Kannada NewsLatest

ಅಖಂಡ ಕರ್ನಾಟಕ ಕನಸು ಕಂಡ ಮೊದಲಿಗರೆಂದರೆ ಉತ್ತರ ಕರ್ನಾಟಕದವರು: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ; ಚಿಂಚಣಿ : ಅಖಂಡ ಕರ್ನಾಟಕ ಕನಸು ಕಂಡ ಮೊದಲಿಗರೆಂದರೆ ಉತ್ತರ ಕರ್ನಾಟಕದವರು. ಪೇಶ್ವಗಳ ಹಾಗೂ ಮರಾಠಿಗರ ಆಡಳಿತದಲ್ಲಿ ಕನ್ನಡ ತನ್ನ ಸ್ಥಾನಮಾನ ಕಳೆದುಕೊಂಡು ಮೂಲೆಗುಂಪಾದ ಸಂದರ್ಭದಲ್ಲಿ ಕನ್ನಡದ ದೀಪವನ್ನು ನಾವು ಹಚ್ಚ ಬಲ್ಲೆವು ಎಂದು ಹಾಡಿದ್ದಲ್ಲದೆ ಅಖಂಡ ಕರ್ನಾಟಕವನ್ನು ಸಾಧಿಸಿ ತೋರಿದ ಉತ್ತರ ಕರ್ನಾಟಕದ ಜನತೆಯ ಛಲ ಅಭಿಮಾನ ಹೋರಾಟಗಳು ಫಲ ನೀಡಿದವು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ನುಡಿದರು.

ಅವರು ಚಿಕ್ಕೋಡಿ ಸಮೀಪದ ಚಿಂಚಣಿ ಶ್ರೀಮಠದಲ್ಲಿ ಅದ್ದೂರಿ ಕನ್ನಡಜಾತ್ರೆಯಲ್ಲಿ ಮಾತನಾಡಿದರು. ಭಾಷಾವಾರು ಪ್ರಾಂತ್ಯಗಳ ರಚನೆಗೆ ಮುನ್ನ ಕರ್ನಾಟಕ ರಾಜ್ಯ ಎಂಬುದೇ ಇರಲಿಲ್ಲ. ಅದನ್ನು ಸಾಕಾರಗೊಳಿಸಿದವರು ಉತ್ತರ ಕರ್ನಾಟಕದ ಜನತೆ. ಅಂಕಲಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನವು ನಮ್ಮ ತಂದೆಯವರಾದ ಸ್ವಾತಂತ್ರ‍್ಯ ಸೇನಾನಿ ಬಸಪ್ರಭುಕೋರೆ ಅವರ ನೇತೃತ್ವದಲ್ಲಿ ಜರಗಿದ್ದನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ 1924ರಲ್ಲಿ ಮಹಾತ್ಮಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಸಿತು. ಆ ಅಧಿವೇಶನದಲ್ಲಿಯೇ ಹುಯ್ಲಗೋಳ್ ನಾರಾಯಣರಾಯರ ಉದಯವಾಗಲಿ ಚೆಲುವ ಕನ್ನಡ ನಾಡು ಎಂಬ ಕವನವನ್ನುಖ್ಯಾತಗಾಯಕಿ ಗಂಗೂಬಾಯಿ ಹಣಗಲ್‌ ಅವರು ಹಾಡಿದರು.

ಸ್ವಾತಂತ್ರ ಭಾರತದ ನಂತರ 1956 ರಂದು ರಾಜ್ಯ ಪುನರ್ ವಿಂಗಡನ ಸಮಿತಿ ರಚನೆಯಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಆಯಿತು. 1 ನವೆಂಬರ್ 1956 ರಂದು ಮೈಸೂರುರಾಜ್ಯ ಅಸ್ತಿತ್ವಕ್ಕೆ ಬಂದಿತ್ತು.

