
ಪ್ರಗತಿವಾಹಿನಿ ಸುದ್ದಿ: ಶಿವಯೋಗದ ಮೂಲ ತತ್ವವೇ ಶಿವನ ಜೊತೆ ಸೇರುವುವು ಎಂದರ್ಥ, ಅನಂತವಾಗಿರುವ ಶಿವನಲ್ಲಿ ಒಂದಾಗುವುದೇ ಶಿವಯೋಗದ ಮೂಲ ಆಶಯ. ಶಿವಬಸವ ಶಿವಯೋಗಿಗಳು ಶಿವಯೋಗದ ಸಾರ್ವಭೌಮ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿ ಹೇಳಿದರು.
ಸಪ್ತಸಾಗರ ಗ್ರಾಮದಲ್ಲಿ ಶಿವಬಸವ ಗುರುಮಂದಿರ ಲೋಕಾರ್ಪಣೆ ಅಂಗವಾಗಿ ನಡೆದ ಭಾನುವಾರದ ಪ್ರವಚನ ಕಾರ್ಯಕ್ರಮದಲ್ಲಿ ಇವರು ಮಾತನಾಡಿ, ಚಿತ್ರರಂಗದಲ್ಲಿ ಹೇಗೆ ಡಾ. ರಾಜಕುಮಾರ್ ಅವರು ತಮ್ಮ ನಟನಾ ಕೌಶಲ್ಯದಿಂದ ನಟ ಸಾರ್ವಭೌಮ ಎಂದು ಗುರುತಿಸಿಕೊಂಡರು ಹಾಗೆಯೇ ಶಿವಬಸವ ಶ್ರೀಗಳು ಶಿವಯೋಗದ ಸಾರ್ವಭೌಮರಾಗಿ ಈ ನಾಡಿನ ಉದ್ಧಾರಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾನ್ ಸಂತ. ಶಿವಬಸವ ಶ್ರೀಗಳು ತಮ್ಮ ಪವಾಡದಿಂದ ಈ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವರು ಎಂದರು.
ದೂರದ ಹಾವೇರಿ ಯನ್ನು ಅಥಣಿಯ ಸಪ್ತಸಾಗರಕ್ಕೆ ಬೆಸೆದ ಕೀರ್ತಿ ಶಿವಬಸವ ಶ್ರೀಗಳಿಗೆ ಸಲ್ಲುತ್ತದೆ. ಬದುಕಿನುದ್ದಕ್ಕೂ ಸಮಾಜದ ಜನರ ಉದ್ಧಾರಕ್ಕಾಗಿ ದುಡಿದು ಶಿವನನ್ನೇ ಒಲಿಸಿಕೊಂಡ ಮಹಾನ್ ಸಂತ ಅವರು. ಸಪ್ತಸಾಗರ ಗ್ರಾಮದಲ್ಲಿ ಶಿವಬಸವ ಶ್ರೀಗಳ ಗುರುಮಂದಿರ ಲೋಕಾರ್ಪಣೆ ಅತ್ಯಂತ ಖುಷಿ ನೀಡಿದೆ. ಇದೇ ರೀತಿಯಲ್ಲಿ ಮುಂದೆಯೂ ಈ ಗ್ರಾಮದಲ್ಲಿ ನಿರಂತರ ಶಿವಬಸವ ಶ್ರೀಗಳ ಕಾರ್ಯಕ್ರಮ ಜರುಗಲಿ ಎಂದು ಹಾರೈಸಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಮಾತಮಾಡಿ, ಶಿವಬಸವ ಮಹಾಸ್ವಾಮಿಜಿ ಪವಾಡ ಪುರುಷರು. ಆಧ್ಯಾತ್ಮಿಕ ಮೇರು ಪರ್ವತವಾಗಿ ಈ ನಾಡಿನ ಉದ್ಧಾರಕ್ಕಾಗಿ ಹಗಲಿರುಳು ದುಡಿದ ಸಂತ. ಅಂತಹ ಮಹಾನ್ ವ್ಯಕ್ತಿಯ ಹುಟ್ಟೂರಿನಲ್ಲಿ ಭಾವೈಕ್ಯತೆಯಿಂದ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತಸದ ಕ್ಷಣ ಎಂದರು.
ಶರಣ ವಿಚಾರ ವಾಹಿನಿ ಅಧ್ಯಕ್ಷರಾದ ಐ. ಆರ್. ಮಠಪತಿ ಮಾತನಾಡಿ. ಬಸವಾದಿ ಶರಣರ ಹಾದಿಯಲ್ಲಿ ನಡೆದ ಶಿವಬಸವ ಶ್ರೀಗಳು ಬೆಳಗಾವಿ ಪುಣ್ಯಭೂಮಿಯಿಂದ ಹಾವೇರಿ ವರೆಗೆ ತಮ್ಮ ಛಾಪು ಮೂಡಿಸಿದವರಲ್ಲಿ ಒಬ್ಬರು. ಇವರ ನೆನಪಿನಲ್ಲಿ ಸಪ್ತಸಾಗರ ಗ್ರಾಮದ ಜನ ಶಿವಬಸವ ಗುರುಮಂದಿರ ಲೋಕಾರ್ಪಣೆ ಗೊಳಿಸಿದ್ದು ಅತ್ಯಂತ ಖುಷು ವಿಚಾರ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಶಿವಬಸವರಾಜ ಬಿ. ಬೆಳಗಾವಿ ಅವರು ರಚಿಸಿದ ಶಿವಯೋಗ ಸಾರ್ವಭೌಮ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಜಿ, ಮುಖಂಡರಾದ ಸಂಜಯ್ ನಾಡಗೌಡ, ಅಶೋಕ ಐಗಿಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.