*ಟಿಟಿಡಿ ಮಾದರಿಯಲ್ಲಿ ಬೆಳಗಾವಿಯಲ್ಲಿ ಬಾಲಾಜಿ ದೇವಸ್ಥಾನ ನಿರ್ಮಾಣ: ನರೇಶ್’ಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಿರುಪತಿ ಬಾಲಾಜಿ ಮಾದರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ದೇವಸ್ಥಾನ ನಿರ್ಮಾಣ ವಾಗಲಿದೆ ಎಂದು ಬಾಲಾಜಿ ಟ್ರಸ್ಟ್ ನ ಸದಸ್ಯ ನರೇಶ್’ಕುಮಾರ್ ತಿಳಿಸಿದರು.
ಬೆಳಗಾವಿ ನಗರದ ರೆಡ್ಡಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಶೀಘ್ರದಲ್ಲೇ 100 ಕೋಟಿ ವೆಚ್ಚದಲ್ಲಿ ತಿರುಪತಿ ಬಾಲಾಜೀ ದೇವಸ್ಥಾನವನ್ನು ಮುಂಬರುವ 2 ವರ್ಷಗಳಲ್ಲಿ ನಿರ್ಮಿಸಲಾಗುವುದು. ಕರ್ನಾಟಕದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ರೆಡ್ಡಿ ಸಮಾಜದವರು 7 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಇದು ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ.
ಬೆಳಗಾವಿ ನಗರದ ಹೊರ ವಲಯದ ಕೋಳಿಕೊಪ್ಪ ಗ್ರಾಮದ ಬೆಟ್ಟದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣವಾಗಲಿದೆ.
ಸದ್ಯ ಬೆಳಗಾವಿಯಲ್ಲಿ ಸುಮಾರು 2 ವರ್ಷಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನ, ಕಾರ್ಯಾಲಯ ನಿರ್ಮಾಣ, ದೂರದಿಂದ ಭಕ್ತರಿಗೆ ತಂಗುವ ವ್ಯವಸ್ಥೆ, ಅನ್ನದಾನ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು. ಇದಕ್ಕಾಗಿ 100 ಕೋಟಿಗೂ ಅಧಿಕ ಖರ್ಚಾಗಲಿದ್ದು, ಶೇ. 10 ರಷ್ಟು ರೆಡ್ಡಿ ಜನರು, ಇನ್ನುಳಿದದ್ದನ್ನು ಭಕ್ತರ ದೇಣಿಗೆಯಿಂದ ಪಡೆಯಲಾಗುವುದು. ಇನ್ನು ಹೆಚ್ಚಿನ ಜಾಗೆಯನ್ನು ನೀಡಿದರೇ ತೆಗೆದುಕೊಳ್ಳಲಾಗುವುದು. ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದು ಬರುವ ಭಕ್ತರಿಗೆ ಇದು ಅನುಕೂಲವಾಗಲಿದೆ ಎಂದರು.
ಮುಂದಿನ ಎರಡು ವರ್ಷದಲ್ಲಿ ತಿರುಪತಿ ಮಾದರಿಯಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ತಿರುಪತಿಯಂತೆ ಭಕ್ತರಿಗೆ ವಸತಿ, ನಿರಂತರ ಅನ್ನ ಪ್ರಸಾದ ವಿತರಣೆ ಸೌಲಭ್ಯ ಒದಗಿಸಲಾಗುತ್ತದೆ. ಟಿಟಿಡಿ ಸಂಸ್ಥೆಯಿಂದ ದೇವಸ್ಥಾನ ನಿರ್ಮಾಣ, ಪುನರುಜ್ಜೀವನಕ್ಕಾಗಿ 9000 ಕೋಟಿ ಮೀಸಲಿಟ್ಟಿದೆ. ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿಯಿಂದ ಶೇ.80 ರಷ್ಟು ಹಣ ಒದಗಿಸಲಿದೆ. ರೆಡ್ಡಿ ಸಂಘದಿಂದ ಶೇ.10 ರಷ್ಟು ಮತ್ತು ದಾನಿಗಳಿಂದ ಶೇ.10 ರಷ್ಟು ದೇಣಿಗೆ ಸಂಗ್ರಹಿಸಿ ನಿರ್ಮಾಣ ಎಂದರು.
ಕರ್ನಾಟಕ ರಾಜ್ಯ ರಡ್ಡಿ ಜನಸಂಘ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಮಾತನಾಡಿ, ಬೆಳಗಾವಿಯಲ್ಲಿ ಟಿಟಿಡಿ ವತಿಯಿಂದ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಬೆಳಗಾವಿ ರೆಡ್ಡಿ ಸಂಘದ ಸಹಕಾರ ಬಹಳ ದೊಡ್ಡದಾಗಿದೆ. ನಿಮ್ಮ ಸಹಕಾರ ಹೀಗೆ ಮುಂದುವರಿಯಬೇಕು ಎಂದು ವಿನಂತಿಸಿದರು.
ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ವಿಕ್ರಂ ಜೈನ್, ಅವಿನಾಶ ಪೋತದಾರ, ಸುರೇಶ ದೇಸಾಯಿ, ಮಂಜುನಾಥ ಕೇಸೂರ, ಪ್ರಕಾಶ ಕಕರೆಡ್ಡಿ, ಡಾ. ಗಿರೀಶ ಸೋನವಾಲ್ಕರ ಇತರರಿದ್ದರು.


