Belagavi NewsBelgaum NewsEducationKannada NewsKarnataka NewsLatestNational

ಸಮಾಜದ ಒಳಿತಿಗಾಗಿ ಕೆಎಲ್ಇ ಸಂಸ್ಥೆಯ ಕಾರ್ಯ ಶ್ಲಾಘನೀಯ – ಉಪರಾಷ್ಟ್ರಪತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನ್ಯಾಯ, ಸಮಾನತೆ, ಪಾರದರ್ಶಕತೆ, ಪ್ರಾಮಾಣಿಕತೆ  ಮತ್ತು ತ್ಯಾಗದ  ಮಾರ್ಗದರ್ಶಿ ತತ್ವಾದರ್ಶಗಳ  ಮೇಲೆ ಸಮಾಜವನ್ನು  ನಿರ್ಮಿಸಿದ ಕೆಎಲ್ಇ ಸಂಸ್ಥೆಯ ಸಪ್ತರ್ಶಿಗಳ ಕಾರ್ಯ ಇಂದು ದೇಶದ ಪ್ರಗತಿಯಲ್ಲಿ ಕಂಡು ಬರುತ್ತಿದೆ. ನಂಬಲಾಸಾಧ್ಯವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ಕಲ್ಪಿಸಿರುವದು ಅತ್ಯಂತ ಶ್ಲಾಘನೀಯ. ಅದರಂತೆ ಗುಣಮಟ್ಟದ  ವೈದ್ಯಕೀಯ ಶಿಕ್ಷಣವನ್ನು ನೀಡುವಲ್ಲಿ ಬೋಧಕರ ಕೊಡುಗೆ ಅತ್ಯಂತ ಗಮನಾರ್ಹವಾಗಿದೆ. ಈ ಮಹಾನ್ ಸಂಸ್ಥೆ  ನಿರ್ಮಿಸುವಲ್ಲಿ ಸಂಸ್ಥಾಪಕರ ತ್ಯಾಗ ಸ್ಮರಣೀಯ. ಸಮಾಜದ ಒಳಿತಿಗಾಗಿ ಆಡಳಿತ ಮಂಡಳಿಯು ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ ಹೇಳಿದರು.

ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ)ನ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ 14ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಪದವಿ ಪಡೆಯುವದು ಕಠಿಣ ಪರಿಶ್ರಮದ ಫಲವಾಗಿದ್ದು, ಜೀವನದಲ್ಲಿ ಎಂದೂ  ಮರೆಯಲಾಗದ ಪ್ರಮುಖ ಮೈಲಿಗಲ್ಲು. ಯುವ ಪದವೀಧರರು  ಮಾನವೀಯತೆಯ ಪ್ರತಿಬಿಂಬವಾಗಿ  ಸೇವೆ ಸಲ್ಲಿಸುತ್ತ ದೇಶದ  ಬೆಳವಣಿಗೆ ಮತ್ತು ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಅದೊಂದು ಜೀವನದ  ಪ್ರಮುಖ ತಿರುವು ಆಗಬೇಕೆಂದು  ಸಲಹೆ  ನೀಡಿದರು.

ಕಲಿಕೆಯು ಜೀವಿತಾವಧಿಯ  ಪ್ರಮುಖ ಘಟ್ಟವಾಗಿದ್ದು, ಕಲಿಕೆಯು ಏಕೈಕ ಸ್ಥಿರ ಒಡನಾಡಿಯಾಗಿದೆ ಎಂದ ಅವರು, 1.3 ಶತಕೋಟಿ ಜನಸಂಖ್ಯೆಯ ಈ ದೇಶಕ್ಕೆ ನುರಿತ ತಜ್ಞವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಅಗತ್ಯತೆ ಸಾಕಷ್ಟು ಇದೆ. ಈಗಿರುವ ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಆರೈಕೆ ಮಾಡಲು ಕಡಿಮೆಯಾಗುತ್ತಿದ್ದಾರೆ ಎಂದು ವಿವರಿಸಿದರು.

