ಬೋರ್ಡ್ ಗಳ ವಿಲೀನ ಇಲ್ಲ -ಸುರೇಶ ಕುಮಾರ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದಲ್ಲಿ ಪಿಯು ಮಂಡಳಿ ಮತ್ತು ಎಸ್ಎಸ್ಎಲ್ಸಿ ಬೋರ್ಡ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಎರಡೂ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ ಈ ಎರಡೂ ಮಂಡಳಿಗಳನ್ನು ವಿಲೀನಗೊಳಿಸುವುದಾಗಿ ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿಕೆ ನೀಡಿದ್ದರು.

ಇದೀಗ ತಮ್ಮ ಹೇಳಿಕೆಯಿಂದ ಸುರೇಶ ಕುಮಾರ ಹಿಂದೆ ಸರಿದಿದ್ದಾರೆ. ಪಿಯು ಮಂಡಳಿ ಮತ್ತು ಎಸ್ಎಸ್ಎಲ್ ಸಿ ಮಂಡಳಿಗಳ ವಿಲೀನ ಇಲ್ಲ. ಎರಡೂ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಲಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರದಿಂದ ಬಂದಿದ್ದ ಸುತ್ತೋಲೆಯೊಂದರ ಆಧಾರದಲ್ಲಿ ಇಂತಹ ಹೇಳಿಕೆ ನೀಡಿದ್ದೆ. ಆದರೆ ಅವರು ವಿಲೀನವಾಗುವುದಿಲ್ಲ. ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಲಿವೆ, ಪರೀಕ್ಷೆಗಳನ್ನೂ ನಡೆಸಲಿವೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಈ ಬಾರಿ ಎರಡನೇ ಜೋಡಿ ಸಮವಸ್ತ್ರ ವಿತರಿಸುವುದಿಲ್ಲ ಎನ್ನುವ ಹೇಳಿಕೆಯನ್ನೂ ಸಚಿವರು ವಾಪಸ್ ಪಡೆದಿದ್ದಾರೆ. ಸಧ್ಯವೇ ಎರಡನೇ ಜೋಡಿ ಸಮವಸ್ತ್ರ ವಿತರಿಸಲಾಗುತ್ತದೆ ಎಂದಿದ್ದಾರೆ.

ಶಿಕ್ಷಕರ ವರ್ಗಾವಣೆಯನ್ನು ಉಪಚುನಾವಣೆ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಆದರೆ ಉಪಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಪುನಃ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಈ ಸಂಬಂಧ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು. ಇದೇ 30ರಿಂದ ವರ್ಗಾವಣೆ ಪ್ರಕ್ರಿಯೆ ಪುನಾರಂಭವಾಗಲಿದೆ ಎಂದು ಸುರೇಶ್ ಕುಮಾರ ಹೇಳಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button