Kannada NewsLatest

ಕ್ಷಯರೋಗ ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಿ- ಡಾ.ಬೊಮ್ಮನಹಳ್ಳಿ

ಹಾವು ಕಡಿತ, ತಕ್ಷಣ ಚಿಕಿತ್ಸೆ- ಬೀದಿನಾಯಿ ನಿಯಂತ್ರಣಕ್ಕೆ ಸೂಚನೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕ್ಷಯರೋಗದಿಂದ ಬಳಲುತ್ತಿರುವ ಜನರಿಗೆ ಸೂಕ್ತ ಉಚಿತ ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ ಮೂಲಕ ರೋಗ ನಿವಾರಣೆಗೆ ಒತ್ತು ನೀಡಬೇಕು. ಅದೇ ರೀತಿ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜು.೧೭) ನಡೆದ ಆರೋಗ್ಯ ಇಲಾಖೆಯ ವಿವಿಧ ವಿಷಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯರೋಗ ಬಾರದಂತೆ ತಡೆಯಲು ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಅದೇ ರೀತಿ ರೋಗ ಗುಣಮುಖರಾಗಲು ಆರು ತಿಂಗಳು ನಿರಂತರ ಚಿಕಿತ್ಸೆ ಮುಂದುವರಿಸಬೇಕಿರುವುದರಿಂದ ಸೋಂಕಿತರ ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಅಪೌಷ್ಟಿಕತೆ, ಎಚ್‌ಐವಿ ಹಾಗೂ ಮಧುಮೇಹ ಸಮಸ್ಯೆಗಳಿಂದಾಗಿ ಕ್ಷಯರೋಗ ನಿವಾರಣೆಗೆ ದೊಡ್ಡ ಸವಾಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ವಿವರಿಸಿದರು.

ತಂಬಾಕು ನಿಯಂತ್ರಣಕ್ಕೆ ಸೂಚನೆ :

ನಿಯಮಾವಳಿ ಉಲ್ಲಂಘಿಸಿ ಅನಧಿಕೃತವಾಗಿ ತಂಬಾಕು ಮಾರಾಟ ಮಾಡುವುದನ್ನು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಶಾಲಾ ಆವರಣದ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಶಾಲೆಯಲ್ಲಿ ಯಾವುದೇ ಖಾಸಗಿ ಕಂಪನಿಯು ಯಾವುದೇ ಬಗೆಯ ತಿನಿಸುಗಳನ್ನು ಉಚಿತವಾಗಿ ಹಂಚಲು ಅವಕಾಶ ನೀಡಬಾರದು ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ತಂಬಾಕು ಮಾರಾಟ ಕಂಡುಬಂದರೆ ಪೊಲೀಸ್ ನೆರವಿನೊಂದಿಗೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಆವರಣದಲ್ಲಿ ತಂಬಾಕು ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ಅದೇ ರೀತಿ ನಗರದಲ್ಲಿ ಹೋಟೆಲ್ ಮತ್ತಿತರ ಮಳಿಗೆಗಳಿಗೆ ಲೈಸೆನ್ಸ್ ನೀಡುವಾಗ ಸ್ಮೋಕಿಂಗ್ ಝೋನ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯ ಮಾಡುವಂತೆ ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.
ತಂಬಾಕು ಕೊಟ್ಪಾ-೨೦೦೩ ಕಾಯ್ದೆ ಪರಿಣಾಮಕಾರಿ ಜಾರಿ; ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.
ಅದೇ ರೀತಿ ಸಮೂಹ ಮಾಧ್ಯಮಗಳ ಮೂಲಕ ಹೆಚ್ಚು ಹೆಚ್ಚು ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ತಂಬಾಕು ಸೇವನೆಯಿಂದ ಉಲ್ಬಣಿಸುವ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿವರ್ಷ ಅಂದಾಜು ಹತ್ತು ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ಡಾ.ತುಕ್ಕಾರ ಸಭೆಯಲ್ಲಿ ವಿವರಿಸಿದರು.

