*ಅವಶ್ಯಕತೆಗಷ್ಟೇ ಇಂಗ್ಲಿಷ್ ಇರಲಿ, ಕನ್ನಡಕ್ಕೇ ಪ್ರಾಧಾನ್ಯತೆ ಸಿಗಲಿ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಎಂ.ಕೆ.ಹುಬ್ಬಳ್ಳಿ: ಕನ್ನಡ ಭಾಷೆಗೆ ಅತ್ಯಂತ ಪ್ರಾಚೀನ ಭಾಷೆ. 2 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ನಮ್ಮ ಮಾತೃಭಾಷೆ ಶ್ರೀಮಂತಿಕೆಯಿಂದ ಕೂಡಿದೆ. ವಚನ ಸಾಹಿತ್ಯದ ಮೂಲಕ ಶರಣರು ಕನ್ನಡವನ್ನು ಕಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ರಾಣಿ ಶುರ್ಸ್ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪದಲ್ಲಿ ಭಾನುವಾರ ಜರುಗಿದ ಚನ್ನಮ್ಮನ ಕಿತ್ತೂರು ತಾಲೂಕಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಆಗ್ಲ ಭಾಷೆ ಅನಿವಾರ್ಯವಾಗಿದ್ದರೂ, ಅವಶ್ಯಕತೆಗಷ್ಟೆ ಇದರ ಬಳಕೆಯಾಗಲಿ. ಮಾತೃಭಾಷೆ ಕನ್ನಡವನ್ನೇ ಮೊದಲ ಭಾಷೆಯಾಗಿ ಉಳಿಸಿಕೊಳ್ಳಿ. ಪಾಲಕರು ಮಕ್ಕಳಿಗೆ ಕನ್ನಡದಲ್ಲೇ ಮಾತು ಕಲಿಸಿ ಎಂದರು.

ಸಮ್ಮೇಳನಾಧ್ಯಕ್ಷರಾದ ಡಾ. ಪಾಲಾಕ್ಷ ಶಿವಯೋಗೀಶ್ವರರು ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಎಂ.ಎಂ.ಸಂಗಣ್ಣವರ ಬರೆದ ‘ಕುಂಭಕರ್ಣ ಬೇಡಿದ ವರ’, ಮಂಜುನಾಥ ಕಳಸಣ್ಣವರ ಬರೆದ ‘ಕಿತ್ತೂರು ಸಂಸ್ಥಾನದ ರಾಣಿಯರ’, ಗಜಾನನ ಸೊಗಲನ್ನವರ ಬರೆದ ‘ಸೊಗಲ ಸೋಮೇಶ್ವರನ ವಚನಗಳು’, ಸಿಆರ್ಪಿ ವಿನೋದ ಪಾಟೀಲ ಬರೆದ ‘ಸ್ಕೂಲ್ ಬೆಲ್ ಮಕ್ಕಳ ಕಥಾ ಸಂಕಲನ’, ಸುರೇಶ ಕರವಿನಕೊಪ್ಪ ಬರೆದ ರೈತರ ಬಗೆಗಿನ ಕೃತಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಶ್ರೀ ಪಾಲಾಕ್ಷ ಶಿವಯೋಗಿಶ್ವರರು, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಮಂಗಳಾ ಮೆಟಗುಡ್ಡ, ಎಸ್.ಬಿ.ದಳವಾಯಿ, ಪ್ರಕಾಶ ಕೊಡ್ಲಿ, ಶಿವನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.




