ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ರಾಜ್ಯದಲ್ಲಿ ವಿನೂತನ ಶೈಕ್ಷಣಿಕ ಕಾರ್ಯಗಳನ್ನು ಕೈಗೊಂಡು ವಿದ್ಯಾರ್ಥಿಗಳ ಶ್ರೇಯೊಭಿವೃದ್ದಿಗೆ ಹಗಲಿರುಳು ಶ್ರಮಿಸಿ ರಾಜ್ಯ ಮಟ್ಟದಲ್ಲಿ ಮೂಡಲಗಿ ವಲಯ ಹೆಸರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ ಎಂದು ಚಿಕ್ಕೋಡಿ ಡಿ.ಡಿ.ಪಿ.ಐ ಎಮ್ ಜಿ ದಾಸರ ಹೇಳಿದರು.
ಅವರು ರವಿವಾರ ಪಟ್ಟಣದ ವಿವಿಧ ಶಾಲೆಗಳಲ್ಲಿ ಜರುಗಿದ ವಸತಿ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು. ಮೂಡಲಗಿ ವಲಯದಲ್ಲಿ 5341 ವಿದ್ಯಾರ್ಥಿಗಳಲ್ಲಿ 148 ಗೈರಾಗಿ 5193 ಮಕ್ಕಳು ಪ್ರವೇಶ ಬಯಸಿ ಪರೀಕ್ಷೆ ಬರೆದಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು ವಿಶೇಷವಾಗಿದೆ. ವಲಯದಲ್ಲಿ ಇಂತಹ ಕೆಲಸವಾಗಲು ಪಟ್ಟಿರುವ ಶ್ರಮ ಮಾದರಿಯಾಗಿದೆ. ಇಲ್ಲಿ ಕೈಗೊಂಡ ಅಣಕು ಪರೀಕ್ಷೆಗಳು, ಪೋನ್ ಇನ್ ಕಾರ್ಯಕ್ರಮ, ಮುರಾರ್ಜಿ ವಸತಿ ಶಾಲೆಗಳ ಸಿಬ್ಬಂದಿಯಿಂದ ಶಾಲೆಗಳಿಗೆ ಭೇಟಿ ಹಾಗೂ ಅವರು ಕೊಟ್ಟ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಸತ್ವಯುತ ಕಲಿಕೆಯಾಗಲು ಬೇರು ಮಟ್ಟದ ಪ್ರಾಥಮಿಕ ಶಿಕ್ಷಣ ಗಟ್ಟಿಗೊಳಿಸಿದಾಗ ಮಾತ್ರ ಸಾಧ್ಯವಾಗುವುದು. ಮೂಡಲಗಿಯಲ್ಲಿ ಜರುಗುವ ಪ್ರತಿಯೊಂದು ಶೈಕ್ಷಣಿಕ ಕಾರ್ಯಕ್ರಮಗಳು ವಿನೂತನ ಶೈಲಿಯಲ್ಲಿದ್ದು ವಿದ್ಯಾರ್ಥಿ ದಿಸೆಯಿಂದ ರೂಪುಗೊಂಡಿರುವ ಕಾರ್ಯಕ್ರಮಗಳಾಗಿರುತ್ತವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗಳು ಶಾಂತ ರೀತಿಯಲ್ಲಿ ಮುಗಿದಿದ್ದು, ವಿದ್ಯಾರ್ಥಿಗಳು ತಮ್ಮ ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಪಾಲಕರ ಶಿಕ್ಷಕರ ಹಾಗೂ ಪೋಷಕರ ಪಾತ್ರ ಹಿರಿದಾಗಿದೆ. ಮಕ್ಕಳ ಭವ್ಯ ಭವಿಷ್ಯತ್ತನ್ನು ನಿರ್ಮಿಸಿಕೊಡುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಚಿಕ್ಕೋಡಿ ಡೈಟ್ ಪ್ರಾಚಾರ್ಯ ಮೋಹನ ಜೀರಗ್ಯಾಳ ಮಾತನಾಡಿ, ಮೂಡಲಗಿಯ 22 ಪರೀಕ್ಷಾ ಕೇಂದ್ರಗಳಲ್ಲಿ 5193, ಅಥಣಿ 1941, ಹುಕ್ಕೇರಿ 1860, ರಾಯಬಾಗ 2709, ಚಿಕ್ಕೋಡಿ 1898, ಗೋಕಾಕ 1480 ಒಟ್ಟು ಮಕ್ಕಳು ಹಾಜರಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 15368 ಮಕ್ಕಳಲ್ಲಿ 287 ಗೈರಾಗಿ 15081 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಜಿಲ್ಲೆಯ ಅಂಕಿ ಅಂಶವನ್ನು ನೀಡಿದರು.
ಮೂಡಲಗಿ ಬಿ.ಇ.ಒ ಅಜೀತ ಮನ್ನಿಕೇರಿ ಮಾತನಾಡಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಲ್ಲಿ ನಡೆಯುವ ವಿನೂತ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ವಲಯ ವ್ಯಾಪ್ತಿಕ ಶಿಕ್ಷಕ ಸಮೂಹ, ಪ್ರಧಾನ ಗುರುಗಳು, ಸಿಆರ್ಪಿ, ಬಿ.ಆರ್.ಪಿ, ಇಸಿಒ, ಶಿಕ್ಷಕ ಸಂಘಟನೆಯವರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಾಧ್ಯವಾಗುವುದು ಎಂದು ನುಡಿದರು.
ಮೊರಾರ್ಜಿ ವಸತಿ ಶಾಲೆಗಳ ಅಧಿಕಾರಿಗಳಾದ ಆರ್ ವಾಯ್ ಗಂಗರಡ್ಡಿ, ಕೆ.ಎಚ್ ಮಾರಾಪೂರ, ವಾಯ್.ಬಿ ಬಾವಿಮನಿ, ಎನ್ ಜಿ ಯರಗಟ್ಟಿ, ಜಿ.ಎಮ್ ಸಕ್ರಿ ಕಾರ್ಯನಿರ್ವಹಿಸಿದರು.
ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯನ್ನು ದೈಹಿಕ ಪರಿವೀಕ್ಷಕ ಎಸ್ ಎ ನಾಡಗೌಡರ, ಶಿಕ್ಷಣ ಸಂಯೋಜಕ ಟಿ ಕರಿಬಸವರಾಜು, ಬಿ.ಆರ್.ಪಿ ಕೆ.ಎಲ್ ಮೀಶಿ, ಪರೀಕ್ಷಾ ಕೇಂದ್ರಗಳ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಭಾಗವಹಿಸಿದ್ದರು. ಮೂಡಲಗಿ ಪೋಲಿಸ್ ಠಾಣೆಯ ಪ್ರೋಬೆಷನರಿ ಡಿವಾಯ್ಎಸ್ಪಿ ಪ್ರವೀಣ ಎಮ್, ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಶರಣೇಶ ಜಾಲಿಹಾಳ ಹಾಗೂ ಸಿಬ್ಬಂದಿ ವರ್ಗ ಸೂಕ್ತ ಬಂದೋ ಬಸ್ತ್ ನೀಡಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಯಲು ಸಹಾಯ ನೀಡಿದರು.
(ಸುದ್ದಿಯ ಲಿಂಕ್ ನ್ನು ಎಲ್ಲರಿಗೂ ಶೇರ್ ಮಾಡಿ)