
ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆಗಾಗಿ ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿ ಹತ್ಯೆ ಮಾಡಿರುವ ಘಟನೆ ದೇಶವನ್ನೆ ಬೆಚ್ಚಿ ಬಿಳಿಸುವಂತೆ ಮಾಡಿದೆ.
ಹರಿಯಾಣದ ಗುರುಗ್ರಾಮ್ನಲ್ಲಿ ಈ ಘಟನೆ ನಡೆದಿದೆ. ಕಾಜಲ್ ಹತ್ಯೆಯಾದ ಪತ್ನಿ. ಅರುಣ್ ಹತ್ಯೆಗೈದ ಆರೋಪಿ. ರೇಡಿಯಾಲಜಿಸ್ಟ್ ಆಗಿರುವ ಅರುಣ್ ಶರ್ಮಾ ಮತ್ತು ನರ್ಸ್ ಆಗಿದ್ದ ಕಾಜಲ್ ಗುರುಗ್ರಾಮ್ನ ನರ್ಸಿಂಗ್ ಹೋಂನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟು ಕಳೆದ ನವೆಂಬರ್ನಲ್ಲಿ ಮದುವೆಯಾಗಿದ್ದರು. ಬಳಿಕ ಪತಿ-ಪತ್ನಿ ನಡುವೆ ಕ್ಷುಲ್ಲಕ ವಿಷಯಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ವರದಕ್ಷಿಣೆ ಕಿರುಕುಳ ಕೊಟ್ಟು ಆಕೆಯ ಮೇಲೆ ಅರುಣ್ ಹಲ್ಲೆ ನಡೆಸುತ್ತಿದ್ದ ಎಂದು ಕಾಜಲ್ ಕುಟುಬಂಸ್ಥರು ಆರೋಪಿಸಿದ್ದಾರೆ.
ಮದ್ಯ ಸೇವನೆ ಮಾಡಿದ್ದ ಅರುಣ್, ಕಾಜಲ್ಗೆ ದೈಹಿಕವಾಗಿ ಹಲ್ಲೆ ಮಾಡಿದ್ದ. ಮರುದಿನ ಮುಂಜಾನೆ ಅರುಣ್ ಕಾಜಲ್ ಜೊತೆ ಮಾತನಾಡಬೇಕೆಂದು ಕರೆದೊಕೊಂಡು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸ್ವಲ್ಪ ಸಮಯದ ನಂತರ, ಕಾಜಲ್ ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಕೂಡಲೇ ಕುಟುಂಬಸ್ಥರು ಕಾಜಲ್ಳನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಆಕೆಯ ಉಸಿರು ನಿಂತುಹೋಗಿತ್ತು
ಇನ್ನು ಮನೆಯ ಶೌಚಾಲಯದಲ್ಲಿ ಸಿರಿಂಜ್ ಸಿಕ್ಕಿದ್ದು, ಅರುಣ್ ಕಾಜಲ್ಗೆ ವಿಷದ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಬೆಹ್ತಾ ಹಾಜಿಪುರದ ಮೂಲದ ಅರುಣ್ನನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಇನ್ನು ಅರುಣ್ ಕಾಜಲ್ಗೆ ವಿಷದ ಇಂಜೆಕ್ಷನ್ ನೀಡಿ ಹತ್ಯೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.


