟ್ಟಿ ಒಟ್ಟಿನಲ್ಲಿ ಇಂಥ ಸ್ವಾದಿಷ್ಟವಾದ ಊಟವನ್ನು ಮಾಡೋಣ, ಬಾ ಮರಳಿ ಗೂಡಿಗೆ ಎಂದು ರಾಜ ಕಾಗೆಯು ರಾಣಿ ಕಾಗೆಗೆ ಹೇಳಿತು.
ಅದಕ್ಕೆ ರಾಣಿ ಕಾಗೆಯು ಸರಿ, ಎಂದು ಬಲು ಬೇಸರ ಪಡುತ್ತಾ ಹಿಂದಿರುಗಿತು, ರಾತ್ರಿ ಎಲ್ಲಾ ರಾಜ ರಾಣಿ ಇಬ್ಬರಿಗೂ ಹಸಿವನ್ನು ತಾಳಲು ಆಗದೇ, ತುಂಬಾ ಹಸಿವಿನ ದಾಹದಿಂದ ಕಳೆದರು.
ಮಾರನೆ ದಿವಸದ ಬೆಳಕು ಕಾಣುತ್ತಲೇ, ಆಹಾರದ ಹುಡುಕಾಟಕ್ಕೆ ಹೊರಟರು. ಆಗ ರಾಜ ಕಾಗೆಯು ರಾಣಿ ಕಾಗೆಗೆ ಚಿನ್ನು,, ನಿನ್ನೆ ನೋಡಿದ ಊಟ ನಿನಗೆ ತುಂಬಾ ಇಷ್ಟವಾಗಿತ್ತು. ನಾನು ಇಂದು ನಿನಗೆ ಅದೇ ಊಟವನ್ನು ಕೊಡಿಸುವೆ ಕಣೆ, ಎಂದು ಹೇಳಿತು. ಅದಕ್ಕೆ, ಆ ರಾಣಿ ಕಾಗೆಯು ಓ ನನ್ನ ರಾಜ, ನಿನಗೆ ಆ ಊಟವನ್ನು ತರಲು ಸಹಾಯಕರ ಅಗತ್ಯತೆ ಬಿದ್ದರೆ ನೀನು ನಿನ್ನ ಕೈ ಕೆಳಗೆ ಕೆಲಸ ಮಾಡುತ್ತಿರುವ ದಳಪತಿಯನ್ನು ಕರೆದು ಅವರ ಸಲಹೆಯನ್ನು ಪಡೆಯಿರಿ ಎಂದಿತು.

ಅಲ್ಲಿಗೆ ಆಗಮಿಸಿ ಬಂದ ದಳಪತಿ ಕಾಗೆಯು ರಾಜಾಜ್ನೆಯ ಅಪ್ಪಣೆ ಯಾಗಬೇಕು ಎಂದು ನಮಸ್ಕರಿಸಿ ಹೇಳಿತು. ಅದಕ್ಕೆ ರಾಜ ಕಾಗೆಯು, ದಳಪತಿಯವರೇ, ನನ್ನ ಪ್ರೀತಿಯ ಪತ್ನಿಗೆ , ನಿನ್ನೆಯ ದಿವಸದಲ್ಲಿ ರಾಜ ಬಿರೇಂದ್ರ ಸಿಂಗ್ ಆಗರವಾಲಾ ರವರ ಮನೆಯ ಪಂಚಭಕ್ಷ ಭೋಜನವನ್ನು ಕಂಡು ಊಟ ಮಾಡುವ ಬಯಕೆ ತುಂಬಾ ಆಗಿತ್ತು. ನಾವಿಬ್ಬರೂ ಆ ಊಟಕ್ಕಾಗಿ ರಾತ್ರಿವರೆಗೆ, ಕಾದು, ಕಾದು, ಸುಸ್ತಾಗಿ ಊಟ ಸಿಗದೇ ಊಪವಾಸ ಗೂಡನ್ನು ಸೇರಿದೆವು ಎಂದು ಹೇಳಿತು.
