
ಪ್ರಗತಿವಾಹಿನಿ ಸುದ್ದಿ: ಕಳೆದ ಹಲವು ತಿಂಗಳುಗಳಿಂದ ಪೊಲೀಸ್ಗೆ ಚಳಿಹಣ್ಣು ತಿನ್ನಿಸಿ, ಕಾಡನ್ನೇ ಆಶ್ರಯವಾಗಿಸಿಕೊಂಡು ವಾಸವಾಗಿದ್ದ ಕುಖ್ಯಾತ ರೌಡಿಶೀಟರ್ ಹಾಗೂ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿ ಆಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಶಿರಸಿ ತಾಲ್ಲೂಕಿನ ಮಳಲಿ ನಿವಾಸಿ ಅರುಣ ಅಲಿಯಾಸ್ ಅರ್ಜುನ್ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಈತನನ್ನು ಹುಡುಕುತ್ತಿದ್ದರು.
ಬಂಧಿತ ಅರ್ಜುನ್ ಮೇಲೆ ವಿವಿಧ ಕೇಸ್ ಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಈತನ ಮೇಲೆ ಇರುವ ಪ್ರಮುಖ ಆರೋಪಗಳು ಇವು:
- ಪೋಕ್ಸೋ (POCSO): ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ.
- ಕೋಲೆ ಯತ್ನ: ಸಾರ್ವಜನಿಕರು ಹಾಗೂ ವಿರೋಧಿಗಳ ಮೇಲೆ ಜೀವಕ್ಕೆ ಅಪಾಯ ಉಂಟುಮಾಡುವ ದಾಳಿ ನಡೆಸಿದ ಆರೋಪ.
- ಮಹಿಳೆಯರ ಪೀಡನೆ: ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯಕರವಾಗಿ ಪೋಸ್ಟ್ ಹಾಕಿ ಮಾನಹಾನಿ ಮಾಡಿದ ಪ್ರಕರಣಗಳು.
- ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆ ದೈಹಿಕ ದಾಳಿ ನಡೆಸಿದ ಆರೋಪ.
- ಮೋಸ ಹಾಗೂ ವಂಚನೆ: ಸಾರ್ವಜನಿಕರಿಗೆ ಹಣಕಾಸು ಸಂಬಂಧಿತ ನಂಬಿಕೆ ದ್ರೋಹದ ಕೃತ್ಯಗಳಲ್ಲಿ ತೊಡಗಿದ್ದ ಆರೋಪಗಳು.
ನವೆಂಬರ್ 2024ರಿಂದ ತಲೆಮರೆಸಿಕೊಂಡಿದ್ದ ಈತನನ್ನು ಶಿರಸಿ ಗ್ರಾಮೀಣ ಪೊಲೀಸರು ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ವಾಂಟೆಡ್ ಆಗಿದ್ದ ಹಿನ್ನೆಲೆಯಲ್ಲಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು. ಈತನ ವಿರುದ್ಧ ನ್ಯಾಯಾಲಯವು ಮೂರು ವಾರಂಟ್ ಜಾರಿಗೊಳಿಸಿದ್ದು, ಒಂದು ಪ್ರಕರಣದಲ್ಲಿ ಪೋಕ್ಸೋ ಅಪರಾಧಿ ಆಗಿಯೂ ಗುರುತಿಸಲಾಗಿದೆ.
ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಈತನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದಾಗ್ಯೂ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾರ್ಚರಣೆ ನಡೆಸಿದ ಸಾಹಸಿ ತಂಡದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ರಮೇಶ್ ಹೊಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ತಂಡದಲ್ಲಿ ಪಿಎಸ್ಐ ಸಂತೋಷ ಕುಮಾರ್ ಸೇರಿದಂತೆ ಪ್ರಕಾಶ ತಳವಾರ್, ಗಣಪತಿ ನಾಯ್ಕ್, ವಿಶ್ವೇಶ್ವರ ಹೆಗಡೆ ಹಾಗೂ ಇತರ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಬಂಧಿತ ರೌಡಿಶೀಟರ್ ಮಳಲಿ ಅರುಣ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