ಇಂದು ಅಖಂಡ ಕರ್ನಾಟಕ ಅಸ್ತಿತ್ವದಲ್ಲಿ ಇದ್ದರೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದು ಸುಳ್ಳಲ್ಲ. ಹಲವಾರು ಪ್ರಮುಖ ವರದಿಗಳು ಬಂದರೂ ಏನೂ ಪ್ರಯೋಜನವಾಗಿಲ್ಲ. ಸರಕಾರಎಂಬುದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಂತಿದೆ. ಅಭಿವೃದ್ಧಿ ಕೆಲಸ ಹೆಸರಿಗೆ ಮಾತ್ರ ಮಾಡಿದೆ ಅಷ್ಟೇ. ಬೆಳಗಾವಿಯ ಸುವರ್ಣ ವಿಧಾನಸೌಧ ಇಂದು ನಿರ್ಮಾಣವಾಗಿ ದಶಕಗಳೇ ಕಳೆದಿದ್ದರೂ ಪೂರ್ಣ ಅವಧಿಯ ಅಧಿವೇಶನಗಳು ಇಲ್ಲಿಜರುಗಿಲ್ಲ. ಪೂರ್ಣ ಪ್ರಮಾಣದ ಅಧಿವೇಶನಗಳು ಜರಗಬೇಕಾದರೆ ಇಲ್ಲಿ ಶಾಸಕರ ಭವನಗಳು ನಿರ್ಮಾಣಗೊಳ್ಳಬೇಕು. ಸಿಬ್ಬಂದಿ ಎಲ್ಲರಿಗೂ ವಸತಿ ಕಟ್ಟಡಗಳು ನಿರ್ಮಾಣಗೊಳ್ಳಬೇಕು. ಉತ್ತರ ಕರ್ನಾಟಕದ ಜಲಂತ ಸಮಸ್ಯೆಗಳು ಬಗೆಹರಿದಾಗ ಮಾತ್ರ ಅಖಂಡ ಕರ್ನಾಟಕದ ಆಶಯ ಪೂರ್ಣಗೊಳ್ಳುವುದರಲ್ಲಿ ಸಂದೇಹವಿಲ್ಲ. ಇಂದು ಕನ್ನಡ ಜೀವಂತವಾಗಿ ಉಳಿದಿದ್ದರೆ ಅದು ಬೆಳಗಾವಿ ಎಂತಹಗಡಿ ಪ್ರದೇಶದ ಹಳ್ಳಿಗಳಲ್ಲಿ ಎಂದು ಹೇಳಿದರು.

ಈ ಉತ್ಸವಕ್ಕೆ ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟದೊಡ್ಡಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸುದೀರ್ಘವಾದ ಪರಂಪರೆ ಇದೆ. ಮೊಬೈಲಗೀಳನ್ನು ಬಿಟ್ಟು ಕನ್ನಡ ಭಾಷೆ ಸಂಸ್ಕೃತಿಯನ್ನು ಪ್ರೀತಿಸಬೇಕು. ಕನ್ನಡ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದರು. ಕನ್ನಡ ಸೇವೆಯನ್ನುಚಿಂಚಣಿಯ ಶ್ರೀಮಠವು ಗಡಿಭಾಗದಲ್ಲಿ ಅದ್ಭುತವಾಗಿ ನೆರವೇರಿಸುತ್ತಿದೆ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಕಾರವು ಸರಿಪಡಿಸಬೇಕೆಂದು ತಿಳಿಸಿದರು.