ರಾಜ ಕಾಗೆಯು ದಳಪತಿ ಕಾಗೆಗೆ ನನ್ನಿಂದ ತಮಗೆ ಏನಾಗಬೇಕು? ಎಂದು ಅಜ್ಞೆ ಮಾಡಿ ಎಂದು ಹೇಳಿತು. ಅದಕ್ಕೆ ರಾಜ ಕಾಗೆಯು ನಮಗೆ ನಿನ್ನೆ ನೋಡಿರುವ ಊಟವನ್ನು ಇಂದು ಮಾಡಬೇಕಲ್ಲಾ, ನನ್ನ ಮುದ್ದಿನ ಪತ್ನಿಗೆ ನಾನು ಆ ಊಟವನ್ನು ಇಂದು ಕೊಡಿಸಬೇಕಲ್ಲಾ ಎಂದು ಹೇಳಿತು. ಅದಕ್ಕೆ ದಳಪತಿ ಕಾಗೆಯು, ನೀವು ಇದಕ್ಕೇನೂ ಯೋಚಿಸಬೇಡಿರಿ. ತಮ್ಮ ಅಜ್ಞೆಯನ್ನು ನಾನು ಪಾಲಿಸುವೆನು. ನನ್ನ ಜೊತೆಯಲ್ಲಿ ಗೂಡಿನಲ್ಲಿರುವ ಎಲ್ಲಾ ಕಾಗೆಗಳನ್ನು ಕರೆದುಕೊಂಡು ಹೋಗಿ ವಿನಯದಿಂದ ಮಾತನಾಡುತ್ತಾ, ಕಾವ್, ಕಾವ್, ಎಂದು ರಾಗ ಹಾಡಿ ನಿಮಗೆ ಊಟದ ಜೋಳಿಗೆ ತರುವೆನು ರಾಜರೇ, ಎಂದು ಹೇಳಿತು.
ದಳಪತಿ ಸಮೇತ ಎಲ್ಲಾ ಕಾಗೆಗಳು ರಾಜಾ ಬಿರೇಂದ್ರ ಸಿಂಗ್ ಅಗರವಾಲಾರವರ ಮನೆಯ ಮೇಲ್ಗಡೆ ತಲುಪಿ ಅಡುಗೆ ಮನೆಯ ಪಾಕ ಶಾಲೆಯ ಹುಡುಕಾಟ ಪ್ರಾರಂಭಿಸಿದವು. ಅಷ್ಟರಲ್ಲಿ ಅಡುಗೆ ಮನೆಯ ಪಾಕ ಶಾಲೆಯು ಕಣ್ಣಿಗೆ ಬಿದ್ದಿತು.
ಅಡುಗೆ ಮನೆಯ ಪಾಕ ಶಾಲೆಯ ಮೇಲ್ಗಡೆ ದಳಪತಿಯ ಆಜ್ಞೆಯ ಮೇರೆಗೆ ನಕ್ಷತ್ರದಂತೆ ಸಾಲು ಸಾಲಿನಲ್ಲಿ, ಎಲ್ಲಾ ಕಾಗೆಗಳು ನಿಂತುಕೊಂಡವು. ದಳಪತಿ ಕಾಗೆಯು ತನ್ನ ದಿವ್ಯ ದ್ರಷ್ಟಿಯನ್ನು ನಾಲ್ಕು ದಿಕ್ಕಿಗೂ ಇಟ್ಟು ನಮ್ಮ ರಾಜರ ಆಜ್ನೆಯನ್ನು ನೀವೆಲ್ಲರೂ ಪಾಲಿಸಲೇಬೇಕು. ನಿಮಗೂ ಉಪಾಯ ಹೊಳೆದರೆ ಅದನ್ನು ತಿಳಿಸಬೇಕು ಎಂದು ಛಲದಿಂದ ಉಪಾಯವನ್ನು ಹುಡುಕುವ ಕಾತುರತೆಯಲ್ಲಿ ತೊಡಗಿತ್ತು. ನಾವು ಬೇಡಿದರೆ ನಮಗೆ ಯಾರೂ ಊಟವನ್ನು ಕೊಡೋಲಾರರು. ನಾವೇ ಹಕ್ಕಾಗಿ ವಿನಯದಿ, ಊಟವನ್ನು ಕಿತ್ತು ತಿನ್ನಬೇಕು, ಎನ್ನುತ್ತಾ ಸೇರಿರುವ ಎಲ್ಲಾ ಕಾಗೆಗಳಿಗೆ ಎಲ್ಲರ ಲಕ್ಷವು ಈ ಕಡೆ ಇರಲಿ, ನಾನು ಒಂದು ಉಪಾಯವನ್ನು ತಮ್ಮೆಲ್ಲಾ ಸ್ನೇಹಿತರಿಗೂ ತಿಳಿಸುವೆ, ಎಂದು ಹೇಳಿತು.

