ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹೆತ್ತ ತಾಯಿಯನ್ನು ಪ್ರೀತಿಸುವವನು, ಗೌರವಿಸುವವನು ತನ್ನ ಕುಟುಂಬ, ನಾಡು, ದೇಶವನ್ನು ಪ್ರೀತಿಸುತ್ತಾನೆ, ಗೌರವಿಸುತ್ತಾನೆ. ಇಂದು ಮಲ್ಲಿಕಾರ್ಜುನ ಜಗಜಂಪಿಯವರ ಸಮಾಜಮುಖಿ ಕಾರ್ಯಗಳಿಗೆ ಅವರ ಮಾತೃಪ್ರೇಮವೇ ಕಾರಣ. ಅವರು ತಮ್ಮ ತಾಯಿಯವರ ಹೆಸರಿನಲ್ಲಿ ವಿಮಲಾ ವೀ. ಜಗಜಂಪಿ ಪ್ರತಿಷ್ಠಾನ ಸಂಸ್ಥೆ ಹುಟ್ಟು ಹಾಕುವುದರ ಮೂಲಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು, ಸಾಧಕರನ್ನು ಸಮ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಕನ್ನಡ ಮುಖ್ಯಸ್ಥರಾದ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿಂದು ವಿಮಲ ವೀ. ಜಗಜಂಪಿ ಪ್ರತಿಷ್ಠಾನ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಗೌರವ ಸಮ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಸಾನಿಧ್ಯ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ದೇವರನ್ನು ಪೂಜಿಸುವಕ್ಕಿಂತ ತಮ್ಮ ಹೆತ್ತತಾಯಿಯನ್ನು ಪ್ರೀತಿಸಿ ಗೌರವಿಸುವುದು ಶ್ರೇಷ್ಠವಾದುದು. ಹಣವನ್ನು ಗಳಿಸಬೇಕು, ಉಳಿಸಬೇಕು ಹಾಗೂ ಸತ್ಕಾರ್ಯಕ್ಕೆ ಬಳಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ ಜಗಜಂಪಿ, ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುತ್ತಿರುವ, ಉದಯೋನ್ಮುಖ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವ ಪ್ರತಿಷ್ಠಾನದ ಕೆಲಸ ಮೆಚ್ಚುವಂತಹದ್ದು. ಬರುವ ದಿನಗಳಲ್ಲಿ ಇದು ಹೊರ ಜಿಲ್ಲೆ ರಾಜ್ಯ ಮಟ್ಟಕ್ಕೆ ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಜಗಜಂಪಿ, ಆರ್ಥಿಕವಾಗಿ ಬೆಳೆಯಬೇಕು ಸಾರ್ಥಕ ಬದುಕು ಬದುಕಬೇಕು. ನಾನು ತಳಮಟ್ಟದಿಂದ ಬೆಳೆದು ಬಂದವನು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವೆಂದು ತಾಯಿ ಹೇಳಿದ ನುಡಿಯನ್ನೇ ನಂಬಿಕೊಂಡು ಜೀವನ ಮಾಡಿದೆ. ಆ ನುಡಿಯೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ಮತೃದೇವೋ ಭವಃ, ಪಿತೃದೇವೋ ಭವ, ಆಚಾರ್ಯ ದೇವೋ ಭವಃ ನುಡಿಯನ್ನು ನಂಬಿಕೊಂಡು ಬಂದವನು ನಾನು ಎಂದು ಹೇಳಿದರು.
ಪತ್ರಕರ್ತರಾದ ಭೀಮಸೇನ ತೊರಗಲ್ಲ, ಚಿಕ್ಕೋಡಿಯ ಚಂದ್ರಕಾಂತ ಸಾಬಣೆ, ಸಾಹಿತಿ ಆರ್. ಎಸ್. ಚಾಪಗಾವಿ, ಸಂಕೇಶ್ವರದ ಲೇಖಕಿ ಹಮೀದಾಬಾನು ದೇಸಾಯಿ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರಾದ ಘಟಪ್ರಭಾದ ಬಸವರಾಜ ಹುದ್ದಾರ, ರಾಮದುರ್ಗದ ವರದಿಗಾರರಾದ ಚೆನ್ನಪ್ಪಾ ಮಾದರ (ಮಾಧ್ಯಮ). ಶೇಷಗಿರಿ ಮುತಾಲಿಕದೇಸಾಯಿ ಹಾಗೂ ಪ್ರೇಮಾ ತಾಶಿಲ್ದಾರ (ಸಾಹಿತ್ಯ ಶ್ರೀ), ಲೇಖಕಿ ರಾಮದುರ್ಗದ ಸುನಂದಾ ಎಸ್. ಭರಮನಾಯ್ಕರ್ ಹಾಗೂ ದಾಸ್ತಿಕೊಪ್ಪದ ಸಿದ್ಧರಾಮ ತಳವಾರ (ಯುವ ಪ್ರತಿಭಾ ಸಾಹಿತ್ಯ ಪ್ರಶಸ್ತಿ) ಹಾಗೂ ನರಗುಂದದ ಕು. ವೈದೃತಿ ನಾಗರಜ ಕೋರಿಶೆಟ್ಟಿ (ವಿಶೇಷ ಬಾಲಪ್ರತಿಭಾ ಪುರಸ್ಕಾರ) ನೀಡಿ ಗೌರವಿಸಲಾಯಿತು.
ಜಿ. ಎಸ್. ನಟೇಶ ಡಿ.ವಿ.ಜಿ. ’ಮಂಕುತಿಮ್ಮನ ಕಗ್ಗ’ ಕೃತಿಯ ಕುರಿತು ಮಾತನಾಡಿದರು. ಚಿದಾನಂದ ರೂಗೆ ಪ್ರಾರ್ಥಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಏಣಗಿ ಸುಭಾಷ ವಂದಿಸಿದರು.