ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 40 ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು ನೀಡುವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಮೂರ್ತಿ ಅವರು, ‘ವೀರ ಯೋಧರ ಕುಟುಂಬಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ. ಯೋಧರ ಸಾವಿನ ಸುದ್ದಿ ನನ್ನ ಸಂಬಂಧಿಕರೇ ಸಾವಿಗೀಡಾದಂತೆ ದುಃಖ ಆಯಿತು. ಬಾಳಿ ಬದುಕಬೇಕಾದ ಯುವಕರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ನೆರವು ನೀಡುವ ತೀರ್ಮಾನ ಮಾಡಿದ್ದೇವೆ. ಇದು ಅವರ ಜೀವಕ್ಕೆ ಕೊಟ್ಟ ಬೆಲೆ ಅಲ್ಲ. ಆದರೆ ನಮ್ಮ ಕುಟುಂಬವನ್ನು ಯಾರೂ ಕೈ ಹಿಡಿಯಲಿಲ್ಲ ಎಂಬ ಭಾವನೆ ಬರದಂತೆ ಮಾಡಬೇಕು ಎನ್ನುವ ಕಾರಣದಿಂದ ಸಹಾಯ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ದೇಶದ ಯೋಧರ ಸಾವಿನ ಬಗ್ಗೆ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ಅಗತ್ಯವಿದೆ. ಇಂತಹ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಂಡು ವಿಳಂಬ ಆಗದಂತೆ ನೋಡಿಕೊಳ್ಳಬೇಕು’ ಎಂದರು.
ಪಾಪಿಸ್ತಾನ್ ಪರ ಸ್ಟೇಟಸ್: ಶಿಕ್ಷಕಿ ಬಂಧನ
ವಿದ್ಯಾಭ್ಯಾಸದ ಹೊಣೆ
ಈ ಮಧ್ಯೆ, ಹುತಾತ್ಮರಾದ ಎಲ್ಲಾ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ರಿಲಯನ್ಸ್ ಸಂಸ್ಥೆ ಘೋಷಿಸಿದೆ. ನೀತಾ ಅಂಬಾನಿ ಒಡೆತನದ ಈ ಸಂಸ್ಥೆ ಪಾಕಿಸ್ತಾನಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರ ಯೋಧರ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ಘೋಷಿಸಿದೆ. ಅದರ ಜೊತೆ ನೌಕರಿಯ ಜವಾಬ್ದಾರಿಯನ್ನೂ ಹೊರಲು ತಯಾರಿರುವುದಾಗಿ ತಿಳಿಸಿದೆ.