*ಹಾಸ್ಟೆಲ್ ನಲ್ಲಿ ಸಂಶಯಾಸ್ಪದ ಆಹಾರ ಸೇವನೆ: ತನಿಖೆ ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಸಂಶಯಾಸ್ಪದ ಆಹಾರ ಸೇವಿಸಿದ ಪರಿಣಾಮ ಸುಮಾರು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ವರದಿಯಾದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಕೆಲವೊಬ್ಬರಿಗೆ ಸ್ವಲ್ಪಮಟ್ಟಿನ ರೋಗಲಕ್ಷಣಗಳು ಕಂಡು ಬಂದಿದ್ದವು. ಆದರೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಈಗ ಸುರಕ್ಷಿತವಾಗಿದ್ದು, ಆಸ್ಪತ್ರೆಯಿಂದ ಮರಳಿ ಕಳಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ದಯಾನಂದ ಅವರು ಹೇಳಿದ್ದಾರೆ.
ಸ್ವಲ್ಪ ತೊಂದರೆ ಕಂಡುಬಂದಿದ್ದ 15 ವಿದ್ಯಾರ್ಥಿಗಳಿಗೆ ಆರೋಗ್ಯ ನಿಗಾ ವಹಿಸುವುದಕ್ಕಾಗಿ ಒಂದು ದಿನ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಉಳಿದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ತುರ್ತು, ಔಷಧ ಹಾಗೂ ಮೈಕ್ರೊಬಯಾಲಾಜಿ ವಿಭಾಗಗಳ ಸಕಾಲಿಕ ಕಾರ್ಯದಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಅಲ್ಲದೇ ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ದಯಾನಂದ ಹಾಗೂ ಆಸ್ಪತ್ರೆಯ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಮುಂದಾಗಬಹುದಾದ ಅನಾಹುತವನ್ನು ಯಶಸ್ವಿಯಾಗಿ ತಪ್ಪಿಸಲಾಗಿದೆ. ಅಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಆಹಾರ ವಿಷವಾಗುವ ಮೂಲ ಮತ್ತು ಕಾರಣದ ಕುರಿತು ವಿವರವಾದ ತನಿಖೆಯನ್ನು ತಕ್ಷಣವೇ ಪ್ರಾರಂಭಿಸಲಾಗುತ್ತಿದೆ ಎಂದು ಡಾ. ಎಂ. ದಯಾನಂದ ಅವರು ಭರವಸೆ ನೀಡಿದರು.
ವಿಶ್ವವಿದ್ಯಾನಿಲಯ ಮತ್ತು ಆಸ್ಪತ್ರೆ ಆಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆಹಾರ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಆರೋಗ್ಯ ಹಾಗೂ ಕಲ್ಯಾಣದ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬದ್ಧತೆಯನ್ನು ಸದಾ ಕಾಪಾಡಲಾಗುತ್ತದೆ. ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.




