

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಸ್ವಾರ್ಥ ಸೇವೆಯಿಂದ ಕೆಎಲ್ಇ ಸಂಸ್ಥೆಯನ್ನು ಹುಟ್ಟು ಹಾಕಿದ ಸಪ್ತರ್ಷಿಗಳು ಹಾಗೂ ಮೂವರು ದಾನಿಗಳಿಂದ ಇಂದು ಎಲ್ಲರಿಗೂ ಜ್ಞಾನ ದಾಸೋಹ ನೀಡಲು ಸಾದ್ಯವಾಗುತ್ತಿದೆ. ಯಾವುದೇ ಬೇಧ ಭಾವ ಇಲ್ಲದೇ ಅಕ್ಷರ ದಾಸೋಹದೊಂದಿಗೆ ಈ ಭಾಗದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡಲಾಗುತ್ತಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದಲ್ಲಿ ಸಂಸ್ಥೆಯು ಅನೇಕ ಪ್ರಥಮಗಳಿಗೆ ನಾಂದಿ ಹಾಡಿದೆ ಎಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಕೆಎಲ್ಇ ಸಂಸ್ಥೆಯ ೧೦೮ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಚಿಕ್ಕದಾಗಿ ಪ್ರಾರಂಭವಾದ ಸಂಸ್ಥೆಯು ಇಂದು ೩೦೦ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಅದಕ್ಕೆಲ್ಲ ಪ್ರೇರಕ ಶಕ್ತಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಕಾರ್ಯದಕ್ಷತೆ ಎಂದ ಅವರು, ಸಂಸ್ಥೆಯ ಸಪ್ತರ್ಷಿಗಳಾದ ಎಸ್ ಎಸ್ ಬಸವನಾಳ, ಎಮ್ ಆರ್ ಸಾಖ್ರೆ, ಬಿ ಬಿ ಮಮದಾಪೂರ, ಹೆಚ್ ಎಪ್ ಕಟ್ಟಿಮನಿ, ಪಿ ಆರ್ ಚಿಕ್ಕೋಡಿ, ಬಿ ಎಸ್ ಹಂಚಿನಾಳ, ವಿ ವಿ ಪಾಟೀಲ ಅವರ ಸಾಮಾಜಿಕ ಚಿಂತನೆಗಳಿಂದ ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು.
ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ರಾಜಶೇಖರ ಸೋಮನಟ್ಟಿ, ಡಾ. ಬಸವರಾಜ ಬಿಜ್ಜರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