ಮಂಗನ ಕಾಯಿಲೆ(ಕೆ.ಎಫ್.ಡಿ) :

ಮಂಗನ ಕಾಯಿಲೆ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಾಯಿಲೆ ನಿವಾರಣೆಗೆ ಅಗತ್ಯವಾದ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಗೋವಾ ರಾಜ್ಯದಲ್ಲಿ ಕಂಡುಬಂದಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಖಾನಾಪುರ ಸೇರಿದಂತೆ ಗಡಿ ತಾಲ್ಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರನ ಕೈಗೊಳ್ಳಲು ತಿಳಿಸಿದರು.

ರೋಟಾ ವೈರಸ್ – ಲಸಿಕಾ ಅಭಿಯಾನಕ್ಕೆ ಸೂಚನೆ:Make the Tuberculosis Campaign Successful says Dr. Bommanahalli

ರೋಟಾ ವೈರಸ್ ನಿಂದ ಉಲ್ಬಣಿಸುವ ಭೇದಿ ನಿಯಂತ್ರಣಕ್ಕೆ ಲಸಿಕೆ ಅಭಿಯಾನವನ್ನು ಜಿಲ್ಲೆಯಾದ್ಯಂತ ಕೈಗೊಳ್ಳಬೇಕು ಎಂದು ಡಾ.ಬೊಮ್ಮನಹಳ್ಳಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಆಗಸ್ಟ್ ಎರಡನೇ ವಾರದಿಂದ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಾ.ಐ.ಎಚ್.ಗಡಾದ ವಿವರಿಸಿದರು.
ಕೊಳಚೆ ಪ್ರದೇಶಗಳಲ್ಲಿ ಹಾಗೂ ದುರ್ಬಲ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ರೋಟಾ ವೈರಸ್ ನಿಯಂತ್ರಣ ಲಸಿಕೆಯ ಬಗ್ಗೆ ಅರಿವು ಮೂಡಿಸಬೇಕು. ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಡೆಂಗಿ ನಿಯಂತ್ರಣ ಕ್ರಮಕ್ಕೆ ಸೂಚನೆ:

ಡೆಂಗಿ ಜ್ವರ ಮತ್ತು ಚಿಕುನ್ ಗುನ್ಯಾ ನಿಯಂತ್ರಣಕ್ಕೆ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಅಂಗನವಾಡಿ ಮತ್ತು ಶಾಲೆಗಳಲ್ಲಿ ಯಾವುದೇ ಮಗು ಮೂರು ದಿನಗಳಿಗಿಂತ ಹೆಚ್ಚು ಗೈರುಹಾಜರಾದರೆ ಸಂಬಂಧಿಸಿದ ಸ್ಥಳೀಯ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರು ಸಂಗ್ರಹಗೊಳ್ಳುವ ಪ್ರದೇಶಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವುದರಿಂದ ಮಹಾನಗರ ಪಾಲಿಕೆ ನೀರು ಸಂಗ್ರಹವಾಗುವ ಸ್ಥಳಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನೀರು ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗುತ್ತಿದ್ದು, ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್.ಪಲ್ಲೇದ ತಿಳಿಸಿದರು.
ಸಂಶಯಾಸ್ಪದ ಡೆಂಗಿ ಪ್ರಕರಣದಲ್ಲಿ ಕಳೆದ ತಿಂಗಳು ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದು ಇನ್ನೂ ದೃಢಪಟ್ಟಿರುವುದಿಲ್ಲ. ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ವಿವರಿಸಿದರು. ಯಾವುದೇ ಕಾಲರಾ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿಲ್ಲ ಎಂದು ಡಾ.ತುಕ್ಕಾರ್ ತಿಳಿಸಿದರು.

