*30 ವರ್ಷಗಳ ಹಿಂದೆ ಲಂಚ ಪಡೆದಿದ್ದಕ್ಕೆ ನಿವೃತ್ತಿಯಾದ 10 ವರ್ಷಗಳ ಬಳಿಕ ಜೈಲು ಸೇರಿದ ಗ್ರಾಮ ಲೆಕ್ಕಾಧಿಕಾರಿ*

ಪ್ರಗತಿವಾಹಿನಿ ಸುದ್ದಿ: 30 ವರ್ಷಗಳ ಹಿಂದೆ ಕೇವಲ 500 ರೂಪಾಯಿ ಲಂಚ ಪಡೆದಿದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ನಿವೃತ್ತಿಯಾಗಿ ಹತ್ತು ವರ್ಷಗಳ ಬಳಿಕ ಜೈಲು ಸೇರಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಾಗೇಶ್ ಶಿವಂಗೇಕರ್ ಹಿಂಡಲಗಾ ಜೈಲು ಸೇರಿರುವ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಇವರ ವಿರುದ್ಧ ದೂರು ದಾಅಖಲಿಸಿದ್ದ ದೂರುದಾರ ಸಾವನ್ನಪ್ಪಿ ಐದು ವರ್ಷಗಳು ಕಳೆದಿವೆ. ಇದೀಗ ಆರೋಪಿ ಜೈಲು ಸೇರಿದ್ದಾರೆ.
ನಾಗೇಶ್ ಶಿವಂಗೇಕರ್ 30 ವರ್ಷಗಳ ಹಿಂದೆ ಪಹಣಿ ಪತ್ರ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬೆಳಗಾವಿಯ ಕಡೋಲಿ ಗ್ರಾಮದ ಲಕ್ಷ್ಮಣ್ ಕಟಾಂಬಳೆ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. 2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದ ನಾಗೇಶ್ ಶಿವಂಗೇಕರ್ ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂ ಕೋರ್ಟ್ ನಿಂದ ಲೋಕಾಯುಕ್ತ ಪರ ತೀರ್ಪು ಪ್ರಕಟವಾಗಿದೆ.
ಈ ಹಿನ್ನೆಲೆಯಲ್ಲಿ ನಿವೃತ್ತಿಯಾಗಿ 10 ವರ್ಷಗಳ ಬಳಿಕ ನಾಗೇಶ್ ಶಿವಂಗೇಕರ್ ಮತ್ತೆ ಜೈಲು ಸೇರಿದ್ದು, ಬೆಳಗಾವಿ ಹಿಂಡಲಗಾ ಜೈಲುಪಾಲಾಗಿದ್ದಾರೆ.