
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯ ಕಾನೂನಿನ ಸಮರಕ್ಕೆ ಎಲ್ಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಇದೇ 30 ರಂದು ವಿಚಾರಣೆಗೆ ಬರಲಿರುವ ಗಡಿ ವಿಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಸಿಎಂ, 2004 ರಲ್ಲಿ ಮಹಾರಾಷ್ಟ್ರ ಹೂಡಿರುವ ಪ್ರಕರಣದ ಬೆಳವಣಿಗೆ ಹಾಗೂ ಯಾವ ಪ್ರಮುಖ ಅಂಶಗಳು ನಡೆದಿವೆ ಹಾಗೂ 30 ರಂದು ಬರಲಿರುವ ವಿಚಾರಗಳೇನು ಎಂದು ಚರ್ಚಿಸಲಾಗಿದೆ. 2017 ರಲ್ಲಿ ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕೋ ಬೇಡವೋ ಎಂದು ಮೆಂಟೇನಬಿಲಿಟಿ ಬಗ್ಗೆ ಪ್ರಶ್ನೆ ಕೇಳಿ ಆದೇಶ ಮಾಡಿದ್ದರು. ಈ ಆದೇಶದನ್ವಯ ಮೆಂಟೇನಬಿಲಿಟಿ ಬಗ್ಗೆ ಚರ್ಚೆಯಾಗಲಿದೆ. ಈ ಮಧ್ಯೆ ಮಹಾರಾಷ್ಟ್ರ 2017 ರ ಪ್ರಕರಣ ವನ್ನು ಪ್ರಶ್ನಿಸಿದ್ದರು. ಈ ಬಗ್ಗೆ ನಮ್ಮ ನಡೆ ಏನಿರಬೇಕು, ಸಂವಿಧಾನ ಏನು ಹೇಳುತ್ತದೆ ಅವೆಲ್ಲವನ್ನೂ ಚರ್ಚೆ ಮಾಡಿದ್ದೇವೆ. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸಂವಿಧಾನ, ರಾಜ್ಯ ಪುನರ್ ವಿಂಗಡನಾ ಕಾಯ್ದೆ ಹಾಗೂ ಸತ್ಯಾಂಶ ಗಳು ನಮ್ಮ ಪರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಎ. ಜಿ ಪ್ರಭುಲಿಂಗ ನಾವಡಗಿ, ಹಾಗೂ ನ್ಯಾ. ಉದಯ ಹೊಳ್ಳ ಅವರು ಕೆಲವು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ನವೆಂಬರ್ 29 ಕ್ಕೆ ದೆಹಲಿಗೆ ತೆರಳಲಿದ್ದು ಹಿರಿಯ ವಕೀಲ ಮುಕುಲ್ ರಹ್ತೋಗಿ ಅವರೊಂದಿಗೆ ಕೂಡ ವಿಷಯಗಳನ್ನು ಚರ್ಚಿಸಲಾಗುವುದು. ಒಟ್ಟಾರೆ ಎಲ್ಲಾ ದೃಷ್ಟಿಯಿಂದ ನಮ್ಮ ಗಡಿ ಹಾಗೂ ನೆಲದ ರಕ್ಷಣೆಗೆ ಕಾನೂನು ಸಮರಕ್ಕೆ ಸಿದ್ಧರಿದ್ದೇವೆ ಎಂದರು.
ಸರ್ವಪಕ್ಷ ಸಭೆ
ಸರ್ವಪಕ್ಷ ಸಭೆಯನ್ನು ವಿರೋಧ ಪಕ್ಷದ ನಾಯಕ ರೊಂದಿಗೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡಿದ ಕೂಡಲೇ ಕರೆಯಲಾಗುವುದು ಎಂದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ .ವಿ. ಪಾಟೀಲ್, ಹಿರಿಯ ವಕೀಲರಾದ ಉದಯ ಹೊಳ್ಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ:ಸಿ.ಸೋಮಶೇಖರ್,ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
https://pragati.taskdun.com/cm-basavaraj-bommaithirthahalli-b-block-inauguration/
ಪಶ್ಚಿಮ ಬಂಗಾಳದ ಸಂಸದೆ ಹಾಟ್ ಅವತಾರಕ್ಕೆ ಅವಕ್ಕಾದ ಜನ !