ದೇಶದ 5000 ವರ್ಷಗಳಷ್ಟು ಹಳೆಯ ನಾಗರಿಕತೆಯು ಆನುವಂಶಿಕವಾಗಿ ಶಕ್ತಿಯನ್ನು ಪಡೆದುಕೊಂಡಿದೆ. ವಿಶ್ವದಲ್ಲಿಯೇ ಅತ್ಯಂತ  ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಮುಂಬರುವ 2047ರಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಲಿದೆ.  ವಿಶ್ವದಾದ್ಯಂತ ಭಾರತದ ಯುವಕರ ಧ್ವನಿಗಳು ಕೇಳಿಬರುತ್ತಿವೆ. ಯುವಕರು ಭಾರತದ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರವಹಿಸುತ್ತ, ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಭಾರತವು ಅತ್ಯಧಿಕ ಸಂಖ್ಯೆಯ ಸ್ಟಾರ್ಟ್‌ಅಪ್‌ಗಳು, ಯುನಿಕಾರ್ನ್‌ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಯುವ ವೈದ್ಯರಿಗೆ ತಮ್ಮ ನಿಜವಾದ ಸಾಮರ್ಥ್ಯವನ್ನು ಹೊರಹಾಕಿ, ಕನಸುಗಳನ್ನು ಈಡೇರಿಸಿಕೊಳ್ಳಬೇಕು.  ವೈದ್ಯಕೀಯ ಸೇವೆಯ ಪ್ರಾಥಮಿಕ ಧ್ಯೇಯವಾಕ್ಯ ಹಣವಲ್ಲ ಅದೊಂದು ಸೇವೆ ಎಂದು ಪರಿಗಣಿಸಿ ಸೇವೆ ನೀಡಿ. ಅದರಲ್ಲಿಯೂ ಮುಖ್ಯವಾಗಿ ಹಳ್ಳಿಗರ ಸೇವೆಯಲ್ಲಿ ತೊಡಗಿ ಎಂದ ಅವರು, ಶಿಕ್ಷಣದಿಂದ ಮಾತ್ರ ದೇಶವು ಸಾಮಾಜಿಕ-ಆರ್ಥಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಬಹುದು ಎಂಬುದನ್ನು ಅರಿತ ಕೆಎಲ್‌ಇ ಸಂಸ್ಥೆಯು ಆ ಕನಸನ್ನು ನನಸು ಮಾಡುತ್ತಿದೆ ಎಂದು ಹೇಳಿದರು.

ಕಾಹೆರನ ಪ್ರಥಮ ಗೌರವ ಡಾಕ್ಟರೇಟ್ ಪದವಿಯನ್ನು ಅಮೇರಿಕೆಯ ಫೆಲಡೆಲ್ಪಿಯಾದ ಥಾಮಸ್ ಝೆಫರಸನ್ ವಿಶ್ವವಿದ್ಯಾಲಯದ ವೈಸ್ ಪ್ರೊವೊಸ್ಟ್ ಡಾ. ರಿಚರ್ಡ್ ಜಾಕೋಬ್ ಡರ್ಮನ್ ಅವರಿಗೆ ನೀಡಲಾಯಿತು. ಪ್ರಸವಾನಂತರದ ರಕ್ತಸ್ರಾವಕ್ಕೆ ನವೀನ ಚಿಕಿತ್ಸೆಗಳ ಮೂಲಕ ತಾಯಿಯ ಮರಣವನ್ನು ಗಣನೀಯವಾಗಿ ಕಡಿಮೆ ಮಾಡುವ, ತಾಯಿ-ಮಗುವಿನ ಆರೋಗ್ಯ ರಕ್ಷಣೆಯಲ್ಲಿನ ಸಂಶೋಧನೆ ಕೈಕೊಂಡಿದ್ದಾರೆ.  ರಿಸರ್ಚ್ ಫೌಂಡೇಶನ್‌ನ ನಿರ್ದೇಶಕರಾದ ಡಾ.ಶಿವಪ್ರಸಾದ್ ಗೌಡರ್ ಅವರು ಜಾಗತಿಕ ಆರೋಗ್ಯ ಕಾರ್ಯಗಳಿಗೆ ಡಾ.ಡರ್ಮನ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.

ಪದವಿಗಳು ಮತ್ತು ಚಿನ್ನದ ಪದಕಗಳು:

 45 ಚಿನ್ನದ ಪದಕಗಳು, 30 ಪಿಎಚ್‌ಡಿಗಳು, 13 ಸ್ನಾತಕೋತ್ತರ (DM/M.ch), 644 ಸ್ನಾತಕೋತ್ತರ ಪದವೀಧರರು, 1023 ಪದವೀಧರರು, 9 ಪಿಜಿ ಡಿಪ್ಲೋಮಾಗಳನ್ನು ಒಳಗೊಂಡಂತೆ ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ 1739 ಪದವಿಗಳನ್ನು ನೀಡಲಾಯಿತು. , 4 ಡಿಪ್ಲೊಮಾಗಳು, 5 ಫೆಲೋಶಿಪ್‌ಗಳು ಮತ್ತು 11 ಪ್ರಮಾಣಪತ್ರ ಕೋರ್ಸ್‌ಗಳು.

