ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಮನಸುಗಳ ಪರಿವರ್ತನೆಗೆ ಗಾಂಧೀಜಿಯವರ ಜೀವನ ಹಾಗೂ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಿಂಡಲಗಾ ಕೇಂದ್ರ ಕಾರಾಗೃಹ ಆವರಣದಲ್ಲಿ ಪಾಪುಗಾಂಧಿ ಬಾಪು ಆದ ಕಥೆ ರಂಗರೂಪಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಸತ್ಯ, ಅಹಿಂಸೆ ರೂಪಕ ವ್ಯಕ್ತಿ ಗಾಂಧೀಜಿಯವರು ಸದಾ ನೆಲೆಸಿರಬೇಕು. ಗಾಂಧೀಜಿಯವರ ಜೀವನಗಾಥೆಯನ್ನು ಅವಲೋಕಿಸಿ, ಅಭ್ಯಸಿಸಿ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅವಳಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಡಿ.ಎಸ್. ಚೌಗುಲೆ ಮಾತನಾಡಿ, ಗಾಂಧೀಜಿಯವರ ಜೀವನ ಮೌಲ್ಯಗಳು, ತತ್ವಗಳು ಅನೇಕ ಕೈದಿಗಳಲ್ಲಿ ಮನ ಪರಿವರ್ತನೆಗ ನಾಂದಿ ಹಾಡಿವೆ. ಅನೇಕ ಕೌಶಲಗಳನ್ನು ಹೊಂದಿರುವಂಥವರು ಆವೇಶದ ಸನ್ನಿವೇಶಕ್ಕೆ ಬಲಿಯಾಗಿ ಇಲ್ಲಿದ್ದೀರಿ. ತಮ್ಮಲ್ಲಿರುವಂತಹ ಕೌಶಲಗಳನ್ನು ಕಾಪಾಡಿಕೊಂಡು ಹೊರಗಡೆ ಹೋದ ನಂತರ ಘನತೆಯ ಬದುಕು ಕಟ್ಟಿಕೊಳ್ಳುವ ಕಾರ್ಯ ಮಾಡಿ ಎಂದು ಕರೆ ನೀಡಿದರು.
ಪಾಪುಗಾಂಧಿ ಬಾಪು ಆದ ಕಥೆ ರಂಗರೂಪಕ ೧೮ ದಿನ ಜಿಲ್ಲೆಯಾದ್ಯಂತ ಸಂಚರಿಸಿ ೩೩ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ನೀಡಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಮಾರೋಪಗೊಂಡಿತು.
ಜೈಲರಗಳಾದ ಎಸ್.ಐ. ಶಹಾಪುರಕರ, ಐ.ಎಸ್. ಹಿರೆಮಠ, ಎಸ್.ಬಿ. ಪಾಟೀಲ, ಎಂ.ಎಂ. ಹಿರೇಮಠ, ಶಿಕ್ಷಕ ಶಶಿಕಾಂತ ಯಾದಗುಡೆ, ಕಾರಾಗೃಹ ಸಿಬ್ಬಂದಿ, ರಂಗಪಯಣದ ಜಿಲ್ಲಾ ಸಂಚಾಲಕ ಕಲ್ಲಪ್ಪ ಪೂಜೇರಿ, ರಂಗಭೂಮಿ ಚಿಂತಕ ರಾಮಕೃಷ್ಣ ಮರಾಠೆ, ಕನ್ನಡ ಉಪನ್ಯಾಸಕ ಹೆಚ್.ಬಿ. ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.