
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಯುರ್ವೇದದ ಸಿದ್ಧ ವೈದ್ಯರುಗಳು ಬಳಸುತ್ತ ಬಂದಿರುವ ಕಬಾಸುರ ಕುಡಿನೀರ ಎಂಬ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಆಯುರ್ವೇದಿಕ್ ಚೂರ್ಣವನ್ನು ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಬೆಳಗಾವಿಯಲ್ಲಿ ವಿತರಿಸಲಾಯಿತು.
ಮಾರುಕಟ್ಟೆಯಲ್ಲಿ ಲಾಕ್ಡೌನ್ ಸಂದರ್ಭದಲ್ಲೂ ತರಕಾರಿ ವಿತರಿಸಿದ, ಈಗಲೂ ಜನ ಸಂಪರ್ಕದಲ್ಲಿ ತರಕಾರಿ ಮಾರುತ್ತಿರುವ ಶ್ರಮಿಕ ವರ್ಗದ ಕುಟುಂಬಗಳಿಗೆ ಚೂರ್ಣ ವಿತರಿಸಿ, ಆರೋಗ್ಯದ ಕುರಿತು ತಿಳಿವಳಿಕೆ ಮೂಡಿಸಲಾಯಿತು.

ಶ್ರೀ ಮಹಾ ಪಂಚಮುಖ ಪ್ರತ್ಯಾಂಗಿರ ವೇದ ಧರ್ಮ ಕ್ಷೇತ್ರದ ಗುರುಗಳು ಸಿದ್ದಪಡಿಸಿರುವ ಈ ಚೂರ್ಣ 15 ಗಿಡಮೂಲಿಕೆಗಳನ್ನು ಒಳಗೊಂಡಿದ್ದು ಅನಾದಿ ಕಾಲದಿಂದಲೂ ವೈರಸ್ ಹಾಗೂ ಬ್ಯಾಕ್ಟೀರಿಯಾದಂತಹ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.
ಇಂತಹ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಜನೋಪಯೋಗಿ ಔಷಧಗಳು ಪ್ರತಿಯೊಬ್ಬರಿಗೂ ಸಿಗಬೇಕು, ಎಲ್ಲರ ಆರೋಗ್ಯ ವೃದ್ದಿಯಾಗಬೇಕು ಎಂಬ ಹಿತ ದೃಷ್ಟಿಯಿಂದ ಇಂತಹ ಸುಮಾರು 20 ಸಾವಿರ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ. ಒಂದು ಪ್ಯಾಕೆಟ್ 8 ರಿಂದ 10 ಜನರಿಗೆ ಸಾಕಾಗಬಲ್ಲದು ಎಂದು ಫೌಡೇಶನ್ ಅಧ್ಯಕ್ಷ ಮಹಾಂತೇಶ ವಕ್ಕುಂದ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