
ಪ್ರಗತಿವಾಹಿನಿ ಸುದ್ದಿ: ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಮುಂಜಾಗೃತಿ ಕ್ರಮ ಕೈಗೊಳ್ಳುವುದು, ಜಲ ಜೀವನ ಮಿಷನ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದಡಿ ನೀರಿನ ಪೂರೈಕೆ ಹಾಗೂ ಸಂಬಂಧಿಸಿದ ಕಾರ್ಯಾಚರಣೆ ನಿರ್ವಹಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಎನ್ ಬಂಗಾರೆಪ್ಪನವರು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಮಾ.12) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಎಲ್ಲ ತಾಲ್ಲೂಕಿನ ಕಾರ್ಯನಿರ್ವಾಯಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಪಂಚಾಯತ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ, ಎಇ, ಜೆಇ, ಸಪೋರ್ಟ ಇಂಜಿನೀಯರು ಗಳಿಗೆ ಆಯೋಜಿಸಲಾದ ಒಂದು ದಿನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮಗಳಲ್ಲಿ ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು. ಘನ ಮತ್ತು ದ್ರವ ತ್ಯಾಜ್ಯ ಸೂಕ್ತ ನಿರ್ವಹಣೆ ಹಾಗೂ ಗ್ರಾಮಿಣ ಜನರಲ್ಲಿ ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೆಜಿಸಬೇಕೆಂದು ಕಾರ್ಯಾಗಾರದಲ್ಲಿ ತಿಳಿಸಿದರು.
ತರಬೇತಿಯಲ್ಲಿ ಕುಡಿಯುವ ನೀರಿನ ಪೂರೈಕೆ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ, ಮಾದರಿ ಗ್ರಾಮಗಳ ಘೋಷಣೆ, 24/7 ನೀರಿನ ಸೇವೆಗಳ ಬಗ್ಗೆ, ಜಿ.ಡಬ್ಲ್ಯೂ.ಎಮ್ ಮಾದರಿಗಳ ನಿರ್ಮಾಣ ಮತ್ತು ಉತ್ತಮ ನಿರ್ವಹಣೆ, ಗ್ರಾಮ ನೀರು ನೈರ್ಮಲ್ಯ ಸಮಿತಿಗಳ ರಚನೆ ಪಾತ್ರ ಮತ್ತು ಜವಾಬ್ದಾರಿಗಳು, ವಾಟರ್ ಮೀಟರ್ ಮ್ಯಾನೇಜಮೆಂಟ, ನೀರು ಮತ್ತು ನೈರ್ಮಲ್ಯ ವಿಷಯಗಳಲ್ಲಿನ ಕ್ಷೇತ್ರ ಮಟ್ಟದ ಸವಾಲುಗಳು, ನೀರಿನ ಕರ ಕುರಿತು ಸಂಪೂರ್ಣ ಮಾಹಿತಿ ಮಾರ್ಗದರ್ಶನ ಸಲಹೆಗಳನ್ನು ತರಬೇತಿಯಲ್ಲಿ ಕೂಲಂಕುಶವಾಗಿ ಚರ್ಚಿಸಲಾಯಿತು.
ಆರ್. ಡಬ್ಲ್ಯೂ.ಎಸ್. ಇಲಾಖೆಯ ಬೆಳಗಾವಿ ವಿಭಾಗದ ಇಇ ಶಶಿಕಾಂತ್ ನಾಯಕ್ ಮತ್ತು ಚಿಕ್ಕೋಡಿ ವಿಭಾಗದ ಇಇ ಪಾಂಡುರಂಗ ರಾವ್, ಕೆ.ಎಸ್.ಡಬ್ಲ್ಯೂ.ಎಸ್.ಪಿ ಸಮಾಲೋಚಕರು ಎಸ್.ಬಿ.ಎಮ್. ಜಿಲ್ಲಾ ಸಮಾಲೋಚಕರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.