Kannada NewsKarnataka News

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಕೈಜೋಡಿಸಿ: ಸಚಿವ ಸುರೇಶ ಅಂಗಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ದೇಶದ ಪ್ರಚಲಿತ ಸಮಸ್ಯೆಗಳಿಗೆ ಸ್ಪಂದಿಸಿ ಸಾಹಿತ್ಯ ರಚಿಸಬೇಕು, ಜತೆಗೆ ಸಾಮಾಜಿಕ ಬದಲಾವಣೆಗಳಿಗೆ ಸಾಹಿತಿಗಳ ಬುದ್ಧಿಜೀವಿಗಳ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.
ನಗರದಲ್ಲಿಂದು ಕನ್ನಡ ಸಾಹಿತ್ಯ ಭವನದಲ್ಲಿ ಸದ್ಗುರು ಸಾಹಿತ್ಯ ಪ್ರತಿಷ್ಠಾನ, ಅಥಣಿಯ ಚಿನ್ಮಯ ಪ್ರಕಾಶನದ ವತಿಯಿಂದ ಆಯೋಜಿಸಲಾಗಿದ್ದ, ವಿಶ್ವ ಶೈಕ್ಷಣಿಕ ದಿನಾಚರಣೆಯ ನಿಮಿತ್ತ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನ, ಸಾಹಿತ್ಯ ಶ್ರೀ ಮಿರ್ಜಿ ಅಣ್ಣಾರಾಯ ಕಾವ್ಯ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ಸಧ್ಯದ ಆಂದೋಲನವಾಗಿರುವ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸರ್ವರೂ ಕೈಜೋಡಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ದುಷ್ಠರ ಸಂಹಾರಕ್ಕೆ ರೂಪ ತಾಳಿದ ಜಗನ್ಮಾತೆ ದುರ್ಗಾದೇವಿಯ ಆರಾಧನೆ ವೈಭವವನ್ನು ದಸರಾ ರೂಪದಲ್ಲಿ ಸಕಲ ದೈವಿಗಳ ಪೂಜಿಸುವ ಹಬ್ಬ ನಾಡಹಬ್ಬವಾಗಿದೆ. ಪ್ರತಿಯೊಬ್ಬರು ಉತ್ತಮ ನಡೆ-ನುಡಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕೆಂದರು. ಈ ಪುಣ್ಯಮಯ ಸಮಯದಲ್ಲಿ ರಾಜ್ಯದ ವಿವಿದ ಭಾಗಗಳಲ್ಲಿ ಕವಿ ಸಾಹಿತಿ ಲೇಖಕರನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದ್ದು ಸಂತೋಷಕರ ವಿಷಯ ಎಂದರು.
ಈ ಸಂದರ್ಭದಲ್ಲಿ ನಿನ್ನ ಧ್ಯಾನದಲ್ಲಿ ಹಾಗೂ ಅಪರಾಧಿ ನಾನಲ್ಲ ವೆಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಅಧ್ಯಕ್ಷತೆಯನ್ನು ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕೊಟ್ರೇಶ ಉಪ್ಪಾರ, ಪಠ್ಯ ರಚನಾ ಸಮಿತಿಯ ಪುಣೆಯ ಡಾ. ಸದಾನಂದ ಬಿಳ್ಳೂರು, ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ, ಗದಗದ ಎ ಎಸ್ ಮಕಾನದಾರ, ಡಾ. ಮೈತ್ರಾಯೀಣಿ ಗದಿಗೆಪ್ಪಗೌಡರ, ಪ್ರಾಚಾರ್ಯ ಗಂಗಾಧರ ಎನ್ ಮರಳಹಳ್ಳಿ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಕವಿ ಕವಿಯತ್ರಿಯರು ಕವನ ವಾಚನ ಮಾಡಿದರು. ಸಾಧಕರಿಗೆ ವಿಶ್ವ ಶೈಕ್ಷಣಿಕ ದಿನಾಚರಣೆಯ ನಿಮಿತ್ತ ಸಾಹಿತ್ಯ ಶ್ರೀ, ಮಿರ್ಜಿ ಅಣ್ಣಾರಾಯ ಕಾವ್ಯ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನವನ್ನು ಸಚಿವರು ನೆರವೇರಿಸಿದರು.
ಶಿಕ್ಷಕಿಯರಾದ ಕುಲಕರ್ಣಿ, ರೇಖಾ ಅಂಗಡಿ ಪ್ರಾರ್ಥಿಸಿದರು. ಅರುಣಕುಮಾರ ರಾಜಮಾನೆ ಸ್ವಾಗತಿಸಿದರು. ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೋಭಾ ದೇಸಿಂಗೆ ನಿರೂಪಿಸಿದರು. ಶಿಕ್ಷಕ ಮಹಾಂತೇಶ ಪಾಟೀಲ ವಂದಿಸಿದರು.

Home add -Advt

Related Articles

Back to top button