*ರಂಗಸೃಷ್ಟಿಯಿಂದ ಎಂ.ಕೆ.ಹೆಗಡೆ, ಶಿರೀಷ ಜೋಶಿಗೆ ಸನ್ಮಾನ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರವಿ ಬೆಳಗೆರೆ ದತ್ತಿನಿಧಿ ಪ್ರಶಸ್ತಿ ಪಡೆದ ರಂಗಸೃಷ್ಟಿಯ ಉಪಾಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಹಾಗೂ ಧಾರವಾಡದ ಶಿವರಾತ್ರಿ ಸಂಗೀತ ಮಹೋತ್ಸವ ಸಮಿತಿಯಿಂದ ಕಲಾ ಪೋಷಕ ಸಾಧಕ ಶಿವ ಪ್ರಶಸ್ತಿ ಪಡೆದ ರಂಗ ಸೃಷ್ಟಿಯ ಸಂಚಾಲಕ ಶಿರೀಷ ಜೋಶಿ ಅವರನ್ನು ರಂಗಸೃಷ್ಟಿಯ ಪರವಾಗಿ ಸೋಮವಾರ ಸಂಜೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಟಿಳಕವಾಡಿಯ ಸ್ಕೌಟ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕ, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ ಜಂಗಲ್ ಹಾಗೂ ಹಿರಿಯ ಸಾಹಿತಿ ಡಾ.ರಾಮಕೃಷ್ಣ ಮರಾಠೆ ಅವರು ಎಂ.ಕೆ.ಹೆಗಡೆ ಮತ್ತು ಶಿರೀಷ ಜೋಶಿ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ರಮೇಶ ಜಂಗಲ್, ಎಂ.ಕೆ.ಹೆಗಡೆ ಮತ್ತು ಶಿರೀಷ್ ಜೋಶಿ ಅವರನ್ನು ಕಳೆದ 25 ವರ್ಷಗಳಿಂದ ಗಮನಿಸುತ್ತ ಬಂದಿದ್ದೇನೆ. ಈ ಇಬ್ಬರೂ ಮಾತು ಕಡಿಮೆ, ಕೆಲಸ ಹೆಚ್ಚು ಎನ್ನುವ ರೀತಿಯಲ್ಲಿ ಸಾಧನೆ ಮಾಡಿದವರು. ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತ ಬಂದಿದ್ದಾರೆ. ಸಿಕ್ಕಿರುವ ಪ್ರಶಸ್ತಿಗಿಂತ ಅವರ ಸಾಧನೆ ದೊಡ್ಡದು. ರಂಗಸೃಷ್ಟಿಯ ವತಿಯಿಂದ ಇವರನ್ನು ಸನ್ಮಾನಿಸುವುದು ಬಹಳ ಖುಷಿ ಎನಿಸುತ್ತಿದೆ ಎಂದರು.
ಸನ್ಮಾನಿತರಾದ ಎ.ಕೆ.ಹೆಗಡೆ ಮತ್ತು ಶಿರೀಷ್ ಜೊಶಿ ಮಾತನಾಡಿ, ರಂಗಸೃಷ್ಟಿ ತಂಡದಿಂದ ಸನ್ಮಾನ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿದರು.
ಹಿರಿಯ ಕಲಾವಿದರಾದ ಶಾಂತಾ ಆಚಾರ್ಯ, ಶರಣಗೌಡ ಪಾಟೀಲ, ರಾಮನಾಥ ಬನಶಂಕರಿ, ಶೋಭಾ ಬನಶಂಕರಿ, ರಮೇಶ ಮಿರ್ಜಿ, ಎ.ಎಂ.ಜಯಶ್ರೀ, ರವೀಂದ್ರ ಕುಮಾರ, ಶರಣಯ್ಯ ಮಠಪತಿ, ಶಾರದಾ ಬೋಜ್ ಮೊದಲಾದವರು ಇದ್ದರು.