
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಟಿವಿಕೆ ಪಕ್ಷದ ಮುಖ್ಯಸ್ಥ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದರು. ಆದರೆ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲದ ಪತ್ರ ನೀಡದ ಕಾರಣ, ಇಂದು ನಡೆಯಬೇಕಿದ್ದ ಪ್ರಮಾಣವಚನ ಸಮಾರಂಭ ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದ ವಿಜಯ್ ಅವರಿಗೆ ಸದ್ಯಕ್ಕೆ ನಿರಾಸೆ ಎದುರಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವು 234 ಸ್ಥಾನಗಳ ಪೈಕಿ 108 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೂ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ಅವರ ಬಳಿ ಸದ್ಯ 116 ಶಾಸಕರ ಬೆಂಬಲ ಮಾತ್ರ ಇರುವುದರಿಂದ, ಇನ್ನೂ ಇಬ್ಬರು ಶಾಸಕರ ಕೊರತೆ ಎದುರಾಗಿದೆ. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಲಿಖಿತ ರೂಪದಲ್ಲಿ 118 ಶಾಸಕರ ಬೆಂಬಲ ನೀಡುವಂತೆ ಪಟ್ಟು ಹಿಡಿದಿರುವುದು ವಿಜಯ್ ಗೆ ಸಂಕಷ್ಟ ತಂದಿದೆ.
ಇದೇ ವೇಳೆ ಬೆಂಬಲ ನೀಡಬಹುದು ಎಂದು ನಿರೀಕ್ಷಿಸಲಾಗಿದ್ದ ಐಯುಎಂಎಲ್ ಮತ್ತು ಎಎಮ್ಎಂಕೆಯಂತಹ ಪಕ್ಷಗಳು ವಿಜಯ್ಗೆ ಕೈಕೊಟ್ಟಿವೆ. ತಾವು ಟಿವಿಕೆ ಮೈತ್ರಿಕೂಟದ ಭಾಗವಲ್ಲ ಎಂದು ಐಯುಎಂಎಲ್ ಸ್ಪಷ್ಟಪಡಿಸಿದ್ದರೆ, ಅತ್ತ ಎಐಎಡಿಎಂಕೆಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಎಎಮ್ಎಂಕೆಯ ಟಿಟಿವಿ ದಿನಕರನ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಇನ್ನು ಕಾಂಗ್ರೆಸ್ ತನ್ನ ಐವರು ಶಾಸಕರನ್ನು ಹೈದರಾಬಾದ್ನ ರೆಸಾರ್ಟ್ಗೆ ಸ್ಥಳಾಂತರಿಸಿರುವುದು ಕುತೂಹಲ ಮೂಡಿಸಿದೆ.




