*ಪಾಲಿಕೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬಾರದು: ಕನ್ನಡ ಸಂಘಟನೆಗಳ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ 118 ದಿನಗಳಿಂದ ಕನ್ನಡ ಸಂಘಟನೆಗಳು ನಡೆಸಿರುವ ಹೋರಾಟ ಇಂದು ಹೊಸ ತಿರುವು ಪಡೆದಿದೆ.
ಪಾಲಿಕೆಯಲ್ಲಿ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಸ್ವೀಕರಿಸುವವರೆಗೂ ಪಾಲಿಕೆಗೆ ರಾಜ್ಯ ಸರಕಾರ ಯಾವದೇ ರೀತಿಯ ಅನುದಾನ ಬಿಡುಗಡೆ ಮಾಡಬಾರದೆಂದು ಗಡಿನಾಡು ಕನ್ನಡಿಗರ ಸೇನೆಯು ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಮುಂಜಾನೆ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರು ಮಹಾಪೌರರ ಹಾಗೂ ಉಪ ಮಹಾಪೌರರ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಮುಖ್ಯಮಂತ್ರಿಗಳು ಕಳೆದ ಗುರುವಾರ ಬೆಳಗಾವಿಗೆ ಬಂದಾಗ ಅವರನ್ನು ಪ್ರಥಮ ಪ್ರಜೆಯಾಗಿ ಸ್ವಾಗತಿಸಲು ಹೋಗದ ಮಹಾಪೌರರಾದ ಪ್ರೀತಿ ಕಾಮಕರ ಹಾಗೂ ಉಪ ಮಹಾಪೌರರಾದ ಹಣಮಂತ ಕೊಂಗಾಲಿ ಅವರು ಕದ್ದು ಮುಚ್ಚಿ ಮುಖ್ಯಮಂತ್ರಿಗಳನ್ನು ಭೆಟ್ಟಿಯಾಗಿ ಪಾಲಿಕೆಗೆ 250 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು
ಅವರ ನಿರ್ಲಜ್ಯ ವರ್ತನೆಗೆ ಸಾಕ್ಷಿಯಾಗಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಟೀಕಿಸಿದ್ದಾರೆ.
” ನಿಲ್ಲಿಸಿ, ನಿಲ್ಲಿಸಿ, ಬೆಳಗಾವಿ ಪಾಲಿಕೆಗೆ ಅನುದಾನ ನಿಲ್ಲಿಸಿ”ಎಂದು ಘೋಷಣೆ ಕೂಗಿದ ಸೇನೆಯ ಕಾರ್ಯಕರ್ತರು, ಕರ್ನಾಟಕ ಪರವಾದ ಗೊತ್ತುವಳಿ ಪಾಸು ಮಾಡಿ ಸರಕಾರಕ್ಕೆ ಸಲ್ಲಿಸುವವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಕಾವೇರಿಯವರಿಗೆ ಬರೆದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಬಳಿ ಹೋಗಿ ಅನುದಾನ ಕೋರುವ ಸೌಜನ್ಯವನ್ನು ತೋರದ ಮಹಾಪೌರರು ಮತ್ತು ಉಪ ಮಹಾಪೌರರು ಕರ್ನಾಟಕ ಸರಕಾರದ ಬದಲಾಗಿ ಮಹಾರಾಷ್ಟ್ರ ಸರಕಾರದಿಂದ ಅನುದಾನ ಕೇಳಬೇಕೆಂದು ಬಲರಾಮ ಮಾಸೇನಟ್ಟಿ ವ್ಯಂಗ್ಯ ಮಾಡಿದ್ದಾರೆ.
ಕನ್ನಡ ಸಂಘಟನೆಗಳು ಇನ್ನು ಮುಂದೆ ” ಬೆಳಗಾವಿ ಪಾಲಿಕೆಗೆ ಅನುದಾನ ನಿಲ್ಲಿಸಿ” ಆಂದೋಲನವನ್ನು ತೀವ್ರಗೊಳಿಸಿದ್ದು ಶೀಘ್ರವೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೆಟ್ಟಿಯಾಗಿ ಚರ್ಚೆ ನಡೆಸಲಿವೆಯೆಂದು ಮಾಸೇನಟ್ಟಿ ಪ್ರಕಟಿಸಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ ಮಾಸೇನಟ್ಟಿ,ಸಂತೋಷ ತಳ್ಳಿಮನಿ, ಎಸ್.ಎಸ್. ಮೂಕನವರ, ಮಂಜುನಾಥ, ಶಾನುರ ಮುಚ್ಚಂಡಿ, ಜ್ಯೋತಿಕುಮಾರ ಹುಲೆನ್ನವರ,ರಾಹುಲ್ ಭೋಸ್ಲೆ, ಆನಂದ ಬಿಲಾವರ, ಶಿವಾಜಿ ಗುರವ,ಸಾಗರ ಪೂಜೇರಿ, ಅನು ಎಸ್.ಆರ್ ಹಾಗೂ ವಂದನಾ ಹೊರಕೇರಿ ಮುಂತಾದವರು ಉಪಸ್ಥಿತರಿದ್ದರು.