ಬೀದಿನಾಯಿ ನಿಯಂತ್ರಣಕ್ಕೆ ಸೂಚನೆ:

ಮಕ್ಕಳ ಮೇಲೆ ಬೀದಿನಾಯಿಗಳ ದಾಳಿ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಹಾವು ಕಡಿತ; ಗಾಬರಿ ಬೇಡ- ಜಿಲ್ಲಾಧಿಕಾರಿ:

ಹಾವು ಕಡಿತಕ್ಕೆ ಜಿಲ್ಲಾಸ್ಪತ್ರೆ ಸೇರಿದಂತೆ ಸ್ಥಳೀಯ ಮಟ್ಟದಲ್ಲಿಯೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ಲಭ್ಯ ಇರುವುದರಿಂದ ಸಾರ್ವಜನಿಕರು ಗಾಬರಿಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಒಂದು ವೇಳೆ ಸ್ಥಳೀಯ ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಕೂಡಲೇ ೧೦೮ ಆಂಬ್ಯುಲೆನ್ಸ್ ಮೂಲಕ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚುಚ್ಚುಮದ್ದು ಮತ್ತು ಔಷಧಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ಜುಲೈವರೆಗೆ ಒಟ್ಟಾರೆ ೨೦೭ ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು ಇಂತಹ ಪ್ರಕರ ವರದಿಯಾದಾಗ ಸಕಾಲಕ್ಕೆ ಚಿಕಿತ್ಸೆ ನೀಡಬೇಕು ಎಂದರು.

ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ:

ಸಾರ್ವಜನಿಕ ಆರೋಗ್ಯ ರಕ್ಷಣೆ, ಸ್ವಚ್ಛತೆ ಮತ್ತಿತರ ವಿಷಯಗಳನ್ನು ನಿರ್ಲಕ್ಷಿಸುವ ತಾಲ್ಲೂಕು ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಬೊಮ್ಮನಹಳ್ಳಿ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ, ತಹಶಿಲ್ದಾರ ಮಂಜುಳಾ ನಾಯಕ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಂಬಾಕು ನಿಯಂತ್ರಣಕ್ಕೆ “ಸ್ಟಾಪ್ ಟೊಬ್ಯಾಕೋ ಆಪ್

ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ sಣoಠಿಣobಚಿಛಿಛಿo ಮೊಬೈಲ್ ಆಪ್ ಅನ್ನು ಬೆಳಗಾವಿ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಕೋಟ್ಪಾ ಕಾಯಿದೆಯ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಛಾಯಾಚಿತ್ರಗಳನ್ನು ತೆಗೆದು ಸ್ಟಾಪ್ ಟೊಬ್ಯಾಕೋ ಆಪ್ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ.
ಆಪ್ ಮೂಲಕ ದಾಖಲಾಗುವ ದೂರುಗಳನ್ನು ಆರೋಗ್ಯ ಇಲಾಖೆಯು ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ಕಳಿಸಲಿದೆ.
ಜಿಲ್ಲಾ ಹಾಗೂ ತಾಲ್ಲೂಕು ತನಿಖಾ ತಂಡಗಳು ಕೊಟ್ಪಾ ಕಾಯಿದೆ ಉಲ್ಲಂಘನೆ ಕುರಿತ ದೂರಿಗೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಂಡು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಸಾರ್ವಜನಿಕರು ಈ ಆಪ್ ಡೌನ್‌ಲೋಡ್ ಮಾಡಿಕೊಂಡು ನಿಯಮಾವಳಿ ಮೀರಿ ತಂಬಾಕು ಮಾರಾಟ ಅಥವಾ ಬಳಕೆ ಕಂಡುಬಂದರೆ ತಕ್ಷಣವೇ ಫೋಟೋ ಸಮೇತ ದೂರು ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಮೊದಲ ಹಂತದಲ್ಲಿ ಬೆಳಗಾವಿ, ಉಡುಪಿ, ಮೈಸೂರು, ಕಲ್ಬುರ್ಗಿ, ಕೋಲಾರ, ಶಿವಮೊಗ್ಗ, ರಾಯಚೂರು, ಬಳ್ಳಾರಿ, ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ “ಸ್ಟಾಪ್ ಟೊಬ್ಯಾಕೋ” ಆಪ್ ಕಾರ್ಯನಿರ್ವಹಿಸಲಿದೆ.

