
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಕೇವಲ ಅನರ್ಹರ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಿ, ಅವರಿಗೆ ಎಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಎಂದು ಆಹಾರ ಇಲಾಖೆಯ ಸಚಿವ ಮುನಿಯಪ್ಪ ಅವರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ಕಾರಣದಿಂದ ಶೇ.15ರಷ್ಟು ಜನರದ್ದು ಮಾತ್ರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಆದರೆ ಇದನ್ನ ಸಹ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರದ್ದು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಒಂದು ಫಲಾನುಭವಿಗೂ ಮೋಸ ಆಗುವುದಿಲ್ಲ. ಸದ್ಯದಲ್ಲಿ ಎಣ್ಣೆ ಬೇಳೆ, ಕಾಳುಗಳು ಸೇರಿದಂತೆ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನ ಸಹ ಈ ಪಡಿತರದಲ್ಲಿ ಸೇರಿಸಲಾಗುತ್ತದೆ ಎಂದಿದ್ದಾರೆ.
ಸರ್ಕಾರದ ಮಾನದಂಡಗಳ ಪ್ರಕಾರ, ಸುಮಾರು 7.76 ಲಕ್ಷ ಪಡಿತರ ಚೀಟಿಗಳು ಅನರ್ಹ ಎಂದು ಪಟ್ಟಿ ಮಾಡಲಾಗಿದೆ. ಕುಟುಂಬ ತಂತ್ರಾಂಶ’ದ ಅನ್ವಯ 13.87 ಲಕ್ಷಕ್ಕೂ ಅಧಿಕ ಕಾರ್ಡ್ಗಳು ಅನರ್ಹರ ಕೈಯಲ್ಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಕಾರ್ಡ್ಗಳನ್ನು ರದ್ದುಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ರಾಜ್ಯದಲ್ಲಿನ 2 ಲಕ್ಷಕ್ಕೂ ಅಧಿಕ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿದ್ದ ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ ಎನ್ನಲಾಗಿದೆ. ಸುಮಾರು 4.80 ಲಕ್ಷ ಅನರ್ಹ ಫಲಾನುಭವಿಗಳು ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ಹೊರಬಿದ್ದಿದ್ದಾರೆ. ನಕಲಿ ಕಾರ್ಡ್ಗಳ ಪತ್ತೆ ಮತ್ತು ಪಡಿತರ ಸೋರಿಕೆ ತಡೆಯುವ ಉದ್ದೇಶದಿಂದ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ರದ್ದಾದ ಅರ್ಹ ಫಲಾನುಭವಿಗಳು 45 ದಿನಗಳೊಳಗೆ ಸಂಬಂಧಪಟ್ಟ ತಹಶೀಲ್ದಾರ್ಗೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಕಾರ್ಡ್ ಪುನಃ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.




