Kannada NewsKarnataka NewsLatestPolitics

*ಕಾವೇರಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಶೇ.54ರಷ್ಟು ಕೊರತೆ; ರಾಜ್ಯದ ರೈತರ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡುವಂತೆ ತುರ್ತು ಸಭೆಯಲ್ಲಿ ಡಿಸಿಎಂ ಮನವಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿನ್ನೆ ಸಂಜೆ ಕಾವೇರಿ ನೀರು ನಿರ್ವಹಣೆ ಸಮಿತಿ (CWMC) ಆದೇಶ ಬಂದ ಹಿನ್ನೆಲೆಯಲ್ಲಿ ಇಂದಿನ ತುರ್ತುಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಡಿಸಿಎಂ, ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಜಲವರ್ಷದಲ್ಲಿನ ಪರಿಸ್ಥಿತಿ ಬಗ್ಗೆ ಈ ಹಿಂದೆ ದಿನಾಂಕ:28.08.2023ರಂದು ಸರ್ವಪಕ್ಷಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿತ್ತು. ದಿನಾಂಕ:12.09.2023 ರಂದು ಅಂದರೆ, ನಿನ್ನೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ (CWRC) 86ನೇ ಸಭೆಯು ಜರುಗಿದ್ದು, ಈ ಸಭೆಯಲ್ಲಿ ದಿನಾಂಕ:13.09.2023 ರಿಂದ ಮುಂದಿನ 15 ದಿನಗಳವರೆಗೆ ಕರ್ನಾಟಕ ರಾಜ್ಯವು ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 5,000 ಕ್ಯೂಸೆಕ್ಸ್‌ ನೀರಿನ ಪ್ರಮಾಣವನ್ನು ಖಚಿತ ಪಡಿಸುವಂತೆ ನಿರ್ಣಯಿಸಿದೆ. ಈ ವಿಷಯವು ರಾಜ್ಯದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಅತೀ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅತೀ ತುರ್ತಾಗಿ ಈ ದಿನ short noticeನಲ್ಲಿ ಸಭೆ ಕರೆಯಲಾಗಿದೆ ಎಂದರು.

ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆಯಿದ್ದು, ಮೇ-2024ರವರೆಗೆ ನಮ್ಮ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಾಗಿದ್ದು, ಈಗಾಗಲೇ South-West Monsoon ಮುಗಿಯುವ ಹಂತದಲ್ಲಿದ್ದು, ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣವು ಕ್ಷೀಣಿಸುತ್ತಿದೆ. ಈಗಿನ ಸಂಗ್ರಹಣೆಯನ್ನು ನಮ್ಮ ಅಗತ್ಯತೆಗಳಿಗೆ ಕಾಯ್ದಿರಿಸಬೇಕಾಗಿದೆ.

ರಾಜ್ಯದ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನ ಮಾಡಲು ದಿಲ್ಲಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ. ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನ ಮಂತ್ರಿಗಳ ಸಮಯ ಕೇಳಲಾಗಿದೆ.

ಈ ಮಧ್ಯೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆ ಮತ್ತು ರಾಜ್ಯವು ಸಲ್ಲಿಸಿರುವ ಪ್ರತಿಕ್ರಿಯೆಗಳ ವಿಚಾರಣೆಯು ದಿನಾಂಕ 21.09.2023 ರಂದು ನಿಗದಿಯಾಗಿರುತ್ತದೆ. ರಾಜ್ಯದ ಕಾವೇರಿ ಜಲಾನಯನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಳೆಗಳಿಗೆ ನೀರಾವರಿಗಾಗಿ 70.20 TMC, ಸೆಪ್ಟೆಂಬರ್ 2023 ರಿಂದ ಜುಲೈ 2024 ರವರೆಗೆ ಕುಡಿಯುವ ನೀರಿಗೆ 33 TMC ಮತ್ತು ಕೈಗಾರಿಕಾ ಬಳಕೆಗಾಗಿ 3 TMC, ಹೀಗೆ ಒಟ್ಟು 106.20 TMC ನೀರಿನ ಪ್ರಮಾಣದ ಅವಶ್ಯಕವಿರುತ್ತದೆ.ಆದರೆ, ನಮ್ಮ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿನ ಇಂದಿನ ಒಟ್ಟಾರೆ live storage 53.287 ಟಿಎಂಸಿ ಇದ್ದು, ಹಿಂದಿನ ವರ್ಷ ಇದೇ ದಿನದಂದು live storage 103.348 ಟಿಎಂಸಿ ಆಗಿತ್ತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದಲ್ಲಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಕೊರತೆ 54% ಆಗಿರುತ್ತದೆ ಎಂದು ತಿಳಿಸಿದರು.

ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ 01.06.2023ರಿಂದ 11.09.2023ರವರೆಗೆ ಒಟ್ಟು 37.718 ಟಿಎಂಸಿ ನೀರು ಹರಿದಿರುತ್ತದೆ. ಸಾಮಾನ್ಯ ವರ್ಷದಲ್ಲಿ (normal year) CWDT ಆದೇಶದನ್ವಯ ಇದೇ ಅವಧಿಯಲ್ಲಿ 99.860 ಟಿಎಂಸಿ ನೀರನ್ನು ಬಿಡಬೇಕಾಗಿತ್ತು. ಸಾಮಾನ್ಯ ವರ್ಷಗಳಲ್ಲಿ ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಕೊರತೆಯುಂಟಾಗದೆ ತಮಿಳುನಾಡಿಗೆ ಈ ಹಿಂದೆ ಹಲವಾರು ವರ್ಷಗಳಲ್ಲಿ ನ್ಯಾಯಾಧಿಕರಣದ ಆದೇಶದ ಅನ್ವಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣವನ್ನು ಬಿಡಲಾಗಿದೆ. ಕಳೆದ ವರ್ಷ ನಿಗದಿತ 177.75 TMC ಪ್ರಮಾಣಕ್ಕೆ ಎದುರಾಗಿ 650 TMCಗಿಂತ ಅಧಿಕವಾಗಿ ನೀರನ್ನು ಬಿಡಲಾಗಿದೆ.

ಪ್ರಸಕ್ತ ಜಲವರ್ಷದಲ್ಲಿನ ನೀರಿನ ಕೊರತೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ತಮಿಳುನಾಡು ರಾಜ್ಯವು ಸಲ್ಲಿಸಿರುವ ದಾವೆಯು ದಿನಾಂಕ:21.09.2023ರಂದು ವಿಚಾರಣೆಗೆ ಬರಲಿದೆ. ಇದಲ್ಲದೆ, ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಚಿತವಾಗಿರುವ CWRC & CWMA ಇವುಗಳು ಕಾವೇರಿ ಕಣಿವೆಯ ನೀರಿನ ಪರಿಸ್ಥಿತಿಯನ್ನು ವಿಮರ್ಷಣೆ ಮಾಡಿ ಆದೇಶಗಳನ್ನು ನೀಡುತ್ತಿವೆ.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ರಾಜ್ಯದ ಕಾವೇರಿ ಕಣಿವೆಯ ರೈತರುಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಕುಡಿಯುವ ನೀರಿಗಾಗಿ ಅಗತ್ಯವಿರುವ ನೀರಿನ ಪ್ರಮಾಣವನ್ನು ಕಾಯ್ದಿರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ರಾಜ್ಯದ ನೆಲ, ಜಲ ಮತ್ತು ಭಾಷೆಗಳ ವಿಷಯಗಳಲ್ಲಿ ಯಾವತ್ತೂ ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷಗಳ ಮುಖಂಡರುಗಳ ಅಭಿಪ್ರಾಯಗಳನ್ನು ಪಡೆದು ಮುಂದಿನ ಕ್ರಮಗಳನ್ನು ಎಲ್ಲಾ ಸರ್ಕಾರಗಳು ಕೈಗೊಳ್ಳುತ್ತಿದ್ದು, ಅದರಂತೆ, ಈ ಸಭೆಯನ್ನು ಕರೆಯಲಾಗಿದ್ದು, ತಮ್ಮೆಲ್ಲರ ಅಭಿಪ್ರಾಯವನ್ನು ಕೋರುತ್ತೇನೆ. ಅನ್ಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button