ದಳಪತಿಯ ಕೈಕೆಳಗೆ ಕೆಲಸ ಮಾಡುವ ಹಿರಿಯಣ್ಣನಂತಿರುವ ದೊಡ್ಡ ಕಾಗೆಯು ಬೇಗನೇ ಉಪಾಯವನ್ನು ತಿಳಿಸುವಂತರಾಗಬೇಕು , ದಳಪತಿಯವರೇ, ಎಂದು ಹೇಳಿತು. ಅದಕ್ಕೆ ದಳಪತಿ ಕಾಗೆಯು , ರಾಜಾ ಬಿರೇಂದ್ರ ಸಿಂಗ್ ಅಗರವಲಾರವರ ಮನೆಯ ದೇವರ ಕೋಣೆಯಲ್ಲಿ ಈಗ ಪೂಜೆಯ ಸಿದ್ದತೆ ನಡೆದಿರುತ್ತದೆ. ದೇವರ ಪೂಜೆ ಮುಗಿಯುತ್ತಲೇ ದೇವರಿಗೆ ಊಟವನ್ನು ಉಣಬಡಿಸುವರು, ಆ ಸಮಯದಲ್ಲಿ ಎಲ್ಲರೂ ದೇವರ ಕೋಣೆಗೆ ಹೋಗುತ್ತಾರೆ. ಆಗ ಅಡುಗೆ ಮನೆಯ ಪಾಕ ಶಾಲೆಯಲ್ಲಿ ಯಾರೂ ಇರುವುದಿಲ್ಲ.
ದೇವರ ಕೋಣೆಗೆ ಹೋದವರು ಪಾಕಶಾಲೆಗೆ ಬರುವುದರ ಒಳಗೆ ನೀವೆಲ್ಲರೂ ಸಾಲಾಗಿ ಹೋಗಿ ಪಾಕಶಾಲೆಯ ಅಡುಗೆ ಪಾತ್ರೆಗಳ ಮೇಲೆ ದಾಳಿ ಮಾಡಿರಿ. ನೀವು ಕೊಕ್ಕುಗಳಲ್ಲಿ ಅಡುಗೆ ಮನೆಯ ಪಂಚಭಕ್ಷ್ಯಗಳನ್ನು ತುಂಬಿಕೊಂಡು ರಾಜ ಕಾಗೆಯ ಬಳಿಗೆ ಹೋಗಿರಿ ಎಂದು ದಳಪತಿ ಕಾಗೆಯು ಹೇಳಿತು.
ದಳಪತಿ ಕಾಗೆಯ ಆ ಮಾತಿಗೆ ಸೇರಿರುವ ಎಲ್ಲಾ ಕಾಗೆಗಳು ಒಪ್ಪಿಕೊಂಡು, ಪೂಜಾ ಕೋಣೆಯಿಂದ ಗಂಟೆ, ತಮಟೆಗಳ, ಸದ್ದು ಬರುವುದನ್ನು ಆಲಿಸುತ್ತಾ ಅಡುಗೆ ಮನೆಯ ಪಾಕಶಾಲೆಯ ಮೇಲೆ ಕುಳಿತುಕೊಂಡವು.
ಪೂಜಾರಿಯವರ ಮಂತ್ರ ಮೊಳಗಿತು, ಶುಕ್ಲಾಂಬದರಂ, ಶಶಿವರ್ಣಂ, ಎಂದು ಕೇಳಿದoತೆ ಜಯದೇವ ಜಯದೇವ, ಜಯ ಮಂಗಲ ಮೂರ್ತಿ, ಎಂದು ಮಂತ್ರಘೋಷವು ಮೊಳಗಿತು. ಆಗಲೇ ದಳಪತಿ ಕಾಗೆಯು ಹೇಳಿರುವ ಉಪಾಯ ಶುರುವಾಯಿತು. ಕೊಕ್ಕಿನಲ್ಲಿ ಏಕಕಾಲದಲ್ಲಿ ಒಂದೊಂದೇ ಅಡುಗೆ ಪದಾರ್ಥವನ್ನು ಶೇಖರಿಸಲು ಶುರು ಮಾಡಿದರು. ಎಲ್ಲಾ ಕಾಗೆಗಳು ತಮ್ಮ ಕೊಕ್ಕಿನಲ್ಲಿ ಅಡುಗೆಯನ್ನು ತುಂಬಿಕೊಂಡು ರಾಜ ಕಾಗೆಯ ಆಸ್ತಾನದ ಗೂಡನ್ನು ತಲುಪಿದವು.
