*ಶಿಕ್ಷಕರ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳಿಂದ 200 ಸಸಿ ನೆಡುವ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ : ಕೇವಲ ರೀಲ್ಸ್ ನಲ್ಲಿ ಪ್ರಕೃತಿ ಪ್ರೇಮ ತೋರಿಸದೆ ಸಸಿ ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಕೆಲಸವನ್ನು ಯುವ ಸಮೂಹ ಮಾಡಬೇಕು. ಗ್ರಾಮ ಹಸಿರಾಗಿದ್ದರೆ ಜನರ ಸ್ವಾಸ್ಥ್ಯ ಉತ್ತಮವಾಗಿರುತ್ತದೆ ಎಂದು ನದಿ ಇಂಗಳಗಾಂವ ಗ್ರಾಮದ ಗುರುಲಿಂಗದೇವರ ಮಠದ ಪ.ಪೂ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನದಿ ಇಂಗಳಗಾಂವ ಗ್ರಾಮದ ಸರಕಾರಿ ಹೈಸ್ಕೂಲ್ ನಲ್ಲಿ ಕಲಿತ 2008 ರ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂಗವಾಗಿ ಭಾನುವಾರ ಜರುಗಿದ ಸಸಿ ನಡುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗುರುವಂದನಾ ಕಾರ್ಯಕ್ರಮ ಎಂದರೆ ಕೇವಲ ಕಾರ್ಯಕ್ರಮ ಮಾಡಿ ಫೋಟೋ ತಗೆದುಕೊಳ್ಳುವುದು ಸಾಮಾನ್ಯ. ಆದರೆ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಶಿಕ್ಷಕರ ಸವಿನೆನಪಿಗಾಗಿ 200 ಕ್ಕೂ ಅಧಿಕ ಸಸಿ ನೆಟ್ಟಿರುವುದು ಉತ್ತಮ ಕಾರ್ಯ. ಈ ರೀತಿಯ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮ ಇನ್ನಷ್ಟು ಹೆಚ್ಚಾಗಲಿ ಎಂದು ಶ್ರೀಗಳು ಹಾರೈಸಿದರು.
ನದಿ ಇಂಗಳಗಾಂವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಚಿನ್ ಪಾಟೀಲ್ ಮಾತನಾಡಿ, ಯುವಕರು ಸೇರಿ ಪರಿಸರ ಜಾಗೃತಿ ಕುರಿತು ಅಭಿಯಾನ ಹಮ್ಮಿಕೊಂಡಿದ್ದು ಸಂತೋಷದ ಕ್ಷಣ. ಗುರುವಂದನಾ ಕಾರ್ಯಕ್ರಮದ ನೆನಪಿಗಾಗಿ ಇಡೀ ಗ್ರಾಮದಲ್ಲಿ ಸಸಿ ನೆಡುವುದು ಸಣ್ಣ ಕೆಲಸವಲ್ಲ. ಉತ್ಸಾಹಿ ಯುವಕರ ಚಿಂತನೆಗೆ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಮುಂದೆ ಇದೇ ರೀತಿಯ ಕಾರ್ಯಕ್ರಮ ಜರುಗಲಿ ಎಂದರು.
ಶಿಕ್ಷಕರ ಸವಿನೆನಪಿಗಾಗಿ 200 ಸಸಿ ನೆಡುವ ಕಾರ್ಯಕ್ರಮ
2008 ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂಗವಾಗಿ ಶಿವಯೋಗಿಗಳ ಜನ್ಮಸ್ಥಳ ನದಿ ಇಂಗಳಗಾಂವ ಗ್ರಾಮದಲ್ಲಿ 200 ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಬರುವ ಅಕ್ಟೋಬರ್ ನಲ್ಲಿ 2008 ರ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ.
ಈ ವೇಳೆ ಯುವಕರಾದ ವಿನಾಯಕ ಮಠಪತಿ, ಮಹಾಂತೇಶ್ ಮಾಂಗ, ರಾಜು ಕಾಂಬಳೆ, ರಾಜು ಬೆವನೂರ, ಚೇತನ ಯಡೂರು, ಸಿದ್ದು ಮಿರ್ಜಿ, ಸಿದ್ದು ರಾಚಗೌಡರ, ಬಸವರಾಜ ಸಂತಿ, ಬಸವರಾಜ ಪಾಟೀಲ್, ರಮೇಶ್ ಮೊಕಾಶಿ, ಮೀರಾಸಾಬ ಬಡೆ, ಶ್ರೀಶೈಲ ಸಾವಂತ್ರಿ, ಕಾಕಾಸಾಹೇಬ್ ಪಾಟೀಲ್, ಸಚಿನ್ ಘೋರ್ಪಡೆ, ಭಾರತಿ ಡಾಬೋಳಿ, ಕವಿತಾ ಮಠಪತಿ, ಸುಪ್ರಿಯಾ ಚನಗೌಡರ, ಕಸ್ತೂರಿ ಚನ್ನಣ್ಣವರ, ಸುನಂದಾ ಚನ್ನನ್ನವರ, ಪೂರ್ಣಿಮಾ ಚನಗೌಡರ ಸೇರಿದಂತೆ ಗ್ರಾಮಸ್ಥರು ಹಾಗೂ ಹಿರಿಯರು ಉಪಸ್ಥಿತರಿದ್ದರು.




