Kannada NewsKarnataka NewsLatest
*ಹಾಸನಾಂಬೆ ದೇಗುಲದ ಬಾಗಿಲು ಓಪನ್; ವರ್ಷದಿಂದ ಉರಿಯುತ್ತಲೇ ಇತ್ತು ದೀಪ*

ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನದ ಅಧಿದೇವತೆ, ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಇಂದಿನಿಂದ ತೆರೆಯಲಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಉಪಸ್ಥಿತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಅರ್ಚಕ ನಾಗರಾಜ್ ನೇತೃತ್ವದಲ್ಲಿ ಮಧ್ಯಾಹ್ನ 12:23ರ ಸುಮಾರಿಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ದೇವಾಲಯದ ಹೊರಗಡೆ ಕಡಳಿ ಕಡಿಯುತ್ತಿದ್ದಂತೆಯೇ ದೇವಾಲಯದಲ್ಲಿ ಗರ್ಭಗುಡಿ ಬಾಗಿಲನ್ನು ಅರ್ಚಕರು ತೆರೆದರು. ದೇವಸ್ಥಾನದ ಗರ್ಭಗುಡಿಯಲ್ಲಿ ವರ್ಷದ ಹಿಂದೆ ಇಟ್ಟ ದೀಪ ಆರುವುದಿಲ್ಲ, ಹೂವು ಬಾಡುವುದಿಲ್ಲ ಎಂಬ ನಂಬಿಕೆ ಇದ್ದು, ಅದೇ ರೀತಿ ದೂಪ ಉರಿಯುತ್ತಲೇ ಇದ್ದು, ದೇವರಿಗೆ ಮುಡಿಸಲಾಗಿದ್ದ ಹೂವು ಕೂಡ ಬಾಡಿರಲಿಲ್ಲ.
ನಾಳೆಯಿಂದ ನ.15ವರೆಗೆ ಹಾಸನಾಂಬೆದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾಡಳಿತ ಭಕ್ತರಿಗಾಗಿ ಸೂಕ್ತ ವ್ಯವಸ್ಥೆ ಮಾಡಿದೆ.