ರೋಟಾ ವೈರಸ್ ಲಸಿಕೆ ನೀಡುವ ಅಭಿಯಾನ ಅಗಸ್ಟನಿಂದ ಆರಂಭ :

ಮಕ್ಕಳಲ್ಲ್ಲಿ ಅತೀಸಾರ ಭೇದಿ ತಡೆಗಟ್ಟಲು ರೋಟಾ ವೈರಸ್ ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲೆಯಲ್ಲಿ ಅಗಸ್ಟ ನಿಂದ ಆರಂಭಿಸಲಾಗುವದು ಎಂದು ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ(ಜುಲೈ೧೭) ರೋಟಾ ವೈರಸ್ ಲಸಿಕೆ ನೀಡುವ ಅಭಿಯಾನಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯವಂತ ಮಕ್ಕಳು, ಮುಂದಿನ ಭಾರತದ ಸಂಪತ್ತು ಅತಿಸಾರ ಭೇದಿ ೫ ವರ್ಷದ ಒಳಗಿನ ಮಕ್ಕಳನ್ನು ಕಾಡುವ ಹೆಮ್ಮಾರಿ ರೋಗ ಭಾರತ ದೇಶದಲ್ಲಿ ಅಂದಾಜು ಒಂದು ವರ್ಷದಲ್ಲಿ ೨೦೮ ಮಿಲಿಯನ್ ಮಕ್ಕಳು ಈ ರೋಗದಿಂದ ಬಳಲುವರು, ಅದರಲ್ಲಿ ೧ ಲಕ್ಷದಷ್ಟು ಮಕ್ಕಳು ಸಾವನಪ್ಪುವರು ಅಂದರೆ ತಿಂಗಳಲ್ಲಿ ೮೭೨೦ ವಾರದಲ್ಲಿ ೨೮೭ ಗಂಟೆಗೆ ೧೨ ಮಕ್ಕಳು ಭಾರತದಲ್ಲಿ ಸಾವನ್ನಪ್ಪುವರು ಎಂದಾದರೆ ಅತೀಸಾರಬೇದಿಯ ಭಯಾನಕತೆ ಅರಿವಾಗಬಹುದು.
ಅತಿಸಾರ ಭೇದಿಯು ಹೆಚ್ಚಾಗಿ ತಾಯಿಯ ಎದೆಹಾಲು ಕುಡಿಯದ (ಉಣ್ಣದ) ಮಕ್ಕಳಲ್ಲಿ, ಅಪೌಷ್ಟಿಕ ಮಕ್ಕಳಲ್ಲಿ, ಯಾರು ಸ್ವಚ್ಛ ನೀರು ಹಾಗೂ ಆಹಾರ ಸೇವಿಸುವುದಿಲವೋ ಆ ಮಕ್ಕಳಲ್ಲಿ ಹಾಗೂ ದಿನನಿತ್ಯ ವಯಕ್ತಿಕ ಸ್ವಚ್ಛತೆಯ (ಶೌಚಾಲಯ ಉಪಯೋಗದ ನಂತರ ಕೈತೊಳೆಯುವುದು ಇತ್ಯಾದಿ) ಕೊರತೆಯಿರುವ ಮಕ್ಕಳಲ್ಲಿ ಮತ್ತು ಯಾವ ಮಕ್ಕಳಲ್ಲಿ ರೋಟಾ ವೈರಸ್ ಲಸಿಕೆ ಪಡೆದಿರುವುದಿಲ್ಲವೋ ಅವರಲ್ಲಿ ಹೆಚ್ಚಾಗಿ ಕಂಡುಬರುವುದು.

ರೋಟಾ ವೈರಸ್ ಎಂದರೇನು? ಈ ವೈರಾಣುವಿನಿ ರೋಗ ಲಕ್ಷಣಗಳೇನು:

