*ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಸಚಿವರು: ಮತ್ರಿಗಳ ವಿರುದ್ಧ ಗರಂ ಆಗಿ ಕಲಾಪ ನಡೆಸದೇ ಹೊರ ನಡೆದ ಸ್ಪೀಕರ್*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರ ಕೊಡಲು ವಿಫಲರಾಗಿದ್ದು, ಸರ್ಕಾರದ ವಿರುದ್ಧ ಅಸಮಾಧಾನಗೊಂಡ ಸ್ಪೀಕರ್ ಯು.ಟಿ.ಖಾದರ್, ಕಲಾಪ ನಡೆಸದೇ ಎದ್ದು ಹೊರನಡೆದ ಘಟನೆ ನಡೆದಿದೆ.
ಶಾಸಕರ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲರಾಗಿದ್ದಾರೆ. ಇದರಿಂದ ಗರಂ ಆದ ಸ್ಪೀಕರ್ ಯು.ಟಿ.ಖಾದರ್, ಸಚಿವರ ಕಾರ್ಯ ವೈಖರಿ ಕಂಡು ತರಾಟೆಗೆ ತೆಗೆದುಕೊಂಡರು.
230 ಲಿಖಿತ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದೆ. ಉತ್ತರಗಳನ್ನು ನಿಡುವಂತೆ ಮೊನ್ನೆಯೇ ಸಚಿವರಿಗೆ ಹೇಳಿದ್ದೇವೆ. ಸದನ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ, ಶಾಸಕರ ಸಮಸ್ಯೆಗಳಿಗಾಗಿ. ಎಲ್ಲಾ ಪಕ್ಷಗಳ ಶಾಸಕರು ಪ್ರಶ್ನೆಗಳನ್ನು ಕೇಳುತ್ತಾರೆ. ನಿಯಮಾವಳಿಗಳ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿಲ್ಲವೆಂದರೆ ಹೇಗೆ? ಸಚಿವರು ಸರಿಯಾದ ಸಮಯಕ್ಕೆ ಸದನಕ್ಕೆ ಬರುತ್ತಿಲ್ಲ. ಹೀಗಾದರೆ ಸದನ ನಡೆಸುವುದಾದರೂ ಹೇಗೆ? ಎಂದು ಕಿಡಿಕಾರಿದರು.
ಈ ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಬಾರಿ ಸೂಚನೆ ನೀಡಿದ್ದೇನೆ. ಈಗ ಐದನೇ ಬಾರಿ ಸೂಚಿಸಿದರೂ ಸಚಿವರುಗಳು ಬಂದಿಲ್ಲ. ಸಚಿವರು ಬಂದು ಸ್ಪಷ್ಟನೆ ನೀಡುವವರೆಗೂ ಸದನ ನಡೆಸುವುದಿಲ್ಲ ಎಂದು ಸ್ಪೀಕರ್ ಪೀಠದಿಂದ ಎದ್ದು ಹೊರನಡೆದರು.