ಕಾಹೆರ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಗೌರವಾನ್ವಿತ  ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟ್, ಶ್ರೀಮತಿ ಸುದೇಶ್ ಜಗದೀಪ್  ಧನಕರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪರೀಕ್ಷಾ ನಿಯಂತ್ರಕರಾದ ಡಾ. ಚಂದ್ರಾ ಮೆಟಗುಡ ಅವರು ಕಾಹೆರನ ವಿಧ್ಯುಕ್ತ ಮೆರವಣಿಗೆಯನ್ನು ಮುನ್ನಡೆಸಿದರು.

ಉಪಕುಲಪತಿ ಡಾ.ನಿತಿನ್ ಗಂಗಾನೆ ಅವರು ವಾರ್ಷಿಕ ವರದಿ ಮಂಡಿಸಿದರು. ಘಟಿಕೋತ್ಸವದ ನೆನಪಿಗಾಗಿ ಜೆಎನ್ಎಂಸಿ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.

45 ಚಿನ್ನದ ಪದಕಗಳ ಪೈಕಿ 35 ಚಿನ್ನದ ಪದಕಗಳನ್ನು ವಿದ್ಯಾರ್ಥಿನಿಯರೇ  ಗಿಟ್ಟಿಸಿಕೊಂಡಿರುವದು ವೈದ್ಯಕೀಯ ಶಿಕ್ಷಣದಲ್ಲಿ  ಮಹಿಳೆಯರ ಪ್ರಾಬಲ್ಯವನ್ನು  ಮತ್ತೊಮ್ಮೆ ಸಾಬೀತುಪಡಿಸಿದೆ.

1. ಕೊಲ್ಹಾಪೂರದ ಕೈಮಗ್ಗ ಉದ್ಯಮಿಯ  ಸೇಜಲ್ ಶಂಕರ್ ಕಟಾರಿಯಾ ಅವಳು ಮಗಳಾದ  ಆಯುರ್ವೇದನ ಬಿಎಎಂಎಸ್ ನಲ್ಲಿ ನಾಲ್ಕು  ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ನಂತರ ಮಾತನಾಡಿದ ಅವಳು, ಬಿಎಂ ಕಂಕಣವಾಡಿ  ಆಯುರ್ವೇದ ಮಹಾವಿದ್ಯಾಲಯದಲ್ಲಿ  ಅತ್ಯುತ್ತಮ  ಸಹಾಯಕ ಬೋಧಕ ಸಿಬ್ಬಂದಿಯಿಂದ ಸಾಕಷ್ಟು ಸಹಕಾರ ನೀಡಿದರು. ಅವರ ಪ್ರೋತ್ಸಾಹ  ಹಾಗೂ ತಂದೆ ತಾಯಿಯ ಪ್ರೀತಿಗೆ ಇದು ಸಾಧ್ಯವಾಯಿತು. ಮಹಾವಿದ್ಯಾಲಯದ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

2. ಓರಿಸ್ಸಾ ಭುವನೇಶ್ವರದ ಎಂಬಿಬಿಎಸ್ ನಲ್ಲಿ ಅತ್ಯಧಿಕ ಅಂಕ ಗಳಿಸಿದ ರುತ್ವಿಕ್ ಸಾಹೂ ಮಾತನಾಡಿ,  ವೈದ್ಯಕೀಯ  ಮಹಾವಿದ್ಯಾಲಯವು  ಅತ್ಯಾಧುನಿಕ  ವೈದ್ಯಕೀಯ ಸಲಕರಣೆಗಳೊಂದಿಗೆ ಅತ್ಯುತ್ತಮ ಬೋಧನಾ ಸಿಬ್ಬಂದಿಯನ್ನು ಹೊಂದಿದೆ ಎಂದು ಹೇಳಿದರು.

3. ನವದೆಹಲಿಯ ಫ್ಯಾಶನ ಆಭರಣಗಳ ವ್ಯಾಪಾರಿಯ ಮಗಳಾದ ವೃಂದಾ ಗುಪ್ತಾ ಎಂಬಿಬಿಎಸ್ ನಲ್ಲಿ 2 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಜೆಎನ್ ವೈದ್ಯಕೀಯ ಕಾಲೇಜು ಸಹಾಯಕ ಸಿಬ್ಬಂದಿ, ಉತ್ತಮ ಗ್ರಂಥಾಲಯ, ಲ್ಯಾಬ್ ಸೌಲಭ್ಯಗಳನ್ನು ಹೊಂದಿದೆ. ಮೆಡಿಕಲ್ ಕಾಲೇಜಿನಲ್ಲಿನ ಬೋಧನೆ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

Related Articles

Back to top button