
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಮೊದಲು ಫಜಿಯೋಥೆರಪಿ ಇಲ್ಲದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಆಟವಾಡುವದು ತುಂಬಾ ಕಷ್ಟಕರವಾಗಿತ್ತು. ಫಿಜಿಯೋಥೆರಪಿ ಈಗ ಸಾಕಷ್ಟು ಆಧುನಿಕರಣಗೊಂಡಿದ್ದು, ಕ್ರೀಡೆಗಳಲ್ಲಿ ತುಂಬಾ ಅತ್ಯಗತ್ಯವಾಗಿದ್ದು, ಪ್ರಾಮುಖ್ಯತೆ ಸಾಕಷ್ಟು ಹೆಚ್ಚಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ ಹಿಡಿದು ಹಿರಿಯ ಆಟಗಾರರು, ದೇಶಿಯ ಆಟಗಾರರಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ಆಟಗಾರರಿಗೆ ಫಿಜಿಯೋಥೆರಪಿಸ್ಟ್ ಅತ್ಯಗತ್ಯ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಅರ್ಜುನ ಮತ್ತು ಪದ್ಮಶ್ರೀ ಪುರಸ್ಕೃತ ಡಯಾನಾ ಎಡುಲ್ಜಿ ಅವರಿಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಹೆರನ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಫಿಜಿಯೋಥೆರಪಿ ಸಮ್ಮೇಳನ ಪರ್ಲ್ ಫಿಜಿಯೋಕಾನ್ 2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಫಿಸಿಯೋಥೆರಪಿ ಖಂಡಿತವಾಗಿಯೂ ಯುವಕ ಯುವತಿಯರ ವೃತ್ತಿಜೀವನ. ಸಮಾನತೆಯ ವಿಶಾಲ ವ್ಯಾಪ್ತಿಯನ್ನು ಇದು ಹೊಂದಿದೆ. ಪ್ರತಿಯೊಬ್ಬ ಆಟಗಾರರು ಫಿಜಿಯೊಥೆರಪಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಇಂದು ಮಹಿಳಾ ತಂಡದಲ್ಲಿ15 ಆಟಗಾರರಿದ್ದು, ಅವರನ್ನು ಸದೃಢಗೊಳಿಸಲು ತೆರೆಮರೆಯಲ್ಲಿ ಸುಮಾರು 15 ರಿಂದ 20 ಜನರು ಕಾರ್ಯನಿರ್ವಹಿಸುತ್ತಾರೆ. ಆಟಗಾರರನ್ನು ಸಧೃಡಗೊಳಿಸಿ ಮತ್ತೆ ಮೈದಾನಕ್ಕೆ ತರಲು ನಿರಂತರವಾಗಿ ಪ್ರಯತ್ನಿಸಬೇಕಾಗುತ್ತದೆ. ಬೆಳಿಗ್ಗೆ ಸಂಜೆ, ಬಹುಶಃ ಮಧ್ಯರಾತ್ರಿಯೂ ಸಹ ನಿರಂತರವಾಗಿ ನಡೆಯುವದರಿಂದ ತುಂಬಾ ಕಷ್ಟದ ಕೆಲಸ ಫಿಜಿಯೊಥೆರಪಿ. 80ರ ದಶಕದಲ್ಲಿ ನಾನು ಮೈದಾನಕ್ಕೀಳಿಯಬೇಕಾದರೆ ಫಿಜಿಯೊಥೆರಪಿ ವೈದ್ಯರ ಚಿಕಿತ್ಸೆ ತುಂಬಾ ಪರಿಣಾಮಕಾರಿಯಾಗತ್ತು. ಕೆಲ ಫಿಜಿಯೋಥೆರಪಿಸ್ಟ್ ರನ್ನು ನಾನು ಈಗಲೂ ಕೂಡ ನೆನೆಯುತ್ತೇನೆ ಎಂದು ಸ್ಮರಿಸಿದರು.
ಕಾಹೆರನ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಶೀಘ್ರದಲ್ಲಿಯೇ ಗೋವಾದಲ್ಲಿಯೇ ಫಿಜಿಯೋಥೆರಪಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅವಶ್ಯವಿರುವ ಆಸ್ಪತ್ರೆ, ತರಬೇತಿ ಕೇಂದ್ರಗಳ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಚಿಕಿತ್ಸೆ, ತರಬೇತಿ ನೀಡುವದು ನಮ್ಮ ಧ್ಯೇಯ ಎಂದ ಅವರು, ಹುಬ್ಬಳ್ಳಿಯಲ್ಲಿ ನಿರ್ಮಿಸಲಾದ ಸಾವಿರ ಹಾಸಿಗೆಗಳ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಜನಸೇವೆಗೆ ಅರ್ಪಿಸಲಾಗುವದು ಎಂದ ಅವರು, ಕೃಷಿ, ಸಂಶೋಧನೆ, ಆರೋಗ್ಯ, ಶಿಕ್ಷಣದ ಮೂಲಕ ಸಮಾಜದ ಏಳ್ಗೆಯನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ಲಭಿಸಬೇಕೆನ್ನುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸ್ಥಾಪಿಸಬೇಕೆಂದು ಹೋರಾಡುತ್ತಿದ್ದೆ ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತಕೇರ ಕೌನ್ಸಿಲ್ನ ಚೇರ್ಮನ್ ಡಾ. ಇಫ್ತಿಕರ ಅಲಿ, ಭಾರತ ಸರಕಾರದ ಫಿಜಿಯೊಥೆರಪಿ ಪ್ರೊಪೆಶನಲ್ ಕೌನ್ಸಿಲ್ನ ಸದಸ್ಯರಾದ ಡಾ. ಅಲಿ ಇರಾನಿ, ಡಾ. ವಿ ಪಿ ಗುಪ್ತಾ,ಡಾ. ಆಶಿಶ್ ಕಕ್ಕಡ, ಡಾ. ಕೇತನ ಭಾಟಿಕರ ಅವರು ಮಾತನಾಡಿದರು.
ವೇದಿಕೆ ಮೇಲೆ ಕಾಹೆರ ರಜಿಸ್ಟ್ರಾರ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಸಂಜೀವಕುಮಾರ, ಡಾ. ವಿಜಯ ಕಾಗೆ, ಡಾ. ದೀಪಾ ಮೆಟಗುಡ್ ಉಪಸ್ಥಿತರಿದ್ದರು. ಡಾ. ಸಂತೋಷ ಮೆಟಗುಡ್ ಸ್ವಾಗತಿಸಿದರು. ಡಾ. ಗಣೇಶ ಬಿ ಆರ್ ವಂದಿಸಿದರು.

