*ವಿಮಾನ ದುರಂತದಲ್ಲಿ ಸಾವನ್ನಪ್ಪಿದ ನರ್ಸ್ ಕುರಿತು ವ್ಯಂಗ್ಯವಾಡಿದ್ದ ತಹಸೀಲ್ದಾರ್ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದದಲ್ಲಿ 246 ಜನರು ಸಾವನ್ನಪ್ಪಿದ್ದಾರೆ. ವಿಮಾನ ಪತನಗೊಂಡ ದೃಶ್ಯಗಳು ರಣಭೀಕರವಾಗಿವೆ. ಘಟನೆಯಲ್ಲಿ ಸಂಭವಿಸಿದ ಸಾವು-ನೋವು, ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿದೆ.
ಇಂತಹ ನೋವಿನ ಸಂದರ್ಭವನ್ನೂ ಅಧಿಕಾರಿಯೊಬ್ಬ ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಮೂಲಕ ವಿಲಕ್ಷಣತೆ ಮೆರೆದಿದ್ದಾರೆ.
ಅಹಮದಾಬಾದ್ ನಲ್ಲಿ ನಿನ್ನೆ ನಡೆದಿದ್ದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕೇರಳ ಮೂಲದ ನರ್ಸ್ ಓರ್ವರು ಸಾವನ್ನಪ್ಪಿದ್ದಾರೆ. ರಂಜಿತಾ ಗೋಪಕುಮಾರ್ ಮೃತ ನರ್ಸ್. ರಂಜಿತಾ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡೆಪ್ಯೂಟಿ ತಹಸಿಲ್ದಾರ್ ಓರ್ವರು ವ್ಯಂಗ್ಯವಾಡಿದ್ದರು. ತಹಶೀಲ್ದಾರ್ ಅವರ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕು ಡೆಪ್ಯೂಟಿ ತಹಸೀಲ್ದಾರ್ ಪವಿತ್ರನ್ ಎಂಬುವವರು, ಕೇರಳ ಸರ್ಕಾರಕ್ಕೆ ರಜೆ ನಿಲ್ಲಿಸಿ ಹೋಗಿದ್ದಕ್ಕೆ ನರ್ಸ್ ರಂಜಿತಾ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲದೇ ಮತ್ತೊಂದು ಪೋಸ್ಟ್ ನಲ್ಲಿ ಆಕೆ ಇನ್ನೂ ಎತ್ತರಕ್ಕೆ ಏರಲಿ ಎಂದು ಬರೆದುಕೊಂಡಿದ್ದರು.
ತಹಸೀಲ್ದಾರ್ ಅವರ ಈ ಪೋಸ್ಟ್ ಗೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಅವರು ತಹಸಿಲ್ದಾರ್ ಪವಿತ್ರನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಂಜಿತಾ ಗೋಪಕುಮಾರ್ ಯುಕೆಯಲ್ಲಿ ನರ್ಸ್ ಆಗಿದ್ದರು. ರಜೆಯ ಮೇಲೆ ಕೇರಳಕ್ಕೆ ಬಂದಿದ್ದರು. ಈ ವೇಳೆ ರಂಜಿತಾ ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು.
ಆದರೆ ಯುಕೆ ಆಸ್ಪತ್ರೆಯಲ್ಲಿ ಈಗಾಗಲೇ ಮಾಡಿಕೊಂಡಿದ್ದ ಒಪ್ಪಂದವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅವರು ಯುಕೆಗೆ ಹೋಗಿಬರಲು ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಏರ್ ಇಂಡಿಯಾ ವಿಮಾನ ಅಹಮದಾಬಾದ್ ನಲ್ಲಿ ಪತನಗೊಂಡಿದೆ. ಘಟನೆಯಲ್ಲಿ ರಂಜಿತಾ ಕೂಡ ಸಾವನ್ನಪ್ಪಿದ್ದರು.