*ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ: ಡಿಎಂಕೆಗೆ ಸೇರ್ಪಡೆಯಾದ ಮಾಜಿ ಸಿಎಂ ಪನ್ನೀರ್ ಸೆಲ್ವಂ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮಾಜಿ ಸಿಎಂ ದಿ.ಜಯಲಲಿತಾ ಅವರ ಅತ್ಯಾಪ್ತ, ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಎಐಎಡಿಎಂಕೆ ಪಕ್ಷದ ಬದ್ಧ ವಿರೋಧಿಯಾಗಿದ್ದ ಡಿಎಂಕೆ ಪಕ್ಷವನ್ನು ಮಾಜಿ ಸಿಎಂ ಪನ್ನೀರ್ ಸೆಲ್ವಂ ಸೇರ್ಪಡೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಜಯಲಲಿತಾ ನಿಧನದ ಬಳಿಕ ಪನ್ನೀರ್ ಸೆಲ್ವಂ ತಮಿಓಉನಾಡು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಮೂರು ಬಾರಿ ತಮಿಳುನಾಡು ಸಿಎಂ ಆಗಿದ್ದರು. ಎಐಎಡಿಎಂಕೆಯ ಕಡು ವೈರಿ ಪಕ್ಷ ಎಂದೇ ಹೇಳಲಾಗುವ ಡಿಎಂಕೆಗೆ ಪನ್ನೀರ್ ಸೆಲ್ವಂ ಸೇರ್ಪಡೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಡಿಎಂಕೆ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ಪನ್ನೀರ್ ಸೆಲ್ವಂ ಡಿಎಂಕೆಗೆ ಸೇರ್ಪಡೆಯಾದರು. ಈ ವೇಳೆ ಸ್ಟಾಲಿನ್ ಪುತ್ರ, ಡಿಸಿಎಂ ಉದಯನಿಧಿ ಸ್ಟಾಲಿನ್ ಕೂಡ ಉಪಸ್ಥಿತರಿದ್ದರು.
ಪನ್ನೀರ್ ಸೆಲ್ವಂ ಅವರೊಂದಿಗೆ ಅವರ ಅಪಾರ ಬೆಂಬಲಿಗರು ಕೂಡ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.