ಪ್ರಾ.ಬಿ.ಎಸ್.ಗವಿಮಠ ಅವರು ಮಾತನಾಡಿ “ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ; ಭಾವನೆ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ” ಎಂದು ಭಾವಿಸಿದವರು ಪ್ರಭಾಕರಕೋರೆ. ಅವರು ಬದುಕು ಸಾವುಗಳೆರಡಕ್ಕೂ ಸಾಕ್ಷಿಯಾದವರು. ಕೆಲವರು ಬದುಕಿದ್ದಾಗಲೇ ಸತ್ತಂತೆ ಬದುಕಿರುತ್ತಾರೆ. ಕೋರೆಯಂಥವರು ಸತ್ತ ಮೇಲೂ ಬದುಕಿ ಚಿರಂಜೀವಿಯಾಗುತ್ತಾರೆ. ಕನ್ನಡದ ನೆಲದಲ್ಲೇ ಅನಾಥವಾಗಿದ್ದ ಕನ್ನಡಿಗರು ತಲೆಎತ್ತಅಡ್ಡಾಡುವಂತೆ ಮಾಡಿದವರು ಡಾ.ಕೋರೆ ಬೆಳಗಾವಿ ಒಂದರಲ್ಲೇ ಅವರು 50ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಅದ್ಭುತವಾಗಿಕಟ್ಟಿ ತೋರಿದವರು ಎಂದು ಹೇಳಿದರು.

ಶ್ರೀಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಪ್ರತಿವರ್ಷವು ಶ್ರೀಮಠವು ಅತ್ಯಂತ ಅದ್ದೂರಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದೆ. ಹಾಗೂ ಅರ್ಥಪೂರ್ಣವಾದ ಗ್ರಂಥಗಳನ್ನು ಪ್ರಕಟಿಸಿ ಬಿಡುಗಡೆ ಮಾಡುತ್ತಾ ಬಂದಿದೆ. ಇಲ್ಲಿಯವರೆಗೆ 49 ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು ಶ್ರೀಮಠದ ಹಿರಿಮೆ. ಇದೊಂದುಕನ್ನಡದ ಹಬ್ಬ. ಕನ್ನಡದ ನಂದಾದೀಪ ಹೀಗೆ ಪ್ರಜ್ವಲಿಸಲಿ ಎಂದು ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆಚಿಕ್ಕೋಡಿಯ ಸಂಪಾದನಾ ಮಠದ ಪೂಜ್ಯ ಸಂಪಾದನಾ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು ಚಿಂಚಣಿ ಶ್ರೀಮಠ ಇದೇ ಸಂದರ್ಭದಲ್ಲಿ ಖ್ಯಾತ ಲೇಖಕ ಪ್ರಾ.ಬಿ.ಎಸ್.ಗವಿಮಠ ರಚಿಸಿದ ಡಾ.ಕೋರೆಯವರಅಮೃತ ಮಹೋತ್ಸವದ ಸವಿನೆನಪಿಗಾಗಿ ‘ಕನ್ನಡರತ್ನ’, ಖ್ಯಾತ ಲೇಖಕ ಶಿರೀಷ್ ಜೋಶಿ ರಚಿತ ‘ನನ್ನ ಸಂಗೀತ ವ್ಯಾಸಂಗ’ (ಅನುವಾದಿತಕೃತಿ) ಗ್ರಂಥವನ್ನುಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶಕವಟಗಿಮಠ ಲೋಕಾರ್ಪಣೆಗೊಳಿಸಿದರು. ಗ್ರಂಥ ದಾನಿಗಳಾದ ಶ್ರೀ ಜಗದೀಶಕವಟಗಿಮಠ, ಶ್ರೀ ಸಾತಪ್ಪ ಕಾಮನೆಚಿಂಚಣಿಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಅಪ್ಪಾಜಿಗೋಳ, ಡಾ.ಬಸವರಾಜಜಗಜಂಪಿ, ಡಾ.ಎಫ್.ವ್ಹಿ.ಮಾನ್ವಿ, ಡಾ.ಪಿ.ಜಿ.ಕೆಂಪಣ್ಣವರ, ಡಾ.ಮಲ್ಲಿಕಾರ್ಜುನ ಹೂಗಾರ, ಶ್ರೀ ಈಶ್ವರ ಸ್ವಾಮಿ, ಡಾ.ಮಹೇಶ ಗುರನಗೌಡರಉಪಸ್ಥಿತರಿದ್ದರು.

ಯಕ್ಸಂಬಾ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button