ಮುಂದೆ ಬಿರೇಂದ್ರ ಸಿಂಗ್ ಆಗರವಾಲಾ ಇವರ ಮನೆಯಲ್ಲಿ ಪೂಜೆಯನ್ನು ಮುಗಿಸಿ ದೇವರಿಗೆ ಊಟ ಮಾಡಿಸಿ ಪಾಕ ಶಾಲೆಗೆ ಪ್ರವೇಶ ಮಾಡಿದ ಆಡುಗೆ ಭಟ್ಟರಿಗೆ ಇದೇನು? ಬ್ರಾಹ್ಮಣರ ಭೋಜನಕ್ಕಿಂತ ಮೊದಲೇ ಊಟವನ್ನು ಯಾರು ಮುಗಿಸಿದರು ಎಂದು ಆಶ್ಚರ್ಯದೊಂದಿಗೆ ಯೋಚನೆ ಶುರು ಆಯಿತು. ರಾಜ ಮತ್ತು ರಾಣಿ ಕಾಗೆಯು ಮಾತ್ರ ಆಗಲೇ ಗಮ್ಮತ್ತಿನ ಊಟವನ್ನು ಪ್ರಾರoಭಿಸಿದ್ದವು.
ರಾಜ ಕಾಗೆಯು ತನ್ನ ಪತ್ನಿ ರಾಣಿ ಕಾಗೆಗೆ, ಪ್ರೀಯೆ ನೀನು ಏಷ್ಟು ಬೇಕಾದರೂ ತಿನ್ನು. ನೀನು ಈ ಊಟಕ್ಕೆ ತುಂಬಾ ಆಸೆ ಪಟ್ಟೀರುವೆಯಲ್ಲಾ ಎಂದು ಹೇಳಿತು. ಅದಕ್ಕೆ ರಾಣಿ ಕಾಗೆಯು ಓ ನನ್ನ ರಾಜ, ನೀವು ದಳಪತಿಯವರಿಗೆ ತುಂಬಾ ಧನ್ಯವಾದಗಳು ಎಂದು ಹೇಳಿರಿ. ನನಗೆ ಈ ಊಟವನ್ನು ಮಾಡಿಸಲು ದಳಪತಿ ಯವರು ನಿಮಗಿಂತ ಹೆಚ್ಚು ಕಷ್ಟ ಪಟ್ಟಿದ್ದಾರೆ ಎಂದು ಹೇಳಿತು. ಮುಂದೆ ರಾಣಿ ಕಾಗೆಯು ಮಿಕ್ಕಿದ ಊಟವನ್ನು ತಿನ್ನಲು ಎಲ್ಲಾ ಕಾಗೆಗಳನ್ನು ಕರೆಯಲು ದಳಪತಿಯವರಿಗೆ ತಿಳಿಸಿರಿ ಎಂದು ಹೇಳಿತು.
ರಾಣಿಯ ಆಜ್ನೆಯಂತೆ ರಾಜ ಕಾಗೆಯು ದಳಪತಿಯನ್ನು ಕರೆಯಿತು. ದಳಪತಿ ಕಾಗೆಯು ಬರುತ್ತಲೇ ಅಪ್ಪಣೆ ಆಗಬೇಕು ಪ್ರಭು ಎಂದು ಹೇಳಿತು. ಅದಕ್ಕೆ ರಾಜ ಕಾಗೆಯು ದಳಪತಿಯೇ, ನೀವು ನಮ್ಮ ಬಳಗದ ಎಲ್ಲಾ ಕಾಗೆಗಳನ್ನು ಕರೆಯಿರಿ. ನೀವು ಕೊಕ್ಕಿನಲ್ಲಿ ಶೇಖರಿಸಿ ತಂದಿರುವ ಊಟವು ಜಾಸ್ತಿ ಮೀಕ್ಕಿರುತ್ತದೆ. ಅದನ್ನು ನೀವು ಸ್ವೀಕರಿಸಿ ಮತ್ತು ಎಲ್ಲಾ ಕಾಗೆಗಳಿಗೂ ಹಂಚಿರಿ ಎಂದು ದಳಪತಿ ಕಾಗೆಗೆ ರಾಜ ಕಾಗೆಯು ಹೇಳಿತು.
