Latest

ಮೇ.20ರಿಂದ ಭತ್ತದ ಬಿತ್ತನೆ ಬೀಜ ವಿತರಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಸಲುವಾಗಿ ಅಗತ್ಯವಿರುವ ಬಿತ್ತನೆ ಬೀಜಗಳನ್ನು  ರೈತ ಸಂಪರ್ಕ ಕೇಂದ್ರಗಳಲ್ಲಿ ಇದೇ ಮೇ.20ರಿಂದ ವಿತರಿಸಲಾಗುತ್ತಿದೆ. ರೈತರು ಇಲಾಖೆಯಿಂದ ವಿತರಿಸುವ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ಖಾನಾಪುರ, ಬೀಡಿ, ಜಾಂಬೋಟಿ ಮತ್ತು ಗುಂಜಿ ಗ್ರಾಮಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳು ಮತ್ತು ಹಿರೇಮುನವಳ್ಳಿ, ಕಕ್ಕೇರಿ ಮತ್ತು ಗರ್ಲಗುಂಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕವೇ ಖರೀದಿಸಿ ಬಿತ್ತನೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಬಿ ಚವ್ಹಾಣ ಕೋರಿದ್ದಾರೆ. 
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೃಷಿ ಇಲಾಖೆಯಿಂದ ರೈತರಿಗೆ ಉತ್ತಮ ಗುಣಮಟ್ಟದ, ಪ್ರಮಾಣೀಕೃತ ಹಾಗೂ ಸಂಸ್ಕರಿಸಿದ ಭತ್ತ ಮತ್ತು ಹೆಸರು ಬಿತ್ತನೆ ಬೀಜಗಳನ್ನು ಮತ್ತು ಪೋಷಕಾಂಶಗಳು, ಲವಣ ಮಿಶ್ರಣಗಳನ್ನು ಸರ್ಕಾರದ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಕಳೆದ ವರ್ಷ ತಾಲ್ಲೂಕಿನ ವಿವಿಧೆಡೆ ಕೆಲ ರೈತರು ನಕಲಿ ಕಂಪನಿಗಳ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ಮೋಸಹೋಗಿದ್ದಾರೆ. ಇದರಿಂದ ಅವರ ಪರಿಶ್ರಮವೂ ವ್ಯರ್ಥವಾಗಿದ್ದು, ಸಾಕಷ್ಟು ಹಣವೂ ವ್ಯರ್ಥವಾಗಿದೆ. ಕಳಪೆ ಬೀಜಗಳನ್ನು ಬಳಸಿ ಕೈ ಸುಟ್ಟುಕೊಳ್ಳುವಂತಹ ಪರಿಸ್ಥಿತಿ ಬಾರದಂತೆ ರೈತರು ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ತಾಲ್ಲೂಕಿನ ಖಾನಾಪುರ, ಗುಂಜಿ, ಬೀಡಿ ಮತ್ತು ಜಾಂಬೋಟಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯಾ, ಇಂಟಾನ್, ಆಯ್.ಆರ್.64, ಅಭಿಲಾಷಾ, ಬಿ.ಪಿ.ಟಿ ಭತ್ತದ ಬೀಜಗಳು ಮತ್ತು ಜಿ.ಎಂ, ಬಿ.ಜಿ.ಎಸ್ ತಳಿಯ ಹೆಸರು ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಭತ್ತದ ಬೀಜಗಳನ್ನು ಖರೀದಿಸುವ ಸಾಮಾನ್ಯ ರೈತರಿಗೆ ರೂ.8 ಸಹಾಯಧನ ಮತ್ತು ಎಸ್.ಸಿ, ಎಸ್.ಟಿ ರೈತರಿಗೆ ರೂ.12 ಸಹಾಯಧನ ನೀಡಲಾಗುತ್ತದೆ. ಹೆಸರು ಬೀಜ ಖರೀದಿಸುವ ಸಾಮಾನ್ಯ ರೈತರಿಗೆ ರೂ.25 ಸಹಾಯಧನ ಮತ್ತು ಎಸ್.ಸಿ, ಎಸ್.ಟಿ ರೈತರಿಗೆ ರೂ.37.50 ಸಹಾಯಧನ ನೀಡಲಾಗುತ್ತದೆ. ಬಿತ್ತನೆ ಬೀಜಗಳನ್ನು ಖರೀದಿಸುವ ಸಾಮಾನ್ಯ ರೈತರು ತಮ್ಮ ಪಹಣಿ ಪತ್ರಿಕೆ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಬೇಕು. ಎಸ್.ಸಿ, ಎಸ್.ಟಿ ರೈತರು ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button