*ಸ್ಮಶಾನ ಭೂಮಿ ಅತಿಕ್ರಮಣ: ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡೋಂಬಾರ ಸಮಾಜದ ಪೂರ್ವಜರ ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಉಧ್ಯಾನ ವನದಿಂದ ಆರಂಭವಾದ ಪ್ರತಿಭಟನೆ ಡಿಸಿ ಕಚೇರಿ ವರೆಗೆ ಹೋಗಿ ಮನವಿ ಸಲ್ಲಿಸಲಾಯಿತು.
ಖಾನಾಪುರ ಪಟ್ಟಣದ ಶಾಹೂನಗರದಲ್ಲಿರುವ ಡೋಂಬಾರ ಸಮಾಜದ ಪೂರ್ವಜರ ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಖಾನಾಪುರ ಪಟ್ಟಣದ ಸರ್ವೆ ನಂಬರ್ 93/ಎ 1 ರಲ್ಲಿರುವ ಈ ಜಾಗದಲ್ಲಿ ಸುಮಾರು 300 ವರ್ಷಗಳಿಂದ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿತ್ತು. ಆದರೆ, ಈಗ ಮುಚ್ಚಿಹೋಗಿರುವ ಕಂಪನಿಯ ಹೆಸರಿನಲ್ಲಿ ಸಮಾಧಿಗಳ ಮೇಲೆಯೇ ಅಕ್ರಮವಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅತಿಕ್ರಮಣದಾರರು ಮರಗಳನ್ನು ಕಡಿದು ಸ್ಮಶಾನದ ಜಾಗವನ್ನು ಕಬಳಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತಿ ಮತ್ತು ತಹಶೀಲ್ದಾರರಿಗೆ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೋಷಿತ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ಸಿಗಬೇಕಾದ ಗೌರವಯುತ ಅಂತ್ಯಸಂಸ್ಕಾರದ ಹಕ್ಕು ಉಲ್ಲಂಘನೆಯಾಗುತ್ತಿದೆ,” ಎಂದು ಆರೋಪಿಸಲಾಯಿತು.

ಖಾನಾಪುರದ ಡೋಂಬಾರಾ ಮಾಳ ಶಾಹೂನಗರದಲ್ಲಿ ಯಾವುದೇ ಅನುಮತಿಯಿಲ್ಲದೇ, ವಸತಿಗೆ ಬಂದು ಎಲ್ಲವನ್ನು ತೆರವುಗೊಳಿಸಲಾಗಿದೆ. ಮರಗಳನ್ನು ಕಡಿಯಲಾಗಿದೆ. ಇದರಿಂದಾಗಿ ಬಡ ಜನರು ತೊಂದರೆಗಿಡಾಗಿದ್ದಾರೆ. ತಹಶೀಲ್ದಾರರಾಗಲಿ ಪೊಲೀಸರಾಗಲಿ ಪಂಚಾಯಿತಿ ಅಧಿಕಾರಿಗಳಾಗಲಿ ಯಾರೂ ಕೂಡ ಬಂದು ಪರಿಶೀಲಿಸಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ದಲಿತರಿಗೆ ಅನ್ಯಾಯವಾಗುತ್ತಿದೆ.
ಖಾನಾಪೂರ ಪಟ್ಟಣದಲ್ಲಿ ದಲಿತರ ಸ್ಮಶಾನಭೂಮಿಯ ಜಾಗೆಯನ್ನು ಕೂಡ ಬಿಡುತ್ತಿಲ್ಲ. ಸರ್ಕಾರಿ ಗಾಯರಾಣ ಜಾಗೆಯನ್ನು ಖಾಸಗಿ ವ್ಯಕ್ತಿಗಳು ಖರೀದಿಸಿದ್ದು ಹೇಗೆ? ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ಇತ್ಯರ್ಥ್ಯಗೊಳಿಸದಿದ್ದರೇ, ಅಧಿಕಾರಿಗಳ ಮನೆ ಮುಂದೆ ಪ್ರತಿಭಟಿಸಬೇಕಾಗುತ್ತದೆ. ಜಿಲ್ಲಾಡಳಿತದ ಕಚೇರಿ ಎದುರು ಶವ ತರುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

