Latest

ಕಿತ್ತೂರು ಉದ್ಯೋಗ ಮೇಳದಲ್ಲಿ ೩೦ ವಿಶೇಷಚೇತನರಿಗೆ ಉದ್ಯೋಗ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:

ಕೇಂದ್ರ ಸರಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರ (ಎನ್‌ಎಸ್‌ಡಿಸಿ), ಕದಂಬ ಫೌಂಡೇಷನ್ ಮತ್ತು ನಗರದ ಕೆಎನ್‌ವಿವಿಎಸ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಉದ್ಯೋಗ ಮತ್ತು ಕೌಶಲ ಮೇಳದಲ್ಲಿ ೩೦ ವಿಶೇಷಚೇತನರಿಗೆ ಉದ್ಯೋಗ ನೀಡಲಾಯಿತು. ಈ ಪೈಕಿ ೧೦ ಮಂದಿಗೆ ಸ್ಥಳದಲ್ಲೇ ಉದ್ಯೋಗಪತ್ರ ನೀಡಲಾಯಿತು.

೪೮ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ೨೦೦೦ಕ್ಕೂ ಅಧಿಕ ಯುವಕ, ಯುವತಿಯರು ಹೆಸರು ನೊಂದಾಯಿಸಿಕೊಂಡಿದ್ದರು. ೩೫೦೦ಕ್ಕೂ ಹೆಚ್ಚು ಉದ್ಯೋಗಾವಕಾಶ ಇದ್ದು, ಸಂಜೆಯವರೆಗೂ ಆಯ್ಕೆ ಪ್ರಕ್ರಿಯೆ ಮುಂದುವರೆದಿತ್ತು. ಒಟ್ಟು ೧೦೦ಕ್ಕೂ ಹೆಚ್ಚು ಜನರಿಗೆ ಸ್ಥಳದಲ್ಲೇ ಉದ್ಯೋಗ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಗರದ ಶಿವಯೋಗಿ ವಿಭೂತಿಮಠ ಸಂಕೀರ್ಣದಲ್ಲಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ, ಮೊಬೈಲ್ ಬಿಡಿಭಾಗ ಉತ್ಪಾದನೆ ಹಾಗೂ ಮೊಬೈಲ್ ದುರಸ್ತಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರವನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ ಇದ್ದರೂ, ಸಂದರ್ಶನ ಎದುರಿಸುವ ಕಲೆ ಅವರಿಗೆ ತಿಳಿದಿರುವುದಿಲ್ಲ. ಮುಂದಿನ ದಿನಗಳಲ್ಲಿ ಎನ್‌ಎಸ್‌ಡಿಸಿ ವತಿಯಿಂದ ಗ್ರಾಮೀಣ ಮಕ್ಕಳಿಗಾಗಿ ಸಂದರ್ಶನ ಎದುರಿಸುವ ತರಬೇತಿಯನ್ನೂ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೌಶಲ ಅಭಿವೃದ್ಧಿ ಖಾತೆ ಸಚಿವ ಅನಂತಕುಮಾರ ಹೆಗಡೆಯವರ ದೂರದೃಷ್ಟಿಯ ಫಲದಿಂದ ಹಳ್ಳಿಹಳ್ಳಿಗಳ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ನಡೆದಿದೆ. ಗ್ರಾಮೀಣ ಬಡಕುಟುಂಬಕ್ಕೆ ಒಂದು ಉದ್ಯೋಗ ದೊರಕಿದಲ್ಲಿ ಅದು ರೈತರ ಆತ್ಮಹತ್ಯೆಯಂಥ ಪ್ರಕರಣಗಳನ್ನು ತಡೆಯಲು ದೊಡ್ಡ ಕೊಡುಗೆಯಾಗುತ್ತದೆ. ಅದು ಯಾವ ಸಬ್ಸಿಡಿಗಿಂತಲೂ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಉದ್ಯೋಗ ಮೇಳದಲ್ಲಿ ಒಟ್ಟು ೩೦ ವಿಶೇಷಚೇತನರಿಗೆ ತಲಾ ೨೧ ಸಾವಿರ ರೂ. ಮಾಸಿಕ ವೇತನದ ಉದ್ಯೋಗ ಕಲ್ಪಿಸಿಕೊಟ್ಟು ಮಾತನಾಡಿದ ವಿಶೇಷಚೇತನ ಈರಪ್ಪ ಕುಲಾಲ, ವಿಶೇಷ ಚೇತನರಿಗೆ ಸೂಕ್ತ ತರಬೇತಿ ನೀಡುವ ಜತೆಗೆ ಅವರಿಗೆ ಸಾಧ್ಯವಾದಷ್ಟೂ ಅವರದ್ದೇ ಪ್ರದೇಶದಲ್ಲಿ ಉತ್ತಮ ಉದ್ಯೋಗ ದೊರಕಿಸಿಕೊಡಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ಇದುವರೆಗೆ ೭೦೦ ವಿಶೇಷಚೇತನರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ ಎಂದು ಹೇಳಿದರು.
ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್‌ಎಸ್‌ಡಿಸಿ ಕರ್ನಾಟಕ ಮುಖ್ಯಸ್ಥ ಕೌಸ್ತುಭನಾಥ, ರಾಮನಾಥ ಮಯ್ಯ, ಕೆಎನ್‌ವಿವಿಎಸ್ ಕಾರ್ಯದರ್ಶಿ ಜೆ.ವಿ.ವಸ್ತ್ರದ, ಬಿಜೆಪಿ ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ ಮಾತನಾಡಿದರು. ಪ್ರಾಚಾರ್ಯ ಬೊಮ್ಮನಗೌಡರ ಸ್ವಾಗತಿಸಿ, ಅಧಿಕಾರಿ ಕೆ.ಎನ್. ನರಹರಿ ವಂದಿಸಿದರು. ಉಪನ್ಯಾಸಕಿ ಸಂಗೀತಾ ತೊಲಗಿ ನಿರೂಪಿಸಿದರು.

Home add -Advt

Related Articles

Back to top button