Kannada NewsKarnataka News

ವಿದ್ಯಾರ್ಥಿಗಳು ಮೊಬೈಲ್ ಫೋನ್ ಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು: ಕೆ.ವಿ.ಪ್ರಭಾಕರ್

ಪ್ರಗತಿವಾಹಿನಿ‌ ಸುದ್ದಿ:  ಮೊಬೈಲ್ ಫೋನ್ ಒಂದು ಉಪಯುಕ್ತ ಸಾಧನ. ಆದರೆ ಒಳಿತು ಕೆಡುಕು ಆಯ್ಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಮೊಬೈಲ್ ಫೋನ್ ಬಳಸುವುದನ್ನು ತಿಳಿದಿರಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ತಿಳಿಸಿದರು.

ಶುಕ್ರವಾರ ಬೆಂಗಳೂರು ನಗರದ ಬಾಲ್ಡ್‌ವಿನ್‌ ಬಾಲಕಿಯರ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಬಹುಮಾನ  ಪ್ರಮಾಣ ಪತ್ರ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

“ಶಾಲಾ ಶಿಕ್ಷಣವು ಹೈಟೆಕ್ ಆಗಿ ಮಾರ್ಪಟ್ಟಿದೆ, ಮತ್ತು ಅನೇಕರು ಮೊಬೈಲ್ ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆ. ನಾನು ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಎಂದು ಹೇಳುವುದಿಲ್ಲ. ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಮೊಬೈಲ್‌ನ ದುಷ್ಪರಿಣಾಮಗಳ ಬಗ್ಗೆ ನಾವು ಪ್ರತಿದಿನ ಓದುತ್ತೇವೆ. ಆದ್ದರಿಂದ ಮೊಬೈಲ್ ಅನ್ನು ಅಗತ್ಯ ಕೆಲಸಕ್ಕೆ ಮಾತ್ರ ಬಳಸಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಈಡೇರಿಸುವುದು ಕರ್ತವ್ಯವಾಗಿದೆ. ನೀವು ಯಾವ ವೃತ್ತಿಯನ್ನು ಆರಿಸಿಕೊಂಡರೂ, ಮೊದಲು ಉತ್ತಮ ಮನುಷ್ಯನಾಗಲು ಶ್ರಮಿಸಿ ಮತ್ತು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಿ ಎಂದರು.

ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು ಹಂಚಿಕೊಂಡ ಅವರು, ”ನನ್ನ ತಂದೆ ನಾನು ಐಟಿಐ ಮಾಡಬೇಕೆಂದು ಬಯಸಿದ್ರು, ಆದರೆ ನನಗೆ ಬರವಣಿಗೆಯ ಉತ್ಸಾಹವಿತ್ತು, ಆದ್ದರಿಂದ ನಾನು ಪತ್ರಿಕೋದ್ಯಮವನ್ನು ಆರಿಸಿದೆ. ಎಪಿಜೆ ಅಬ್ದುಲ್ ಕಲಾಂ ಅವರಂತೆ ನಾನು ಮನೆ ಮನೆಗಳಿಗೆ ಪತ್ರಿಕೆಗಳನ್ನು ಹಂಚಿದ್ದೇನೆ.  ಮಾಧ್ಯಮ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಯಶಸ್ಸಿನ ಪಯಣವು ಹಂತಹಂತವಾಗಿ ಗುರಿ ಮುಟ್ಟಿರುವುದು. ಈ ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವುದು ನನ್ನ ಆಶಯ ಎಂದರು.

ಕಾರ್ಯಕ್ರಮದಲ್ಲಿ  ಪ್ರಾಂಶುಪಾಲೆ ಆಶಾ ಮಾರ್ಗರೇಟ್ ದಾಸ್, ಉಪ- ಪ್ರಾಂಶುಪಾಲೆ ಸುಜಾತಾ ಕ್ಯಾಥರೀನ್ ಮತ್ತು HR ಮುಖ್ಯಸ್ಥೆ ಅನಿತಾ ಐಸಾಕ್, ಎಂ. ಜೋಶುವಾ ಸ್ಯಾಮ್ಯುಯೆಲ್ (ಕಾರ್ಯದರ್ಶಿ, BMES), ವಿಶೇಷ ಅತಿಥಿಗಳಾಗಿ ಮೀಡಿಯಾ ಕನೆಕ್ಟ್ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ, ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button