ಅದಕ್ಕೆ ದಳಪತಿ ಕಾಗೆಯು ಎಲ್ಲಾ ಕಾಗೆಗಳನ್ನು ಕರೆದು ರಾಜ ಕಾಗೆಯು ಹೇಳಿದ ವಿಷಯವನ್ನು ತಿಳಿಸಿತು. ದಳಪತಿ ಕಾಗೆಯ ಈ ಮಾತನ್ನು ಕೇಳುತ್ತಲೇ, ಎಲ್ಲಾ ಕಾಗೆಗಳು ಪ್ರಭು ನಮಗೆ ಊಟವನ್ನು ಕದ್ದು ತಂದಿರುವುದಕ್ಕಾಗಿ ಈಗಾಗಲೇ ಅಪರಾಧಿ ಎಂದು ಮನಸ್ಸು ಕಾಡುತ್ತಿದೆ. ಇನ್ನು ಅದೇ ಊಟವನ್ನು ನಾವು ಮಾಡಿ ಇನ್ನಷ್ಟು ಪಾಪ ಪ್ರಜ್ಞೆಯನ್ನು ಏಕೆ ಜಾಸ್ತಿ ಮಾಡಿಕೊಳ್ಳಬೇಕು? ಪ್ರಭು , ಎಂದು ಹೇಳಿತು. ಅದಕ್ಕೆ ದಳಪತಿ ಕಾಗೆಯು ಪಾಪ ಪ್ರಜ್ಞೆ ಎಂದು ಏಕೆ ಅಂದುಕೊಳ್ಳುವೀರಿ. ನೀವು ಒಬ್ಬ ಗರ್ಭಿಣಿ ರಾಣಿಗೆ ಊಟ ನೀಡಿ ಪುಣ್ಯವನ್ನು ಕಟ್ಟಿಕೊoಡಿರುವಿರಿ. ನನ್ನ ಮತ್ತು ನಿಮ್ಮ ಪ್ರಾಮಾಣಿಕವಾದ ಕರ್ತವ್ಯ , ನಿಷ್ಟೆಯನ್ನು ನಮ್ಮ ರಾಜ ಕಾಗೆಯು ಯಾವತ್ತೂ ಮರೆಯುವಂತಿಲ್ಲಾ. ಅವರು ನಿಮ್ಮ ನಿಷ್ಟೆಯನ್ನು ಈಗಾಗಲೇ ನನ್ನ ಮುಂದೆ ಕೊಂಡಾಡಿದ್ದಾರೆ.
ನನ್ನ ರಾಣಿ ಕಾಗೆಗೆ ಮರಿ ಕಾಗೆ ಹುಟ್ಟಿದ ಮೇಲೆ ನಾಮಕರಣ ಸಮಾರಂಭಕ್ಕೆ ನಿಮ್ಮೆಲ್ಲರನ್ನು ಖಂಡಿತ ಕರೆತರಬೇಕೆಂದು ಹೇಳಿರುತ್ತಾರೆ ಎಂದು ದಳಪತಿ ಕಾಗೆಯು ಸೇರಿರುವ ಎಲ್ಲಾ ಕಾಗೆಗಳಿಗೆ ಹೇಳಿತು. ಅಲ್ಲಿಗೆ ಕಾಗೆಯ ಕುಪ್ಪಸವು ಸಮಾಪ್ತವಾಗಿ ಪಂಚ ಭಕ್ಷ ಭೋಜನ ಸ್ವೀಕರಿಸಿದ ರಾಣಿ ಕಾಗೆಯು ಅವಳಿ ಜವಳಿ, ಮಗುವಿಗೆ ಜನ್ಮವನ್ನು ನೀಡಿತು.
ಮುಂದೆ ರಾಜವಂಶದ ಪರಂಪರೆಯಂತೆ ಎಲ್ಲ ಕಾಗೆಗಳ ಬಳಗವು ಸೇರಿ ರಾಜ ರಾಣಿಯ ಮಕ್ಕಳಿಗೆ ನಾಮಕರಣವನ್ನು ಮಾಡಿ ಸಿಹಿ ಊಟವನ್ನು ಸ್ವೀಕರಿಸಿದವು.
(ಲೇಖಕರು ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷರು)