ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಮಾನವಿಯ ಮೌಲ್ಯಗಳು ನಮ್ಮಲ್ಲಿ ಇದ್ದರೆ ದೇವರು ಆಶಿರ್ವಾದ ಮಾಡುತ್ತಾನೆ, ಮನುಷ್ಯ ಪರಮಾತ್ಮನ ಬಗ್ಗೆ ಅರಿತು ಸತ್ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸು ಶುದ್ಧಗೊಳಿಸಿಕೊಳ್ಳಬೇಕೆಂದು ಕಕಮರಿಯ ರಾಯಲಿಂಗೇಶ್ವರ ಮಠದ ಶ್ರೀ ಅಭಿನವ ಗುರುಲಿಂಗಜಂಗಮ ಸ್ವಾಮಿಜಿ ಹೇಳಿದರು.
ಶ್ರೀಕೃಷ್ಣ ಪಾರಿಜಾತ ಪಿತಾಮಹ ತಮ್ಮಣ್ಣ ಅವರ ತವರೂರಾದ ಕುಲಗೋಡ ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಇರುವ ಶ್ರೀ ಸಾಯಿ ಮಂದಿರದ ಜಾತೆ ಮತ್ತು ವಾರ್ಷಿಕೋತ್ಸವ ಅಂಗವಾಗಿ ಆರ್.ಎಮ್. ಯಡಹಳ್ಳಿ ಪೌಂಢೇಶನ್ ಸಹಯೋಗದಲ್ಲಿ ಜರುಗಿದ ಸಾಂಸ್ಕೃತಿಕ ಸಂಭ್ರಮ-೨೦೧೯ ರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಮನುಷ್ಯ ನಾನು ಯಾರು ಎಂಬುದನ್ನು ಅರ್ಥಮಾಡಿಕೊಂಡು ಧರ್ಮದ ಕಾರ್ಯದಲ್ಲಿ ನಡೆದರೆ ಆನಂದ, ಅಧರ್ಮ ಕಾರ್ಯಗಳಲ್ಲಿ ತೊಡಗಿದರೆ ನೋವು ಕಟ್ಟಿಬುತ್ತಿ ಎಂದರು.
ಪಾಶ್ಚಿಮಾತ್ಯ ಸಂಸ್ಕ್ರತಿ ಮತ್ತು ವಿದೇಶಿ ವಸ್ತುಗಳಿಗೆ ಮಾರುಹೋಗಿ ಮಕ್ಕಳಲ್ಲಿ ಬುದ್ಧಿವಂತಿಕೆ, ಜ್ಞಾಪಕ ಶಕ್ತಿ ಕಡಿಮೆಯಾಗುತಿದ್ದು ಮುಖ್ಯವಾಗಿ ಮಹಿಳೆಯರು ಹಣೆಯ ಮೇಲೆ ಕುಂಕುಮವನ್ನು ಮೇಣದೊಂದಿಗೆ ಹಚ್ಚಿಕೊಳ್ಳುವದರಿಂದ ಜನಿಸುವ ಮಗುವಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ಮಕ್ಕಳಿಗೆ ಹಿರಿಯನ್ನು ಗೌರವದಿಂದ ಕಾಣುವಂತೆ ಸಂಸ್ಕಾರ ನೀಡಬೇಕೆಂದರು ಎಂದರು.
ಮನುಷ್ಯ ತನ್ನಷ್ಟಕ್ಕೆ ತಾನು ಸುಧಾರಣೆಯಾದರೆ ದೇಶ ಸುಧಾರಣೆಯಾಗುತ್ತದೆ, ಮಾತನಾಡದೆ ಆಚರಣೆಯಲ್ಲಿ ತರಬೇಕೆಂದರು. ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ಸಂತೃಪ್ತಿ ಜೀವನ ಸಾಧ್ಯ, ಯಜ್ಞ ಯಾಗಾದಿಗಳಿಂದ ಮಳೆ, ಬೆಳೆ ಚನ್ನಾಗಿ ಬರುತ್ತದೆ, ತಂದೆ-ತಾಯಿಗಳನ್ನು ತಿರಸ್ಕಾರ ಮಾಡಿ ಯಾತ್ರೆ ಮಾಡುವುದರಲ್ಲಿ ಪ್ರಯೋಜನ ಇಲ್ಲ, ದೇಶದಲ್ಲಿ ವೃದ್ದಾಶ್ರಮಗಳು ಹುಟ್ಟುತ್ತಿರುವುದು ಖೇಧಕರ ಸಂಗತಿ, ಯಜ್ಞ ಯಾಗಾದಿಗಳಿಂದ ಮಳೆ, ಬೆಳೆ ಚೆನ್ನಾಗಿ ಬರಲು ಸಾಧ್ಯ ಎಂದ ಅವರು, ಕುಲಗೋಡ ಗ್ರಾಮದಲ್ಲಿ ಪ್ರತಿ ವರ್ಷ ಸಾಯಿ ಜಾತ್ರೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುವುದನ್ನು ಶ್ಲಾಘನಿಸಿದರು.
ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜಿ ಮಾತನಾಡಿ, ಸಾಯಿ ಬಾಬಾ ಅವರು ತಿಳಿಸಿದ ದಶ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮೃದ್ಧಿ ಜೀವನ ನಡೆಸಲು ಸಾಧ್ಯ ಎಂದರು. ಯುವಕರು ದುಶ್ಚಟಗಳಿಂದ ದೂರವಿದ್ದು ಸಾಯಿಬಾಬಾ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು, ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದರು.
ಸಮಾರಂಭದಲ್ಲಿ ಕುಲಗೋಡ ಠಾಣೆಯಿಂದ ವರ್ಗಾವಣೆಗೊಂಡ ಪಿಎಸ್.ಆಯ್ ರಾಜು ಬೀಳಗಿ ಅವರನ್ನು ಸತ್ಕರಿಸಿ ಗೌರವಿಸಿದರು.
ಎ.ಎಸ್.ಆಯ್. ಆಯ್.ಎಮ್.ಬೇಪಾರಿ, ಆರ್.ಎಮ್.ಯಡಹಳ್ಳಿ ಪೌಂಢೇಶನ್ ಅಧ್ಯಕ್ಷ ಮತ್ತು ಜಾತ್ರಾ ಮಹೋತ್ಸವ ರೂವಾರಿ ನಾರಾಯಣ(ರಾಜು) ಯಡಹಳ್ಳಿ, ಬಸನಗೌಡ ಪಾಟೀಲ, ಸುಭಾಸ ವಂಟಗೋಡಿ, ರಾಮಣ್ಣಾ ಕುರಬಚನ್ನಾಳ, ಸುಧೀರ ವಂಟಗೋಡಿ, ತಮ್ಮಣ್ಣ ದೇವರ, ಭೀಮಶಿ ಸೋಮಕ್ಕನವರ, ಮಂಜು ಕೊಪ್ಪದ, ಶಿವಲಿಂಗ ಗೋಧಿಹೊಳಗಿ ಮತ್ತಿತರು ಇದ್ದರು.
ಮುಂಜಾನೆ ಸಾಯಿ ಮೂರ್ತಿಗೆ ವಿಶೇಷ ಅಭಿಷೇಕ, ವಿಶೇಷವಾಗಿ ಅಲಂಕೃತಗೋಳಿಸಿದ ಪೂಜೆ ಸಲ್ಲಿಸಿ, ದೇವಸ್ಥಾನದಲ್ಲಿ ಸುಣಧೋಳಿ ಮಠದ ವೈದಿಕರಿಂದ ಜರುಗಿದ ಚಂಡಿಕಾ ಹೋಮದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಅವರು ತಮ್ಮ ದಂಪತಿಯೊಡನೆ ಭಾಗಿಯಾಗಿದ್ದರು.
ವಿವಿಧ ಕಲಾ ತಂಡಗಳಿಂದ ಜರುಗಿದ ಸಾಂಸ್ಕೃತಿ ಕಾರ್ಯಕ್ರಮಗಳು ಜನಮನಸೆಳೆದವು. ಪೂರ್ಣಿಮಾ ಮಳಲಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ರಮೇಶ ಬುದ್ನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಿಕ್ಷಕ ಕೋಳಿ ನಿರೂಪಿಸಿದರು, ಶಂಕರ ಹಾದಿಮನಿ ವಂದಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ ಹಂಚಿಕೊಳ್ಳಿ)