ಈ ರೋಟಾ ವೈರಸ್ ಎನ್ನುವ ವೈರಾಣು ಅತೀ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಅತಿಸಾರ ಭೇದಿಯನ್ನುಂಟು ಮಾಡುವ ಸೂಕ್ಷ್ಮಾಣು ಜೀವಿ. ಸೋಂಕು ತಗುಲಿದ ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚು ಸಾರಿ ನೀರು ನೀರಾದ ಭೇದಿ,ವಾಂತಿ,ಹೊಟ್ಟೆನೋವು ಹಾಗೂ ಜ್ವರ ಉಂಟು ಮಾಡಬಹುದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ದೇಹದಲ್ಲಿ ನಿರಜಲಿಕರಣ( ದೇಹದಿಂದ ಅಂಶ ಬಸಿದುಹೋಗುವದು) ಉಂಟಾಗಿ ಮಗು ಮರಣಕೂಡ ಹೊಂದಬಹುದು.
ರೋಗದಿಂದ ಬಳಲುತ್ತಿರುವ ಮಗುವಿನ ಭೇದಿಯಲ್ಲಿ (ಮಲದಲ್ಲಿ) ರುವ ವೈರಾಣುಗಳು ಕಲುಷಿತ ನೀರು ನೋಣಗಳ ಮೂಲಕ ಆಹಾರದಲ್ಲಿ ಅಥವಾ ಸ್ವಚ್ಛವಾಗಿ ಕೈತೊಳೆಯದೆ ಇದ್ದಲ್ಲಿ ಆರೋಗ್ಯವಂತ ಮಕ್ಕಳ ಹೊಟ್ಟೆಯನ್ನು ಸೇರಿದಾಗ ಆ ಮಗುವಿಗೂ ಕೂಡ ರೋಗ ಉಂಟಾಗಬಹುದು.
ಮಕ್ಕಳಲ್ಲಿ ಅತಿಸಾರ ಭೇದಿ ರೋಟಾ ವೈರಸ್ ಅಲ್ಲದೇ ಬ್ಯಾಕ್ಟೀರಿಯಾ ಅಥವಾ ಪ್ರೋಟೂಜೊವಾಗಳಿಂದಲೂ ಉಂಟಾಗಬಹುದು. ಆದರೆ ಈ ರೋಗಾಣುಗಳಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿರುವುದು. ಆದರೆ ರೋಟಾ ವೈರಾಣುವಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ ರೋಟಾವೈರಸ್ ಲಸಿಕೆಯಿಂದ ಪರಿಣಾಮಕಾರಿಯಾಗಿ ರೋಗ ಬರುವುದನ್ನು ತಡೆಗಟ್ಟಬಹುದು.
೦-೨ ವರ್ಷದ ಮಕ್ಕಳಗೆ ರೋಟಾವೈರಸ ಸೋಂಕು ಅತೀ ಹೆಚ್ಚು ಪ್ರಮಾಣದಲ್ಲಿ ಅಂದಾಜು ೪೦% ದಷ್ಟು ಮಕ್ಕಳಲ್ಲಿ ರೋಟಾವೈರಸ್ ಭೇದಿ ಕಂಡುಬರುವುದು.
ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಅತೀಸಾರಭೇದಿಯನ್ನು ರೋಟಾವೈರಸ್ ಲಸಿಕೆಯಿಂದ ತಡೆಗಟ್ಟಬಹುದಾಗಿದ್ದರಿಂದ ಬೆಳಗಾವಿ ಜಿಲ್ಲಾಡಳಿತ ಮುಂಬರುವ ಅಗಷ್ಟ ತಿಂಗಳಿಂದ ಜಿಲ್ಲೆಯಲ್ಲಿ ರೋಟಾವ ವೈರಸ್ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಂದು ವರ್ಷದೊಳಗಿನ ಮಕ್ಕಳಿಗೆ ೬ ವಾರ, ೧೦ವಾರ ಹಾಗೂ ೧೪ ನೇಯ ವಾರದ ಸಮಯದಲ್ಲಿ ಲಸಿಕೆಗಳನ್ನು ನೀಡುವುದರ ಜೊತೆಗೆ ರೋಟಾವೈರಸ್ ಲಸಿಕೆಯನ್ನು ಕೂಡಾ ನೀಡಲಾಗುವುದು.
ಆರೋಗ್ಯ ಇಲಾಖೆಯ ಕಾರ್ಯಕ್ರಮದ ಬಗ್ಗೆ ಕ್ರಿಯಾಯೋಜನೆಯನ್ನು ತಯಾರಿಸಿಕೊಂಡಿದ್ದು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಎಲ್ಲ ಆರೋಗ್ಯ ಕಾರ್ಯಕರ್ತೆಯರಿಗೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button