Latest

ಖಾನಾಪುರ ಜಾತ್ರೆಗೆ ಅದ್ಧೂರಿ ಚಾಲನೆ; ಇಲ್ಲಿದೆ ಅಪರೂಪದ ವೀಡಿಯೋ

ಪ್ರಗತಿವಾಹಿನಿ ಸುದ್ದಿ, ಖಾನಾಪುರ
​ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಲಕ್ಷ್ಮೀದೇವಿ ಜಾತ್ರೆಗೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು.
 ಫೆಬ್ರವರಿ 28 ರವರೆಗೆ ಈ ಜಾತ್ರೆಯು ವಿಜೃಂಭಣೆಯಿಂದ ಜರುಗಲಿದ್ದು, ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳಕರ್ ಸಂಪೂರ್ಣ ಉಸ್ತುವಾರಿ ಹೊತ್ತಿದ್ದಾರೆ.
​ಖಾನಾಪುರ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿಯ ಜಾತ್ರೆಗೆ ನೆರೆಹೊರೆಯ ರಾಜ್ಯ ಮತ್ತು ಜಿಲ್ಲೆಗಳಿಂದ ಪ್ರತಿದಿನ ಆಗಮಿಸುವ ಲಕ್ಷಾಂತರ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಕಮಿಟಿ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕುಂದುಕೊರತೆಗಳನ್ನು ಪಟ್ಟಿಮಾಡಿದ್ದ ಅಂಜಲಿ,  ಆರೇಳು ತಿಂಗಳ ಮುಂಚೆಯೇ ಅಗತ್ಯ ಅನುದಾನ ಬಿಡುಗಡೆ ಮಾಡಿಸಿದ್ದರು.
ಸುಮಾರು 9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಶ್ರೀ ಲಕ್ಷ್ಮೀದೇವಿ ಜಾತ್ರೆ ನಡೆಯುವ ಪ್ರದೇಶವನ್ನು ಸಂಪರ್ಕಿಸುವ ಎರಡು ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ತಕ್ಷಣ ಮಂಜೂರು ಮಾಡಿಸಿ ರೂ.3.40 ಕೋಟಿಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಗುಣಮಟ್ಟದ ರಸ್ತೆಯನ್ನು ಭಕ್ತಾದಿಗಳಿಗೆ ಒದಗಿಸಲಾಗಿದೆ. ಖಾನಾಪುರ ಪಟ್ಟಣದೊಳಗೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಾಗಳೆ ಗಲ್ಲಿ, ಸಯ್ಯದ್ ಗಲ್ಲಿ, ಮಠಗಲ್ಲಿ, ನಿಂಗಾಪುರ ಗಲ್ಲಿ, ಚವ್ವಾಟಾ ಗಲ್ಲಿ, ರವಿವಾರ ಪೇಠ, ಘಾಡಿ ಗಲ್ಲಿ, ಗುರವ್ ಗಲ್ಲಿ, ಕೆ.ಎಸ್.ಆರ್.ಪಿ. ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ.
 ಪಟ್ಟಣದ ಸುಂದರೀಕರಣಕ್ಕಾಗಿ ವಿಶೇಷ ದೀಪಗಳನ್ನು ಪಟ್ಟಣದ ರಸ್ತೆ ವಿಭಜಕದಲ್ಲಿ ಅಳವಡಿಸುವ ಕಾಮಗಾರಿ ಮತ್ತು ಚರಂಡಿ ಕಾಮಗಾರಿಗಳೂ ಚಾಲನೆಯಲ್ಲಿವೆ.  ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಲು ಫಿಶ್ ಮಾರ್ಕೆಟ್ ಮತ್ತು ತರಕಾರಿ ಮಾರುಕಟ್ಟೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗಿದೆ.  ಅನಧಿಕೃತ ರಸ್ತೆ ಅತಿಕ್ರಮಣಗಳನ್ನು ತೆರವುಗೊಳಿಸಿ ದೇವಿಯ ಮೆರವಣಿಗೆಗ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಮಾಡಲಾಗಿದೆ.
 ಸುರಕ್ಷತೆಯ ದೃಷ್ಠಿಯಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 27 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತಾದಿಗಳ ಸೌಲಭ್ಯಕ್ಕಾಗಿ 40 ಕುಡಿಯುವ ನೀರಿನ ಟ್ಯಾಂಕ್ ಗಳು, ಸಂಚಾರಿ(ಮೊಬೈಲ್) ಶೌಚಾಲಯ, ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ಗಳು, 4 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ.
ಕುಟುಂಬ ಸಮೇತ ದೇವಿಯ ಪೂಜಾ ಚಟುವಟಿಕೆ, ಮೆರವಣಿಗೆ ಮತ್ತು ಹೊನ್ನಾಟದಲ್ಲಿ ಪಾಲ್ಗೊಂಡಿರುವ ಅಂಜಲಿ ನಿಂಬಾಳ್ಕರ್,  ದೇವಿಯ ಮೆರವಣಿಗೆಯಲ್ಲಿ ಶ್ರೀ ಲಕ್ಷ್ಮೀದೇವಿಗೆ ಹೆಲಿಕಾಫ್ಟರ್ ಮೂಲಕ “ಪುಷ್ಪವೃಷ್ಠಿ” ನೆರವೇರಿಸಿದರು.
ದಿನವಿಡೀ ಭಕ್ತರಿಗೆ ಹೊನ್ನಾಟ ವಾಡಲು ಸುಮಾರು 500 ಚೀಲಗಳಷ್ಟು ಭಂಡಾರದ ವ್ಯವಸ್ಥೆ ಮಾಡಿದ್ದಾರೆ. ಪ್ರತಿದಿನ ಮಧ್ಯಾಹ್ನ 12 ರಿಂದ 4 ರವರೆಗೆ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

Related Articles

Back to top button